ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಇಂದು ಸಭೆ ಸೇರಲಿರುವ ಕ್ರಿಕೆಟ್‌ ಸಲಹಾ ಸಮಿತಿ, ಅರ್ಜಿಗಳನ್ನು ಪರಿಶೀಲಿಸಿ ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ. ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ.
ಮುಂಬೈ(ಜು.10): ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಇಂದು ಸಭೆ ಸೇರಲಿರುವ ಕ್ರಿಕೆಟ್ ಸಲಹಾ ಸಮಿತಿ, ಅರ್ಜಿಗಳನ್ನು ಪರಿಶೀಲಿಸಿ ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ. ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ.
ಮೂಲಗಳ ಪ್ರಕಾರ ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಫಿಲಿಪ್ ಸಿಮನ್ಸ್, ರಿಚರ್ಡ್ ಪೈಬಸ್ ಮತ್ತು ಲಾಲ್ಚಂದ್ ರಜಪೂತ್ ಅವರನ್ನು ಸಂದರ್ಶನಕ್ಕೆ ಕರೆಯುವ ಸಾಧ್ಯತೆ ಇದೆ. ಕರ್ನಾಟಕದ ದೊಡ್ಡ ಗಣೇಶ, ಒಮನ್ ಕ್ರಿಕೆಟ್ ತಂಡದ ಕೋಚ್ ರಾಕೇಶ್ ಶರ್ಮಾ, ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್ ಮತ್ತು ಎಂಜಿನಿಯರ್ ಉಪೇಂದ್ರನಾಥ್ ಬ್ರಹ್ಮಚಾರಿ ಅವರು ಕೂಡ ಅರ್ಜಿ ಸಲ್ಲಿಸಿದ್ದಾರೆ.
ವಿರಾಟ್ ಕೊಹ್ಲಿ ಜೊತೆಗೆ ಭಿನ್ನಮತವಿದೆ ಎಂದು ಹೇಳಿ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದರಿಂದ ಕೋಚ್ ಹುದ್ದೆ ಖಾಲಿಯಾಗಿತ್ತು. ಮುಖ್ಯ ಕೋಚ್ ಇಲ್ಲದೇ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಕೋಚ್ ಆಯ್ಕೆ ಪ್ರಕ್ರಿಯೆ ಆರಂಭ ಗೊಂಡು ಕೆಲವು ದಿನಗಳ ನಂತರ ರವಿ ಶಾಸ್ತ್ರಿ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದರು. ಕೋಚ್ ಹುದ್ದೆ ಶಾಸ್ತ್ರಿ ಹೆಗಲಿಗೆ ಏರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗ್ತಿದೆ.
ಟೀಂ ಇಂಡಿಯಾ ಸಲಹೆಗಾರರಾಗಿದ್ದ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಜೊತೆ ರವಿಶಾಸ್ತ್ರಿ ಹೊಂದಿದ್ದ ಉತ್ತಮ ಸಂಬಂಧ ಕ್ರಿಕೆಟ್ ಸಲಹಾ ಸಮಿತಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದರೆ ಸಮಿತಿಯ ಸದಸ್ಯ ಸೌರವ್ ಗಂಗೂಲಿ ಅವರೊಂದಿಗೆ ರವಿಶಾಸ್ತ್ರಿ ಅವರಿಗೆ ಸಾಮರಸ್ಯವಿಲ್ಲ. ಇಬ್ಬರೂ ಅನೇಕ ಬಾರಿ ಬಹಿರಂಗ ವಾಗಿಯೇ ಆರೋಪ–ಪ್ರತ್ಯಾರೋಪ ಗಳನ್ನು ಮಾಡಿದ್ದಾರೆ. ಇನ್ನು ಸ್ಪರ್ಧೆಯಲ್ಲಿರುವ ಮತ್ತೊಬ್ಬ ಪ್ರಮುಖ ಅಭ್ಯರ್ಥಿ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್.
ರವಿಶಾಸ್ತ್ರಿ ಅವರನ್ನು ಹೊರತುಪಡಿಸಿದರೆ ಹೆಚ್ಚು ಗಮನ ಇರುವುದು ಸೆಹ್ವಾಗ್ ಮೇಲೆ. ಬ್ಯಾಟಿಂಗ್'ನಲ್ಲಿ ವಿಶ್ವಪ್ರಸಿದ್ಧಿ ಗಳಿಸಿದ್ದರೂ ಕೋಚ್ ಆಗಿ ನೇಮಕ ಗೊಂಡರೆ ಎಷ್ಟರ ಮಟ್ಟಿಗೆ ಸಫಲರಾ ಗುವರು ಎಂಬುದು ದೊಡ್ಡ ಪ್ರಶ್ನೆ. ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಿರ್ದೇಶಕರಾಗಿ ಎರಡು ವರ್ಷ ಕಾರ್ಯನಿರ್ವಹಿಸಿದ್ದರೂ ಸೆಹ್ವಾಗ್ ಅವರಿಂದ ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಟಾಮ್ ಮೂಡಿ ಅವರನ್ನು ಕೂಡ ಕ್ರಿಕೆಟ್ ಸಲಹಾ ಸಮಿತಿ ಪರಿಗಣಿ ಸುವ ಸಾಧ್ಯತೆ ಇದೆ.
