ಬಾಬ್ರಿ ಮಸೀದಿ ಧ್ವಂಸ ಖಂಡಿಸಿದ್ದ ಶ್ರೀಗಳು!
ತ್ರಿವಿಧ ದಾಸೋಹಿ, ಬಸವಣ್ಣನವರ ತತ್ವ 'ಕಾಯಕವೇ ಕೈಲಾಸ'ವನ್ನು ಚಾಚೂ ತಪ್ಪದೇ ಪಾಲಿಸಿದ ಶತಾಯುಷಿ, ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಆದರೆ ಅವರ ಜೀವನ ಇತರರಿಗೆ ಸ್ಪೂರ್ತಿ ನೀಡುವಂತಹುದ್ದು. ಅತ್ಯಂತ ಸರಳ ಹಾಗೂ ಸಾರ್ಥಕ ಜೀವನ ನಡೆಸಿ ಹಲವರಿಗೆ ಭವಿಷ್ಯ ಕಲ್ಪಿಸಿದ ನಡೆದಾಡುವ ದೇವರ, ನೀವು ತಿಳಿಯಲೇಬೇಕಾದ 10 ಆಸಕ್ತಿಕರ ಸಂಗತಿಗಳು
1. 1907ರ ಏಪ್ರಿಲ್ 1 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ರೈತ ಕುಟುಂದಲ್ಲಿ ಜನಿಸಿದ ಶಿವಣ್ಣ. 1930ರಲ್ಲಿ ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಶಿವಕುಮಾರ ಸ್ವಾಮೀಜಿಗಳು. ಜ.11ರಂದು ಶ್ರೀ ಉದ್ಧಾನ ಶಿವಯೋಗಿ ಸ್ವಾಮೀಜಿ ಲಿಂಗೈಕ್ಯ, 1941ರಲ್ಲೇ ಮಠಾಧ್ಯಕ್ಷರಾಗಿ ಶಿವಕುಮಾರ ಸ್ವಾಮೀಜಿ ಅಧಿಕಾರ ಸ್ವೀಕಾರ.
2. ಶಿವಕುಮಾರ ಸ್ವಾಮೀಜಿಗಳು ಸುಮಾರು 120ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಇಲ್ಲಿ ಸಾಂಪ್ರದಾಯಿಕ ಭಾಷೆಯಾದ ಸಂಸ್ಕೃತ ಸೇರಿದಂತೆ ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲಾ ಧರ್ಮ ಹಾಗೂ ಜಾತಿಯನ್ನು ಸಮನಾಗಿ ಕಾಣುವ ಹಾಗೂ ಗೌರವಿಸುವ ಶ್ರೀಗಳನ್ನು ಕಂಡರೆ ಎಲ್ಲಾ ವರ್ಗದ ಜನರಿಗೂ ಅಚ್ಚುಮೆಚ್ಚು.
'ಕಾಯಕಯೋಗಿ'ಯ 15 ನುಡಿಮುತ್ತುಗಳು: ಪಾಲಿಸಿದರೆ ಕೈಲಾಸವೇ ನಮ್ಮದು
3. ತ್ರಿವಿಧ ದಾಸೋಹಿಯಾಗಿದ್ದ ಶ್ರಿಗಳು, ಅನ್ನದಾನ, ಅಕ್ಷರ ದಾನ ಹಾಗೂ ಆಶ್ರಯ ದಾನದ ಗುರಿ ಹೊಂದಿದ್ದರು. ಇದರಂತೆ ಸುಮಾರು 9000 ಬಡ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಶಿಕ್ಷಣ, ಆಹಾರ ಹಾಗೂ ಆಶ್ರಯ ನೀಡುವಷ್ಟರ ಮಟ್ಟಿಗೆ ಸಿದ್ಧಗಂಗೆಯನ್ನು ಅಭಿವೃದ್ಧಿಪಡಿಸಿದ್ದರು.
4. ಅತ್ಯಂತ ಜಾಣ ವಿದ್ಯಾರ್ಥಿಯಾಗಿದ್ದ ಸಿದ್ಧಗಂಗಾ ಶ್ರೀಗಳು ಕನ್ನಡ, ಸಂಸ್ಕೃತ ಹಾಗೂ ಇಂಗ್ಲೀಷ್ ಈ ಮೂರು ಭಾಷೆಗಳನ್ನು ಅತ್ಯಂತ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅಲ್ಲದೇ ಶ್ರೀ ಮಠದ SSLC ವಿದ್ಯಾರ್ಥಿಗಳಿಗೆ ತಾವೇ ಖುದ್ದಾಗಿ ಪಾಠ ಹೇಳಿಕೊಡುತ್ತಿದ್ದರು.
ನಡೆದಾಡುವ ದೇವರ ಮಾತೇ ಮಾಣಿಕ್ಯ....
5. ತಮ್ಮ ಸಮಾಜಮುಖಿ ಹಾಗೂ ಮಾನವೀಯ ಸೇವೆಗಾಗಿ 1965ರಲ್ಲಿ ಶ್ರೀಗಳಿಗೆ ಸಾಹಿತ್ಯ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. 11 ವರ್ಷಗಳ ಹಿಂದೆ, ಜನ್ಮ ಶತಮಾನೋತ್ಸವದಂದು ಕರ್ನಾಟಕ ಸರ್ಕಾರವು ಸಿದ್ಧಗಂಗಾ ಶ್ರೀಗಳಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ ನೀಡಿ ಗೌರವಿಸಿತು. ಕೇಂದ್ರ ಸರ್ಕಾರವೂ ಶ್ರೀಗಳಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
6. 'ವಿಶ್ವದೆಲ್ಲೆಡೆ ಅಶಾಂತಿಯ ವಾತಾವರಣ ನಿರ್ಮಾಣವಾದಾಗ, ಜಗತ್ತಿನಾದ್ಯಂತ ಶಾಂತಿ ಪಸರಿಸುವ ಸಾಮರ್ಥ್ಯ ಭಾರತಕ್ಕಿದೆ' ಎಂದು ಶ್ರೀಗಳು ಹಲವಾರು ಬಾರಿ ಹೇಳಿಕೊಂಡಿದ್ದರು.
ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನದ ಫೋಟೋಗಳು...
7. ಶಿವಕುಮಾರ ಸ್ವಾಮೀಜಿಗಳ ಶ್ರೀ ಮಠದಲ್ಲಿ ಏಕಕಾಲಕ್ಕೆ 9000ಕ್ಕೂ ಅಧಿಕ ಬಡ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಜಾತಿ, ಧರ್ಮದ ಅಡೆ ತಡೆಗಳಿಲ್ಲದೆ ಶಿಕ್ಷಣ ಪಡೆಯುತ್ತಿದ್ದಾರೆ. ಜೀವನ ಸಾಗಿಸಲು ಪ್ರಾಥಮಿಕವಾಗಿ ಬೇಕಾಗುವ ಆಹಾಯ, ಆಶ್ರಯ ಹಾಗೂ ಅಕ್ಷರ ಜ್ಷಾನವನ್ನು ಇಲ್ಲಿ ಉಚಿತವಾಗಿಯೇ ನೀಡಿ ವಿದ್ಯಾರ್ಥಿಗಳನ್ನು ಸಬಲರನ್ನಾಗಿಸುತ್ತಾರೆ. ಇಂದು ವಿಶ್ವದ ವಿವಿಧ ಭಾಗಗಳಲ್ಲಿ ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ.
8. ಪ್ರತಿಯೊಂದು ಚುನಾವಣೆಗೂ ಮೊದಲು ಕರ್ನಾಟಕದ ರಾಜಕೀಯ ಪಕ್ಷಗಳನ್ನು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದನ್ನು ಒಂದು ನಿಯಮದಂತೆ ಪಾಲಿಸುತ್ತಾರೆ. ಆದರೆ ಜಾತ್ಯಾತೀತ ನಿಲುವನ್ನು ಬೆಂಬಲಿಸುತ್ತಿದ್ದ ಶ್ರೀಗಳು, ರಾಜಕೀಯದಿಂದ ದೂರ ಉಳಿದಿದ್ದಾರೆ. ಆದರೆ ತಮ್ಮ ಶ್ರೀ ಕ್ಷೇತ್ರಕ್ಕೆ ಬರುವ ಎಲ್ಲಾ ರಾಜಕೀಯ ನಾಯಕರಿಗೂ ಪಕ್ಷ ಬೇಧವಿಲ್ಲದೇ ಹರಸಿ, ಆಶೀರ್ವದಿಸಿ ಕಳುಹಿಸಿಕೊಡುತ್ತಿದ್ದರು.
ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು-ಮೆಲುಕು
9. ಬಾಬ್ರಿ ಮಸೀದಿ ಧ್ವಂಸಗೊಳಿಸಿದಾಗ ಇಡೀ ದೇಶದೆಲ್ಲೆಡೆ ಕೋಮು ಧಂಗೆಗಳು ನಡೆದು, ಹಿಂಸಾಚಾರಗಳಾಗಿ ಅಹಿತಕರ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶ್ರೀಗಳು ಬಾಬ್ರಿ ಮಸೀದಿ ಧ್ವಂಸವನ್ನು ಖಂಡಿಸಿದ್ದರು.
10. 2006ರ ಏಪ್ರಿಲ್ 8ರಂದು ಜನಪ್ರಿಯ ರಾಷ್ಟ್ರಪತಿ ಎ. ಪಿ. ಜೆ ಅಬ್ದುಲ್ ಕಲಾಂ ಶ್ರೀಗಳ ಸಮಾಜಮುಖಿ ಸೇವೆಯನ್ನು ಹಾಡಿ ಹೊಗಳುತ್ತಾ, ಜಗತ್ತಿನಲ್ಲಿ ಶಾಂತಿ ನಿರ್ಮಿಸಲು ಸಿದ್ಧಗಂಗಾ ಶ್ರೀಗಳು 76ವರ್ಷಗಳ ಕಠಿಣ ತಪಸ್ಸು ಮಾಡಿದ್ದಾರೆ ಎಂದಿದ್ದರು.