ಬಂಗಾಳದ ಎಂಜಿನಿಯರ್‌ ಉಪೇಂದ್ರ ನಾಥ್‌ ಬ್ರಹ್ಮಚಾರಿ ಎನ್ನುವರೊಬ್ಬರು ಬಿಸಿಸಿಐಗೆ ಈ-ಮೇಲ್‌ ಮೂಲಕ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿರುವುದು ಭಾರೀ ಅಚ್ಚರಿಗೆ ಕಾರಣವಾಗಿದೆ.

ನವದೆಹಲಿ(ಜೂ.28): ಬಂಗಾಳದ ಎಂಜಿನಿಯರ್‌ ಉಪೇಂದ್ರ ನಾಥ್‌ ಬ್ರಹ್ಮಚಾರಿ ಎನ್ನುವರೊಬ್ಬರು ಬಿಸಿಸಿಐಗೆ ಈ-ಮೇಲ್‌ ಮೂಲಕ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿರುವುದು ಭಾರೀ ಅಚ್ಚರಿಗೆ ಕಾರಣವಾಗಿದೆ.

 ‘ನಾನೊಬ್ಬ ಎಂಜಿನಿಯರ್‌, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಸಿಸಿಐ ಕೇಳಿರುವ ಯಾವ ಅನುಭವವೂ ನನಗಿಲ್ಲ. ಆದರೆ ಈ ಹುದ್ದೆಗೆ ನಾನೇ ಸರಿಯಾದ ವ್ಯಕ್ತಿ ಎಂದುಕೊಳ್ಳುತ್ತೇನೆ. ದಿಗ್ಗಜ ಅನಿಲ್‌ ಕುಂಬ್ಳೆ ರಾಜೀನಾಮೆ ಬಳಿಕ ಅವರ ಸ್ಥಾನವನ್ನು ನಾನು ತುಂಬಲು ಇಚ್ಛಿಸುತ್ತೇನೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ದಿಗ್ಗಜ ಆಟಗಾರರು ಕೋಚ್‌ ಆಗುವುದು ಇಷ್ಟವಿಲ್ಲ. ಸಲಹಾ ಸಮಿತಿ ಮತ್ತೊಬ್ಬ ದಿಗ್ಗಜನಿಗೆ ಕೋಚ್‌ ಸ್ಥಾನ ನೀಡಿದರೆ ಕೊಹ್ಲಿ ಅವರನ್ನೂ ಅವಮಾನಿಸುತ್ತಾರೆ. ನನ್ನನ್ನೇಕೆ ಕೋಚ್‌ ಆಗಿ ನೇಮಿಸಬೇಕು ಎಂದು ನೀವು ಕೇಳಬಹುದು?. ನಾನು ಕೊಹ್ಲಿ ಎಷ್ಟೇ ಕೆಟ್ಟದಾಗಿ ವರ್ತಿಸಿದರೂ ಸಹಿಸಿಕೊಳ್ಳುತ್ತೇನೆ.ಇದು ಯಾವುದೇ ದಿಗ್ಗಜರಿಂದ ಸಾಧ್ಯವಿಲ್ಲ. ನಾನು ಕೊಹ್ಲಿಯನ್ನು ಸರಿಯಾದ ದಾರಿಗೆ ತರುತ್ತೇನೆ. ಆನಂತರ ಬೇಕಿದ್ದರೆ ಬಿಸಿಸಿಐ, ದಿಗ್ಗಜ ಆಟಗಾರರನ್ನು ಕೋಚ್‌ ಆಗಿ ನೇಮಿಸಬಹುದು' ಎಂದು ಬಿಸಿಸಿಐಗೆ ಕಳುಹಿಸಿರುವ ಈ-ಮೇಲ್‌ನಲ್ಲಿ ಉಪೇಂದ್ರ ನಾಥ್‌ ಬರೆದಿದ್ದಾರೆ.