ಟೀಂ ಇಂಡಿಯಾ ಆಯ್ಕೆ- ತಪ್ಪೊಪ್ಪಿಕೊಂಡ ನಾಯಕ ಕೊಹ್ಲಿ
ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ತಂಡದ ಆಯ್ಕೆ ಕೂಡ ಕಾರಣ ಅನ್ನೋದು ಅಲ್ಲಗೆಳೆಯುವಂತಿಲ್ಲ. ತನಗೆ ಬೇಕಾದ ತಂಡ ಆಯ್ಕೆ ಮಾಡಿಕೊಂಡ ಸೋಲಿಗೆ ಗುರಿಯಾದ ನಾಯಕ ತನ್ನ ತಪ್ಪನ್ನ ಒಪ್ಪಿಕೊಂಡಿದ್ದಾರೆ.
ಲಂಡನ್(ಆ.14): ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆದ 2ನೇ ಟೆಸ್ಟ್ನಲ್ಲಿ ಭಾರತ ಸೋಲಲು, ತಂಡದ ಆಯ್ಕೆಯಲ್ಲಿ ಆದ ತಪ್ಪುಗಳು ಸಹ ಕಾರಣ ಎಂದು ನಾಯಕ ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ. ‘ಸೂಕ್ತ ಸಂಯೋಜನೆಯೊಂದಿಗೆ ಕಣಕ್ಕಿಳಿಯುವಲ್ಲಿ ಎಡವಿದೆವು.
ಮುಂದಿನ ಪಂದ್ಯದಲ್ಲಿ ತಪ್ಪು ತಿದ್ದಿಕೊಳ್ಳಲು ಅವಕಾಶವಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದೇವೆ. ಆದರೆ 0-2 ರಿಂದ 1-2 ಕ್ಕೆ ಅಂತರವನ್ನು ತಗ್ಗಿಸಿಕೊಂಡರೆ ಸರಣಿ ಮತ್ತಷ್ಟು ರೋಚಕಗೊಳ್ಳಲಿದೆ’ ಎಂದು ಕೊಹ್ಲಿ ಹೇಳಿದ್ದಾರೆ.
ಬ್ಯಾಟ್ಸ್ಮನ್ಗಳಿಗೆ ಸಲಹೆ: ‘ನಮ್ಮ ಬ್ಯಾಟ್ಸ್ಮನ್ ಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದು ತಪ್ಪು. ಬ್ಯಾಟ್ಸ್ಮನ್ ಮಾನಸಿಕವಾಗಿ ಸದೃಢನಾಗಿದ್ದರೆ, ತನ್ನ ಯೋಜನೆಗಳ ಬಗ್ಗೆ ಅರಿವಿದ್ದರೆ ಈ ರೀತಿ ಸಮಸ್ಯೆ ಆಗುವುದಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ. ‘ತಲೆಯಲ್ಲಿ ಹತ್ತಾರು ಗೊಂದಲಗಳನ್ನು ಇಟ್ಟುಕೊಂಡು ಬ್ಯಾಟ್ ಮಾಡಿದರೆ ಯಶಸ್ಸು ಕಾಣಲು ಸಾಧ್ಯವೇ ಇಲ್ಲ. ದಿಗ್ಗಜರು ಹೇಳುವ ರೀತಿ ಆಟವನ್ನು ಸರಳವಾಗಿಡಬೇಕು’ ಎಂದು ಕೊಹ್ಲಿ ಹೇಳಿದ್ದಾರೆ.