ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ವೃದ್ಧ ರೈತ ರಾಜಯ್ಯ ಅವರ ಮಾವಿನ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ದುರ್ಘಟನೆಯಲ್ಲಿ 150 ತೆಂಗು, 100ಕ್ಕೂ ಹೆಚ್ಚು ಮಾವಿನ ಮರಗಳು ಹಾಗೂ ಕೃಷಿ ಉಪಕರಣಗಳು ಸುಟ್ಟು ಕರಕಲಾಗಿದ್ದು, ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ರಾಮನಗರ (ಏ.28): ಜಿಲ್ಲೆಯ ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮದಲ್ಲಿ ಘೋರ ಕೃತ್ಯವೊಂದು ನಡೆದಿದೆ. ಗ್ರಾಮದ ವೃದ್ಧ ರೈತ ರಾಜಯ್ಯ ಎಂಬುವವರಿಗೆ ಸೇರಿದ ಮಾವಿನ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಫಲವತ್ತಾದ ತೋಟವು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ವರ್ಷಗಳ ಕಾಲ ಪೋಷಿಸಿದ್ದ ಹಸಿರು ತೋಟವು ಕಿಡಿಗೇಡಿಗಳು ಹೊತ್ತಿಸಿದ ಕಿಡಿಗೆ ಸುಟ್ಟು ಬೂದಿಯಾಗಿರುವುದು ರೈತ ಕುಟುಂಬವನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.

Add Asianetnews Kannada as a Preferred SourcegooglePreferred

150 ತೆಂಗು 100ಕ್ಕೂ ಹೆಚ್ಚು ಮಾವಿನ ಮರಗಳು ಸುಟ್ಟು ಕರಕಲು!

ವೃದ್ಧ ರೈತ ತೋಟದಲ್ಲಿ ಬೆಳೆದಿದ್ದ 150 ತೆಂಗು, 100ಕ್ಕೂ ಹೆಚ್ಚು ಮಾವಿನ ಮರಗಳು ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿವೆ. ಕೇವಲ ಬೆಳೆ ಮಾತ್ರವಲ್ಲದೆ, ಕೃಷಿ ಚಟುವಟಿಕೆಗೆ ಬಳಸುತ್ತಿದ್ದ ನೀರೆತ್ತುವ ಮೋಟಾರ್‌ಗಳು ಮತ್ತು ಪೈಪ್‌ಲೈನ್‌ಗಳು ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣವಾಗಿ ನಾಶವಾಗಿವೆ. ಕಣ್ಣೆದುರೇ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಪರಿಸ್ಥಿತಿ ಕಂಡು ರೈತ ರಾಜಯ್ಯ ಕಣ್ಣೀರು ಹಾಕುತ್ತಿದ್ದಾರೆ..

ಅಂದಾಜಿನ ಪ್ರಕಾರ, ಈ ಬೆಂಕಿ ಅವಘಡದಿಂದ ಸುಮಾರು 3.5 ಲಕ್ಷ ರೂಪಾಯಿ ಮೌಲ್ಯದ ಬೆಳೆ ಹಾಗೂ ಉಪಕರಣಗಳು ನಷ್ಟವಾಗಿದೆ. ಯಾರೋ ಕಿಡಿಗೇಡಿಗಳು ಹಗೆತನದಿಂದ ಅಥವಾ ದುರುದ್ದೇಶದಿಂದ ತೋಟಕ್ಕೆ ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ರೈತ ದಂಪತಿ ಸ್ಥಿತಿ ನೋಡಿ ಅಯ್ಯೋ ಅನಿಸುವಂತಿದೆ. ರಾತ್ರಿ ಹಗಲೆನ್ನದೆ ಕಷ್ಟಪಟ್ಟು ಬೆಳೆಸಿದ ತೋಟ ಈಗ ಅಕ್ಷರಶಃ ಹೆಣ ಸುಟ್ಟ ಸ್ಮಶಾನದಂತಾಗಿದೆ

ಘಟನೆಗೆ ಸಂಬಂಧಿಸಿದಂತೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತವು ಶೀಘ್ರವಾಗಿ ನಷ್ಟ ಸಮೀಕ್ಷೆ ನಡೆಸಿ ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂತ್ರಸ್ತ ರೈತ ರಾಜಯ್ಯ ಅವರು ಮನವಿ ಮಾಡಿದ್ದಾರೆ.