ಒಂದೇ ವಾರದಲ್ಲಿ ಕರ್ನಾಟಕದ ಡ್ಯಾಂಗಳಿಗೆ 119 ಟಿಎಂಸಿ ನೀರು
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಮಳೆಯ ಅಬ್ಬರ ಹೆಚ್ಚುತ್ತಿದೆ. ಮುಂಗಾರು ಆರಂಭವಾಗಿ ತಿಂಗಳಾದರೂ ನೀರಿನ ಒಳಹರಿವು ಇಲ್ಲದೆ ಖಾಲಿಯಾಗಿದ್ದ ಅಣೆಕಟ್ಟುಗಳು, ಇದೀಗ ಭರ್ತಿಯಾಗುವತ್ತ ಸಾಗಿವೆ. ಅದರಲ್ಲೂ ಪ್ರಮುಖ ಅಣೆಕಟ್ಟುಗಳಾದ ಕೃಷ್ಣರಾಜ ಸಾಗರ, ಆಲಮಟ್ಟಿ, ಹೊಸಪೇಟೆಯ ತುಂಗಭದ್ರಾ ಆಣೆಕಟ್ಟು ಸೇರಿದಂತೆ ಹಲವು ಅಣೆಕಟ್ಟುಗಳಲ್ಲಿ ನೀರಿನ ಮಟ್ಟಶೇ.50 ದಾಟಿದೆ.
ಬೆಂಗಳೂರು(ಜು.27): ಭಾರೀ ಮಳೆಯಿಂದಾಗಿ ರಾಜ್ಯದ 22 ಅಣೆಕಟ್ಟುಗಳಲ್ಲಿ 324.87 ಟಿಎಂಸಿ ನೀರು ಶೇಖರಣೆಯಾಗಿದೆ. ಆ ಮೂಲಕ ಒಂದು ವಾರದಲ್ಲೇ 119.05 ಟಿಎಂಸಿ ಹೆಚ್ಚುವರಿ ನೀರು ಡ್ಯಾಂಗಳಿಗೆ ಹರಿದು ಬಂದಿದೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಮಳೆಯ ಅಬ್ಬರ ಹೆಚ್ಚುತ್ತಿದೆ. ಮುಂಗಾರು ಆರಂಭವಾಗಿ ತಿಂಗಳಾದರೂ ನೀರಿನ ಒಳಹರಿವು ಇಲ್ಲದೆ ಖಾಲಿಯಾಗಿದ್ದ ಅಣೆಕಟ್ಟುಗಳು, ಇದೀಗ ಭರ್ತಿಯಾಗುವತ್ತ ಸಾಗಿವೆ. ಅದರಲ್ಲೂ ಪ್ರಮುಖ ಅಣೆಕಟ್ಟುಗಳಾದ ಕೃಷ್ಣರಾಜ ಸಾಗರ, ಆಲಮಟ್ಟಿ, ಹೊಸಪೇಟೆಯ ತುಂಗಭದ್ರಾ ಆಣೆಕಟ್ಟು ಸೇರಿದಂತೆ ಹಲವು ಅಣೆಕಟ್ಟುಗಳಲ್ಲಿ ನೀರಿನ ಮಟ್ಟಶೇ.50 ದಾಟಿದೆ. ಅಲ್ಲದೆ, ವಾರದ ಹಿಂದೆ (ಜು. 20) 205.82 ಟಿಎಂಸಿಯಿದ್ದ ನೀರಿನ ಮಟ್ಟಈಗ (ಜು. 26) 324.77 ಟಿಎಂಸಿಗೆ ಏರಿಕೆಯಾಗಿದೆ. ಆ ಮೂಲಕ 7 ದಿನಗಳಲ್ಲಿ ಅಣೆಕಟ್ಟುಗಳಿಗೆ 119.05 ಟಿಎಂಸಿ ನೀರು ಹರಿದು ಬಂದಿದೆ. ಅದರಲ್ಲೂ ಜುಲೈ 24 ಮತ್ತು 25ರ ನಡುವಣ 24 ಗಂಟೆಗಳಲ್ಲಿ ಅಣೆಕಟ್ಟುಗಳಲ್ಲಿನ ನೀರಿನ ಶೇಖರಣೆ ಪ್ರಮಾಣ 32 ಟಿಎಂಸಿ ಹೆಚ್ಚಾಗಿದೆ.
ಕರ್ನಾಟಕದಲ್ಲಿ ಮಳೆಗೆ ಮತ್ತೆ ಮೂರು ಬಲಿ: ಕಬಿನಿ ಭರ್ತಿ
ಆ ಪೈಕಿ ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿನ 16 ಅಣೆಕಟ್ಟುಗಳಲ್ಲಿ ಜು. 20ರಂದು 148 ಟಿಎಂಸಿ ನೀರಿತ್ತು. ಅದೇ ಜು. 26ಕ್ಕೆ ನೀರಿನ ಪ್ರಮಾಣ 240 ಟಿಎಂಸಿಗೆ ಏರಿಕೆಯಾಗಿದೆ. ಹಾಗೆಯೇ ಕಾವೇರಿ ಕಣಿವೆ ವ್ಯಾಪ್ತಿಯ 4 ಆಣೆಕಟ್ಟುಗಳಲ್ಲಿ 51 ಟಿಎಂಸಿಯಿಂದ 77.51 ಟಿಎಂಸಿ ಹಾಗೂ ಗೋದಾವರಿ ಕಣಿವೆ ವ್ಯಾಪ್ತಿಯ 2 ಆಣೆಕಟ್ಟುಗಳಲ್ಲಿನ ನೀರಿನ ಶೇಖರಣೆ ಪ್ರಮಾಣ 5.67 ಟಿಎಂಸಿಯಿಂದ 7.08 ಟಿಎಂಸಿಗೆ ಹೆಚ್ಚಳವಾಗಿದೆ.
ಕಳೆದ ವರ್ಷಕ್ಕಿಂತ 201 ಟಿಎಂಸಿ ಕಡಿಮೆ:
ರಾಜ್ಯದಲ್ಲಿ ಕಳೆದ ವರ್ಷ ಮುಂಗಾರು ಪೂರ್ವದಿಂದಲೇ ಭಾರಿ ಮಳೆ ಸುರಿದಿತ್ತು. ಜೂನ್ ತಿಂಗಳ ಆರಂಭದಿಂದಲೇ ರಾಜ್ಯ ಅಣೆಕಟ್ಟುಗಳಿಗೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಹೀಗಾಗಿ ಬಹುತೇಕ ಎಲ್ಲ ಅಣೆಕಟ್ಟುಗಳು ಭರ್ತಿಯಾಗಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಈ ಬಾರಿ ಮುಂಗಾರು ಆರಂಭದಲ್ಲಿ ದುರ್ಬಲವಾಗಿದ್ದ ಕಾರಣ ಅಣೆಕಟ್ಟುಗಳಿಗೆ ಒಳ ಹರಿವು ಸಮರ್ಪಕವಾಗಿರಲಿಲ್ಲ. ಹೀಗಾಗಿ ಮುಂಗಾರು ಆರಂಭವಾಗಿ ಎರಡು ತಿಂಗಳಾಗುತ್ತಿದ್ದರೂ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿಲ್ಲ. ಕಳೆದ ವರ್ಷಕ್ಕೆ (2022)ಕ್ಕೆ ಹೋಲಿಸಿದರೆ ಸದ್ಯ ಅಣೆಕಟ್ಟುಗಳಲ್ಲಿ ಶೇಖರಣೆಯಾಗಿರುವ ನೀರಿನ ಪ್ರಮಾಣ ಕಡಿಮೆಯಿದೆ.
ಕಳೆದ ವರ್ಷ ಜುಲೈ 26ರಂದು ರಾಜ್ಯದ ಎಲ್ಲ ಡ್ಯಾಂಗಳಲ್ಲಿ 525.86 ಟಿಎಂಸಿ ನೀರು ಶೇಖರಣೆಯಾಗಿತ್ತು. ಆದರೆ, ಈ ಬಾರಿ 324.87 ಟಿಎಂಸಿ ಮಾತ್ರ ನೀರು ಶೇಖರಣೆಯಾಗಿದೆ. ಇದನ್ನು ಗಮನಿಸಿದರೆ ಕಳೆದ ವರ್ಷಕ್ಕಿಂತ 201.99 ಟಿಎಂಸಿ ನೀರು ಕಡಿಮೆ ಶೇಖರಣೆಯಾಗಿದೆ. ಅದೇ 2021ರ ಜುಲೈ 26ರಂದು 452.93 ಟಿಎಂಸಿ ನೀರು ಶೇಖರಣೆಯಾಗಿತ್ತು.
ತಡರಾತ್ರಿ ಬಂಡೆಕಲ್ಲು ಸಮೇತ ಕುಸಿದ ಗುಡ್ಡ; ಅದೃಷ್ಟವಶಾತ್ ಮಧ್ಯಾಹ್ನವೇ ಮನೆ ಖಾಲಿ ಮಾಡಿದ್ದ ಕುಟುಂಬ!
ಬರದಿಂದ ಪ್ರವಾಹ ಪರಿಸ್ಥಿತಿ
10 ದಿನಗಳ ಹಿಂದಿನವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಣಿಸಿಕೊಂಡು ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಬಿತ್ತನೆ ಕಾರ್ಯವೂ ಸಮರ್ಪಕವಾಗಿ ನಡೆದಿರಲಿಲ್ಲ. ಕಳೆದ 10 ದಿನಗಳ ಹಿಂದಿನ ಮಾಹಿತಿಯಂತೆ, 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಬೇಕಿದ್ದ ಜಾಗದಲ್ಲಿ ಕೇವಲ 1.14 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿತ್ತು. ಮಲೆನಾಡಿನಂತಹ ಪ್ರದೇಶದಲ್ಲೇ ಬಿತ್ತನೆ ಸಮರ್ಪಕವಾಗಿ ಆಗಿರಲಿಲ್ಲ. ಇದೀಗ ರಾಜ್ಯದೆಲ್ಲೆಡೆ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಪ್ರಮುಖ ಡ್ಯಾಂಗಳ ನೀರಿನ ಮಟ್ಟ
ಕೆಆರ್ಎಸ್: 26.81 ಟಿಎಂಸಿ
ಟಿಬಿ ಡ್ಯಾಂ: 36.53 ಟಿಎಂಸಿ
ಆಲಮಟ್ಟಿ: 71.81 ಟಿಎಂಸಿ
ವಾಣಿವಿಲಾಸ: 24.76 ಟಿಎಂಸಿ
ಹೇಮಾವತಿ: 25.93 ಟಿಎಂಸಿ