Asianet Suvarna News Asianet Suvarna News

ಪ್ರತಿಭಟನೆ ಹಿಂದೆ ಕಾಂಗ್ರೆಸ್‌ ಕೈವಾಡ: ಬ್ರಿಜ್‌ಭೂಷಣ್‌ ಸಿಂಗ್ ಆರೋಪ

ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆಸುತ್ತಿರುವ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್
ಕೇವಲ ಒಂದು ಕುಟುಂಬದ ಅಖಾಡದಿಂದ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ
ಉದ್ಯಮಿ, ಕಾಂಗ್ರೆಸ್‌ ಕುಮ್ಮಕ್ಕಿನಿಂದ ಕುಸ್ತಿಪಟುಗಳ ಪತ್ರಿಭಟನೆ: ಬ್ರಿಜ್‌ಭೂಷಣ್‌
 

Wrestlers protest WFI President Brij Bhushan says he is innocent calls stir a motivated campaign kvn
Author
First Published Apr 30, 2023, 10:07 AM IST

ಗೊಂಡಾ(ಏ.30): ಏಳು ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ತಾವು ಯಾವುದೇ ತನಿಖೆಗೂ ಸಿದ್ಧ ಎಂದಿದ್ದಾರೆ. ಶನಿವಾರ ಇಲ್ಲಿಗೆ 40 ಕಿ.ಮೀ. ದೂರದಲ್ಲಿರುವ ಬಿಷ್ಣೋಹರ್‌ಪುರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜೀನಾಮೆ ನೀಡುವುದು ದೊಡ್ಡ ವಿಷಯವೇ ಇಲ್ಲ. ಆದರೆ ನಾನು ರಾಜೀನಾಮೆ ನೀಡುವುದಿಲ್ಲ. ಹಾಗೆ ಮಾಡಿದರೆ ತಪ್ಪು ಒಪ್ಪುಕೊಂಡಂತಾಗುತ್ತದೆ. ನಾನು ಮುಗ್ಧ, ಸುಪ್ರೀಂ ಕೋರ್ಚ್‌ ಹಾಗೂ ದೆಹಲಿ ಪೊಲೀಸರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ನಾನು ಯಾವುದೇ ತನಿಖೆಗೂ ಸಿದ್ಧ. ಡಬ್ಲ್ಯುಎಫ್‌ಐ ಅಧ್ಯಕ್ಷನಾಗಿ ನನ್ನ ಅವಧಿ ಮುಗಿದಿದೆ. 45 ದಿನಗಳಲ್ಲಿ ಹೊಸದಾಗಿ ಚುನಾವಣೆ ನಡೆಯಲಿದೆ’ ಎಂದರು.

ಕಾಂಗ್ರೆಸ್‌ ವಿರುದ್ಧ ಕಿಡಿ: ಕುಸ್ತಿಪಟುಗಳ ಪ್ರತಿಭಟನಾ ಸ್ಥಳಕ್ಕೆ ಪ್ರಿಯಾಂಕ ಗಾಂಧಿ ಭೇಟಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬ್ರಿಜ್‌ಭೂಷಣ್‌, ‘ಈ ವಿವಾದದ ಹಿಂದೆ ಯಾರಿದ್ದಾರೆ ಎನ್ನುವುದು ಇಂದು ಸ್ಪಷ್ಟವಾಗಿದೆ. ನಾನು ಆರಂಭದಿಂದಲೇ ಈ ಬಗ್ಗೆ ಹೇಳುತ್ತಿದ್ದೇನೆ. ಉದ್ಯಮಿ ಹಾಗೂ ಕಾಂಗ್ರೆಸ್‌ನ ಕೈವಾಡವಿದೆ ಎಂದು. ನನ್ನ ಮೇಲೆ ಅವರಿಗೆ ಸಿಟ್ಟಿದೆ’ ಎಂದರು. ಆದರೆ ಬಿಜೆಪಿ ಸಂಸದರೂ ಆಗಿರುವ ಭೂಷಣ್‌ ಈ ಬಗ್ಗೆ ಹೆಚ್ಚಿನ ವಿವರ ಬಹಿರಂಗಪಡಿಸಲಿಲ್ಲ.

ಕುಸ್ತಿಪಟುಗಳ ಮೇಲೆ ಸಿಟ್ಟು: ದೂರು ನೀಡಿರುವ 7 ಕುಸ್ತಿಪಟುಗಳ ಪೈಕಿ ಒಬ್ಬ ಅಪ್ರಾಪ್ತೆಯೂ ಇರುವ ಕಾರಣ ಶುಕ್ರವಾರ ರಾತ್ರಿ ದೆಹಲಿ ಪೊಲೀಸರು ಬ್ರಿಜ್‌ಭೂಷಣ್‌ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಮಹಿಳೆಯರ ಮೇಲೆ ಹಲ್ಲೆ, ಬೆದರಿಕೆಗೆ ಸಂಬಂಧಿಸಿದಂತೆ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಭೂಷಣ್‌, ‘ನನ್ನ ವಿರುದ್ಧ ಎಫ್‌ಐಆರ್‌ ಆದ ಮೇಲೂ ಏಕೆ ಪ್ರತಿಭಟನೆ ಮುಂದುವರಿಸಿದ್ದಾರೆ?, ಕುಸ್ತಿಪಟುಗಳು ದಿನಕ್ಕೊಂದು ಹೊಸ ಬೇಡಿಕೆ ಇಡುತ್ತಿದ್ದಾರೆ. ಮೊದಲು ನನ್ನ ಮೇಲೆ ಎಫ್‌ಐಆರ್‌ಗೆ ಆಗ್ರಹಿಸಿದರು. ಎಫ್‌ಐಆರ್‌ ಆಗಿದೆ. ಈಗ ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎನ್ನುತ್ತಿದ್ದಾರೆ. ನಾನು ಕಿರುಕುಳ ನೀಡಿದ್ದೇ ಆಗಿದ್ದರೆ ಏಕೆ ಇಷ್ಟುದಿನ ಪೊಲೀಸರಿಗೆ ದೂರು ನೀಡಲಿಲ್ಲ. ನೇರವಾಗಿ ಜಂತರ್‌ ಮಂತರ್‌ಗೆ ಹೋಗಿ ಪ್ರತಿಭಟನೆ ಏಕೆ ನಡೆಸಿದರು?’ ಎಂದರು ಪ್ರಶ್ನಿಸಿದರು.

ಹಾದಿ ತಪ್ಪಿತಾ ಕುಸ್ತಿಪಟುಗಳ ಪ್ರತಿಭಟನೆ? ಮೊಳಗಿತು ಮೋದಿ ತೇರಿ ಕಬರ್ ಖುದೇಗಿ ಘೋಷಣೆ!

‘ಪ್ರತಿಭಟನೆ ಶುರುವಾಗುವ ಮೊದಲು ಇದೇ ಕುಸ್ತಿಪಟುಗಳು ನನ್ನ ಬಗ್ಗೆ ಹಾಡಿ ಹೊಗಳಿದ್ದಾರೆ. ಅವರ ಮದುವೆಗಳಿಗೆ ಆಹ್ವಾನಿಸಿದ್ದರು. ನನ್ನೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ, ಆರ್ಶೀವಾದ ಪಡೆದಿದ್ದಾರೆ’ ಎಂದರು. ‘ನಾನು ಚುನಾಯಿತ ಪ್ರತಿನಿಧಿ. ನನ್ನನ್ನು ಜನ ಗೆಲ್ಲಿಸಿದ್ದಾರೆ. ವಿನೇಶ್‌ ಫೋಗಾಟ್‌ ಅಲ್ಲ. ಕೇವಲ ಒಂದು ಕುಟುಂಬದ ಅಖಾಡ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಪ್ರತಿಭಟಿಸುತ್ತಿದೆ. ಹರ್ಯಾಣದ ಶೇ.90ರಷ್ಟುಕುಸ್ತಿಪಟುಗಳು ನನ್ನ ಪರ ಇದ್ದಾರೆ’ ಎಂದು ಭೂಷಣ್‌ ಹೇಳಿದರು.

ಪೊಲೀಸರ ಕೈ ಸೇರಿದ ತನಿಖಾ ವರದಿ

ನವದೆಹಲಿ: ಲೈಂಗಿಕ ಕಿರುಕುಳ ಆರೋಪಗಳ ತನಿಖೆ ನಡೆಸಲು ದಿಗ್ಗಜ ಬಾಕ್ಸರ್‌ ಮೇರಿ ಕೋಮ್‌ ಅವರ ನೇತೃತ್ವದಲ್ಲಿ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ನೇಮಿಸಿದ್ದ ಸಮಿತಿಯಿಂದ ದೆಹಲಿ ಪೊಲೀಸರಿಗೆ ತನಿಖಾ ವರದಿ ಹಸ್ತಾಂತರವಾಗಿದೆ. ಈ ವರದಿಯಲ್ಲಿ ಭೂಷಣ್‌ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಮಿತಿಯು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ತನಿಖಾ ವರದಿಯನ್ನು ಆಧರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಎಫ್‌ಐಆರ್‌ ದಾಖಲಿಸಿರುವ 7 ಕುಸ್ತಿಪಟುಗಳ ಹೇಳಿಕೆಗಳನ್ನು ಸದ್ಯದಲ್ಲೇ ಪಡೆಯಲಿದ್ದೇವೆ. ಅವರಿಗೆ ಸೂಕ್ತ ಭದ್ರತೆ ಒದಗಿಸಲಿದ್ದೇವೆ ಎಂದು ದೆಹಲಿ ಪೊಲೀಸ್‌ ಆಯುಕ್ತ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios