ರಾಜ್ಯದಲ್ಲಿ 100 ಎಕರೆ ಜಾಗದಲ್ಲಿ ಒಂದು ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಪಶುಲೋಕ ಪಶು ತಳಿ ಅಭಿವೃದ್ಧಿ ಮತ್ತು ಸಂವರ್ಧನೆ ಕೇಂದ್ರದ  ಬಗ್ಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿಕೆ

ಹಾವೇರಿ (ಆ.30):  ರಾಜ್ಯದಲ್ಲಿ 100 ಎಕರೆ ಜಾಗದಲ್ಲಿ ಒಂದು ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಪಶುಲೋಕ (ಪಶು ತಳಿ ಅಭಿವೃದ್ಧಿ ಮತ್ತು ಸಂವರ್ಧನೆ ಕೇಂದ್ರ) ನಿರ್ಮಿಸುವ ಚಿಂತನೆ ಇದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ.

ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶುಲೋಕದಿಂದ ಪ್ರವಾಸೋದ್ಯಮ, ಪಶುಗಳ ವಿವಿಧ ತಳಿಗಳ ಅಧ್ಯಯನದ ಜತೆಗೆ ತಳಿಗಳನ್ನು ಸಂರಕ್ಷಣೆ ಮಾಡುವುದು, ಪ್ರಾಣಿಗಳ ಬಗ್ಗೆ ಪ್ರತಿಯೊಬ್ಬರಿಗೂ ಸಂಪೂರ್ಣ ಮಾಹಿತಿ ನೀಡುವಂತೆ ಮಾಡಲಾಗುವುದು ಎಂದರು.

2021-22ರ ಬಜೆಟ್‌ನಲ್ಲಿ ಜಿಲ್ಲೆಗೊಂದು ಗೋಶಾಲೆ ಪ್ರಕಟಿಸಲಾಗಿದೆ. 22 ಜಿಲ್ಲೆಗಳಲ್ಲಿ ಗೋಶಾಲೆಗೆ ಸ್ಥಳ ಗುರುತಿಸಲಾಗಿದೆ. ಪ್ರತಿ ಜಿಲ್ಲೆಯ ಗೋಶಾಲೆಯಲ್ಲಿ 6ರಿಂದ 7 ಸಾವಿರ ಗೋವುಗಳನ್ನು ನೋಡಿಕೊಳ್ಳಬಹುದು. ಆಹಾರ, ನೀರು ನೀಡಿ ಗೋವುಗಳನ್ನು ಆರೈಕೆ ಮಾಡಲಾಗುವುದು. ಈಗಾಗಲೇ ರಾಜ್ಯದಲ್ಲಿ 188 ಖಾಸಗಿ ಗೋಶಾಲೆಗಳು ನೋಂದಣಿಯಾಗಿವೆ. ಇವುಗಳಿಗೆ ಅನುದಾನ ನೀಡಲಾಗುತ್ತಿದೆ. ಮೊದಲು ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಗೋಶಾಲೆ ಪ್ರಾರಂಭ ಮಾಡುವ ಉದ್ದೇ​ಶ​ವಿದೆ. ವಯಸ್ಸಾದ ಹಸುಗಳನ್ನು ನಮ್ಮ ಗೋಶಾಲೆಗೆ ಕಳಿಸಿ ಎಂದು ಮನವಿ ಮಾಡಿ​ದ​ರು.

ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ತಪ್ಪೇನು?: ಬೈರತಿ

ಕೇಂದ್ರ ಸರ್ಕಾರದ ಯೋಜನೆಯಡಿ ರೈತರಿಗೆ ಅನುಕೂಲವಾಗುವಂತಹ ನಾರಿ ಸುವರ್ಣ ಕುರಿ ತಳಿ ಅಭಿವೃದ್ಧಿ, ನಂದಿನಿ ದುರ್ಗ ಮೇಕೆ ಅಭಿವೃದ್ಧಿ, ಪಶು ಚಿಕಿತ್ಸೆ, ಔಷಧ ಕೇಂದ್ರಗಳು ಅಮೃತ ಶಿಲಾ ಯೋಜನೆಯಲ್ಲಿ ರೈತರಿಗೆ ಹೋರಿ ಕರು ವಿತರಣೆ, ದೇಶಿ ತಳಿಗಳ ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ ಎಂದರು.

ಬಕ್ರೀದ್‌ ವೇಳೆ 7 ಸಾವಿರ ಗೋವು ರಕ್ಷಣೆ: ಚವ್ಹಾಣ್‌

ಹಾವೇರಿ: ಶೀಘ್ರದಲ್ಲೇ ಗೋ ಹತ್ಯೆ ನಿಷೇಧ ಕಾನೂನು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ತಗೆ​ದು​ಕೊ​ಳ್ಳು​ತ್ತೇವೆ. ಪ್ರತಿ ಜಿಲ್ಲೆಗೆ ಹೋಗಿ ಸಭೆ ನಡೆಸುವೆ. ಅಧಿಕಾರಿಗಳು ಗ್ರಾಮಗಳಿಗೆ ಹೋಗಿ ಗ್ರಾಮಸಭೆ ಮಾಡಿ ಗ್ರಾಮಸ್ಥರಿಗೆ ಹೇಳಬೇಕು. ಗೋ ಮಾತೆಯ ರಕ್ಷಣೆ ಆಗಬೇಕು. ಬಿಗಿಯಾದ ಕಾನೂನು ಜಾರಿಯಾಗಿದೆ. ಬಕ್ರೀದ್‌ ಸಮಯದಲ್ಲಿ ಎಲ್ಲ ಎಸ್‌ಪಿಗಳ ಜತೆ ಚರ್ಚೆ ಮಾಡಿದ್ದೆ. ಬಕ್ರೀದ್‌ ಸಂದರ್ಭದಲ್ಲಿ ಆರೇಳು ಸಾವಿರ ಗೋವುಗಳ ರಕ್ಷಣೆ ಮಾಡಿದ್ದೇವೆ ಎಂದು ಸಚಿವ ಪ್ರಭು ಚವ್ಹಾಣ್‌ ವಿವ​ರಿ​ಸಿ​ದ​ರು.