2011ರ ವಿಶ್ವಕಪ್ ಫಿಕ್ಸಿಂಗ್ ಆಗಿತ್ತಾ..?
ಇತ್ತೀಚೆಗಷ್ಟೇ ಸಂಗಾಕ್ಕರ 2009ರ ಪಾಕ್ ಪ್ರವಾಸಕ್ಕೆ ಯಾರು ಹೊಣೆ ಎಂದು ಆರೋಪಿಸಿದ್ದರು, ಇದಕ್ಕೆ ಪ್ರತಿಕ್ರಿಯಿಸಿರುವ ರಣತುಂಗ 2011ರ ವಿಶ್ವಕಪ್ ಫೈನಲ್ ಕುರಿತಂತೆ ತುಟಿಬಿಚ್ಚಿದ್ದಾರೆ.
ಕೊಲಂಬೊ(ಜು.14): ಭಾರತ ಹಾಗೂ ಶ್ರೀಲಂಕಾ ನಡುವಿನ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿರುವ ಸಾಧ್ಯತೆಯಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಗಂಭೀರ ಆರೋಪ ಮಾಡಿದ್ದು, ಶ್ರೀಲಂಕಾ ಸೋಲಿನ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಪೇಜ್ನಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ಅವರು, 'ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತೋರಿದ ಪ್ರದರ್ಶನ ನನಗೆ ನಿರಾಸೆ ಮೂಡಿಸಿತ್ತು. ಆಗಲೇ ಆ ಪಂದ್ಯದ ಕುರಿತಂತೆ ನನಗೆ ಅನುಮಾನ ಮೂಡಿತ್ತು. ಹಾಗಾಗಿ ಆ ಪಂದ್ಯದ ಸೋಲಿನ ತನಿಖೆ ಆಗಲೇಬೇಕು’ ಎಂದು ರಣತುಂಗ ಹೇಳಿದ್ದಾರೆ.
‘ಸದ್ಯ ನಾನು ಎಲ್ಲವನ್ನು ಹೇಳಲಾರೆ. ಆದರೆ, ಒಂದು ದಿನ ಇವೆಲ್ಲವನ್ನು ಬಹಿರಂಗಗೊಳಿಸುತ್ತೇನೆ. ತಮ್ಮ ಕೊಳಕನ್ನು ಆಟಗಾರರು ಅವರ ಬಿಳಿವಸ್ತ್ರದಲ್ಲಿ ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ’ ಎಂದು ಲಂಕಾದ ಯಾವೊಬ್ಬ ಆಟಗಾರನ ಹೆಸರೇಳದೆ ಟೀಕಿಸಿದ್ದಾರೆ.
ಇತ್ತೀಚೆಗಷ್ಟೇ ಸಂಗಾಕ್ಕರ 2009ರ ಪಾಕ್ ಪ್ರವಾಸಕ್ಕೆ ಯಾರು ಹೊಣೆ ಎಂದು ಆರೋಪಿಸಿದ್ದರು, ಇದಕ್ಕೆ ಪ್ರತಿಕ್ರಿಯಿಸಿರುವ ರಣತುಂಗ 2011ರ ವಿಶ್ವಕಪ್ ಫೈನಲ್ ಕುರಿತಂತೆ ತುಟಿಬಿಚ್ಚಿದ್ದಾರೆ.
ನೋಟ್: 2009ರ ಪಾಕ್ ಪ್ರವಾಸದ ವೇಳೆ ಶ್ರೀಲಂಕಾ ಆಟಗಾರರ ಮೇಲೆ ಉಗ್ರರ ದಾಳಿ ನಡೆದಿತ್ತು. 2011ರ ವಿಶ್ವಕಪ್'ನಲ್ಲಿ ಸಂಗಕ್ಕರ ನೇತೃತ್ವದ ಶ್ರೀಲಂಕಾ ತಂಡ ಫೈನಲ್'ನಲ್ಲಿ ಭಾರತಕ್ಕೆ ಶರಣಾಗಿತ್ತು.