Asianet Suvarna News Asianet Suvarna News

ಕರ್ನಾಟಕದ ಡ್ಯಾಂಗಳು ಖಾಲಿ: ಕುಡಿವ ನೀರಿಗೂ ಸಮಸ್ಯೆ..!

10 ಜಲಾಶಯಗಳಲ್ಲಿ ನೀರು ಬರಿದು ಕುಡಿವ ನೀರಿಗೂ ಸಮಸ್ಯೆ ಆತಂಕ ರಾಜ್ಯದ ಡ್ಯಾಂಗಳು ಖಾಲಿ!, ತುಂಗಭದ್ರೆ, ಲಿಂಗನಮಕ್ಕಿಯಲ್ಲಿ 10 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ನೀರು ಸಂಗ್ರಹ, ಆಲಮಟ್ಟಿಯಲ್ಲಿ 7 ವರ್ಷದಲ್ಲೇ ಕನಿಷ್ಠ, ಕೆಆರ್‌ಎಸ್‌ನಲ್ಲಿ 5 ವರ್ಷದಲ್ಲೇ ಕಡಿಮೆ ನೀರು
 

10 Dams Drained in Karnataka grg
Author
First Published Jun 9, 2023, 4:22 AM IST

ಬೆಂಗಳೂರು(ಜೂ.09): ಮುಂಗಾರು ಮಳೆ ವಿಳಂಬದಿಂದಾಗಿ ರಾಜ್ಯದ 10 ಅಣೆಕಟ್ಟುಗಳು ಬರಿದಾಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಜತೆಗೆ ಜಲಸಂಘರ್ಷ ಆರಂಭವಾಗುವ ಆತಂಕ ಉಂಟಾಗಿದೆ. ತುಂಗಭದ್ರಾ, ಲಿಂಗನಮಕ್ಕಿ ಜಲಾಶಯಗಳ ಮಟ್ಟ10 ವರ್ಷದ ಕನಿಷ್ಠಕ್ಕೆ ಕುಸಿದಿದ್ದರೆ, ಆಲಮಟ್ಟಿಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 7 ವರ್ಷ ಹಾಗೂ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್‌)ದಲ್ಲಿನ ನೀರಿನ ಮಟ್ಟ5 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕಬಿನಿ, ಹಾರಂಗಿ, ಬಸವಸಾಗರ, ಘಟಪ್ರಭಾ, ಮಲಪ್ರಭಾ, ವಾಣಿವಿಲಾಸ ಸಾಗರಗಳಲ್ಲಿಯೂ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡು ಬಂದಿದೆ.

ಕೆಆರ್‌ಎಸ್‌ನಲ್ಲಿ ಕೇವಲ 3 ಟಿಎಂಸಿಯಷ್ಟುಮಾತ್ರ ನೀರು ಬಳಕೆಗೆ ಲಭ್ಯವಿದೆ. ಇದರ ಜತೆಗೆ ಜೂನ್‌ ಕೋಟಾದಡಿ ತಮಿಳುನಾಡಿಗೆ 21 ಟಿಎಂಸಿ ನೀರು ಹರಿಸಬೇಕಿದೆ. ಮಳೆ ಮತ್ತಷ್ಟುವಿಳಂಬವಾದರೆ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವುದರ ಜತೆಗೆ ತಮಿಳುನಾಡಿನ ಜತೆ ಜಲಸಂಘರ್ಷವೂ ಸೃಷ್ಟಿಯಾಗುವ ಭೀತಿ ವ್ಯಕ್ತವಾಗುತ್ತಿದೆ.

ಕರ್ನಾಟಕಕ್ಕೆ ನಾಡಿದ್ದು ಮುಂಗಾರು ಪ್ರವೇಶ: ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ

ಬರಿದಾದ ತುಂಗಭದ್ರೆ:

ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಕೇವಲ 5 ಟಿಎಂಸಿ (ಗರಿಷ್ಠ 105 ಟಿಎಂಸಿ) ನೀರಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿಯೇ ಅತಿ ಕನಿಷ್ಠ ಮಟ್ಟಇದಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬಳ್ಳಾರಿ,

ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಕೊರತೆ ಎದುರಾಗುವ ಆತಂಕವಿದೆ. ಕಳೆದ ಬಾರಿ ಇದೇ ವೇಳೆಗೆ ಡ್ಯಾಂನಲ್ಲಿ 30 ಟಿಎಂಸಿಯಷ್ಟುನೀರಿತ್ತು.

ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ1748 (ಗರಿಷ್ಠ 1818) ಅಡಿಗಳಿಗೆ ಕುಸಿದಿದೆ. 151 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ 16 ಟಿಎಂಸಿಯಷ್ಟುನೀರಿನ ಸಂಗ್ರಹವಿದೆ. ಇದು 10 ವರ್ಷಗಳಲ್ಲೇ ಕನಿಷ್ಠವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 1756 ಅಡಿಗಳಷ್ಟುನೀರಿತ್ತು. 24 ಟಿಎಂಸಿ ಸಂಗ್ರಹವಾಗಿತ್ತು.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ507 (ಗರಿಷ್ಠ 519) ಮೀಟರ್‌ಗಳಿಗೆ ಇಳಿದಿದ್ದು, ಇದು ಕಳೆದ 7 ವರ್ಷಗಳಲ್ಲಿಯೇ ಅತಿ ಕನಿಷ್ಠ ಮಟ್ಟವಾಗಿದೆ. 123 ಟಿಎಂಸಿ ನೀರು ಸಾಮರ್ಥ್ಯದ ಜಲಾಶಯದಲ್ಲಿ 3 ಟಿಎಂಸಿಗಳಷ್ಟುನೀರಿನ ಸಂಗ್ರಹವಿದೆ.

ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ81 (ಗರಿಷ್ಠ 124) ಅಡಿಗಳಿಗೆ ಕುಸಿದಿದ್ದು, ಇದು ಕಳೆದ 5 ವರ್ಷಗಳಲ್ಲಿಯೇ ಅತಿ ಕನಿಷ್ಠ ಮಟ್ಟವಾಗಿದೆ. 49 ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ 11 ಟಿಎಂಸಿ ನೀರಿದ್ದು, ಆ ಪೈಕಿ 3 ಟಿಎಂಸಿಯಷ್ಟುನೀರು ಮಾತ್ರ ಬಳಕೆಗೆ ಸಿಗಲಿದೆ.

ಕೃಷ್ಣಾ ಹಾಗೂ ಭೀಮಾ ನದಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದಲ್ಲಿನ ನೀರಿನ ಮಟ್ಟದಲ್ಲಿ ಇಳಿಕೆಯಾಗಿದ್ದು, ಪ್ರಸ್ತುತ 15 ಟಿಎಂಸಿಯಷ್ಟುಮಾತ್ರ ನೀರಿನ ಸಂಗ್ರಹವಿದೆ.

ಹಾರಂಗಿಯಲ್ಲೂ ಕುಸಿತ:

ಕೊಡಗಿನ ಹಾರಂಗಿಯಲ್ಲಿಯೂ ನೀರಿನ ಮಟ್ಟ2819 (ಗರಿಷ್ಠ 2859) ಅಡಿಗಳಿಗೆ ಕುಸಿದಿದೆ. 6 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 5 ಟಿಎಂಸಿಯಷ್ಟುನೀರಿದೆ. ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ124 (ಗರಿಷ್ಠ 130) ಅಡಿಗಳಿಗೆ ಕುಸಿದಿದೆ. 30 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 19 ಟಿಎಂಸಿಯಷ್ಟುನೀರಿನ ಸಂಗ್ರಹವಿದೆ. ಈ ಮಧ್ಯೆ, 2284 ಅಡಿ ಗರಿಷ್ಠ ಮಟ್ಟದ ಕಬಿನಿ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ2250 ಅಡಿಗಳಿಗೆ ಕುಸಿದಿದೆ. 19 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 4 ಟಿಎಂಸಿಯಷ್ಟು ನೀರಿದೆ.

ವಿಜಯಪುರ: ಆಲಮಟ್ಟಿ ಜಲಾಶಯದಲ್ಲಿ ಸದ್ಯಕ್ಕಿಲ್ಲ ನೀರಿನ ತೊಂದರೆ

ಬೆಳಗಾವಿ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಮಲಪ್ರಭಾ ಮತ್ತು ಘಟಪ್ರಭಾ ಜಲಾಶಯಗಳಲ್ಲೂ ನೀರಿನ ಸಂಗ್ರಹ ಕುಸಿದಿದೆ. ಮಲಪ್ರಭಾ ಜಲಾಶಯದ ನೀರಿನ ಮಟ್ಟ2046 (ಗರಿಷ್ಠ 2079) ಅಡಿಗಳಿಗೆ ಕುಸಿದಿದ್ದರೆ, ಘಟಪ್ರಭಾ ಜಲಾಶಯದ ನೀರಿನ ಮಟ್ಟ2064 (ಗರಿಷ್ಠ 2175) ಅಡಿಗಳಿಗೆ ಇಳಿದಿದೆ.

ಸುಪಾದಲ್ಲಿ ಕಳೆದ ಬಾರಿಗಿಂತ ಅಧಿಕ:

ಆದರೆ, ಉತ್ತರ ಕನ್ನಡ ಜಿಲ್ಲೆಯ ಸುಪಾ ಜಲಾಶಯದಲ್ಲಿ ನೀರಿನ ಮಟ್ಟಕಳೆದ ಬಾರಿಗಿಂತ ಹೆಚ್ಚಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ519 (ಗರಿಷ್ಠ 564 ಮೀ.) ಮೀಟರ್‌ಗಳಷ್ಟಿತ್ತು. ಈ ಬಾರಿ ನೀರಿನ ಮಟ್ಟ529 ಮೀಟರ್‌ಗಳಷ್ಟಿದೆ. 40 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 27 ಟಿಎಂಸಿಯಷ್ಟುನೀರಿನ ಸಂಗ್ರಹವಿದೆ.

ಎಲ್ಲಿ, ಎಷ್ಟು ನೀರು?: ಟಿಎಂಸಿಗಳಲ್ಲಿ

ಡ್ಯಾಂ ಗರಿಷ್ಠ 2023 2022
ತುಂಗಭದ್ರಾ 105 5 30
ಲಿಂಗನಮಕ್ಕಿ 151 16 24
ಆಲಮಟ್ಟಿ 123
ಬಸವಸಾಗರ
ಕೆಆರ್‌ಎಸ್‌ 49 11 27

ಬಿರುಸಾದ ಸೈಕ್ಲೋನ್‌: ಕರ್ನಾಟಕ ಸೇರಿದಂತೆ 5 ರಾಜ್ಯಗಳಿಗೆ ಎಚ್ಚರಿಕೆ

ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ‘ಬಿಪೊರ್‌ಜೊಯ್‌’ ಚಂಡುಮಾರುತ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸೈಕ್ಲೋನ್‌ನಿಂದಾಗಿ ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ 3-4 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Follow Us:
Download App:
  • android
  • ios