Asianet Suvarna News Asianet Suvarna News

ಎಚ್ಚರ ತಪ್ಪಿದ್ರೆ ಕಾದಿದೆ ಆಪತ್ತು: ಕೊರೋನಾ ಸೋಂಕು ಮತ್ತೆ ಏರಿಕೆ..!

ಗುರುವಾರ 1446 ಹೊಸ ಕೇಸ್‌, 13 ಸಾವು| ನಿನ್ನೆ 894 ಜನ ಸೋಂಕಿಂದ ಗುಣಮುಖ| ಐಸಿಯುನಲ್ಲಿ ಸೋಂಕಿತರ ಸಂಖ್ಯೆ ಇಳಿಕೆ| ಬೆಂಗಳೂರು ನಗರ ಜಿಲ್ಲೆಯಲ್ಲಿ 6, ದಕ್ಷಿಣ ಕನ್ನಡ 2, ಬೆಂಗಳೂರು ಗ್ರಾಮಾಂತರ, ಧಾರವಾಡ, ಹಾಸನ, ಕೋಲಾರ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸಾವು| 

1446 New Corona Cases in Karnataka  grg
Author
Bengaluru, First Published Dec 4, 2020, 11:05 AM IST

ಬೆಂಗಳೂರು(ಡಿ.03):  ರಾಜ್ಯದಲ್ಲಿ ಗುರುವಾರ 1,446 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, 894 ಮಂದಿ ಗುಣಮುಖರಾಗಿದ್ದಾರೆ. 13 ಮಂದಿ ಅಸುನೀಗಿದ್ದಾರೆ. ಕಳೆದ ಮೂರು ದಿನಗಳಿಂದ ಹೊಸ ಸೋಂಕಿನ ಪ್ರಕರಣಗಳಲ್ಲಿ ಅಲ್ಪ ಪ್ರಮಾಣದ ಏರಿಕೆ ದಾಖಲಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 24,689ಕ್ಕೆ ಏರಿದೆ.

ಒಟ್ಟು 8.89 ಲಕ್ಷ ಜನರಲ್ಲಿ ಈವರೆಗೆ ಸೋಂಕು ದೃಢಪಟ್ಟಿದ್ದು, 8.52 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿನ ಗುಣಮುಖರ ಪ್ರಮಾಣ ಶೇ.95.95ರಷ್ಟಿದೆ. ಒಟ್ಟು 11,821 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈವರೆಗಿನ ಮರಣ ದರ ಶೇ.1.33ರಷ್ಟಿದೆ. ಗುರುವಾರ 1.08 ಲಕ್ಷ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ಒಟ್ಟು 1.14 ಕೋಟಿ ಕೊರೋನಾ ಪರೀಕ್ಷೆ ನಡೆಸಲಾಗಿದೆ.

ಕೊಪ್ಪಳ ’ಶೂನ್ಯ’ ಸಾಧನೆ!

ಕೊಪ್ಪಳದಲ್ಲಿ ಗುರುವಾರ ಒಂದೇ ಒಂದು ಹೊಸ ಪ್ರಕರಣ ದಾಖಲಾಗಿಲ್ಲ. ಅಷ್ಟೇ ಅಲ್ಲದೆ ಕೇವಲ 45 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಅತ್ಯಂತ ಕಡಿಮೆ ಸಕ್ರಿಯ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲಿದೆ. ರಾಮನಗರ ಜಿಲ್ಲೆ 53 ಸಕ್ರಿಯ ಪ್ರಕರಣಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಹಾವೇರಿಯಲ್ಲಿ ಜುಲೈ 14ರಂದು ಶೂನ್ಯ ಪ್ರಕರಣ ವರದಿಯಾಗಿತ್ತು. ಆ ಬಳಿಕ ವೈದ್ಯರ ಮುಷ್ಕರ ಸೇರಿದಂತೆ ಮತ್ತಿತರ ತಾಂತ್ರಿಕ ಕಾರಣಗಳಿಂದ ಕೆಲ ಜಿಲ್ಲೆಗಳಲ್ಲಿ ಒಂದೆರಡು ದಿನದ ಮಟ್ಟಿಗೆ ಶೂನ್ಯ ಪ್ರಕರಣ ವರದಿಯಾಗಿದ್ದನ್ನು ಹೊರತುಪಡಿಸಿ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿದಿರಲಿಲ್ಲ.

ನೈಟ್ ಕರ್ಫ್ಯೂ ಜಾರಿ, ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್ ; ಇಂದು ಹೊರಬೀಳಲಿದೆ ನಿರ್ಧಾರ

ಐಸಿಯುನಲ್ಲಿ ಸೋಂಕಿತರ ಸಂಖ್ಯೆ ಇಳಿಕೆ

ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣಿಸಿ ತೀವ್ರ ನಿಗಾ ವಿಭಾಗದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯಲ್ಲಿ ಸಹ ಗಣನೀಯ ಇಳಿಕೆಯಾಗಿದೆ. ಗುರುವಾರ 299 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನ.3ರಂದು 932 ಮಂದಿ, ನವೆಂಬರ್‌ 23ರಂದು 438 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರು ನಗರ ಜಿಲ್ಲೆಯಲ್ಲಿ 6, ದಕ್ಷಿಣ ಕನ್ನಡ 2, ಬೆಂಗಳೂರು ಗ್ರಾಮಾಂತರ, ಧಾರವಾಡ, ಹಾಸನ, ಕೋಲಾರ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ.

ಬೆಂಗಳೂರು ನಗರದಲ್ಲಿ 758, ಬಾಗಲಕೋಟೆ 7, ಬಳ್ಳಾರಿ 22, ಬೆಳಗಾವಿ 38, ಬೆಂಗಳೂರು ಗ್ರಾಮಾಂತರ 32, ಬೀದರ್‌ 12, ಚಾಮರಾಜ ನಗರ 13, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 11, ಚಿತ್ರದುರ್ಗ 40, ದಕ್ಷಿಣ ಕನ್ನಡ 35, ದಾವಣಗೆರೆ 23, ಧಾರವಾಡ 16, ಗದಗ 10, ಹಾಸನ 34, ಹಾವೇರಿ 4, ಕಲಬುರಗಿ 26, ಕೊಡಗು 7, ಕೋಲಾರ 32, ಮಂಡ್ಯ 75, ಮೈಸೂರು 53, ರಾಯಚೂರು 27, ರಾಮನಗರ 2, ಶಿವಮೊಗ್ಗ 20, ತುಮಕೂರು 68, ಉಡುಪಿ 26, ಉತ್ತರ ಕನ್ನಡ 20, ವಿಜಯಪುರ 12 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
 

Follow Us:
Download App:
  • android
  • ios