ವಿರಾಟ್ ಕೊಹ್ಲಿಗೆ ವಿಶ್ರಾಂತಿ-ಕೋಚ್ ರವಿ ಶಾಸ್ತ್ರಿ ಬಿಚ್ಚಿಟ್ರು ಕಾರಣ!
ಏಷ್ಯಾಕಪ್ ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ಇದೀಗ ವೆಸ್ಟ್ಇಂಡೀಸ್ ಸರಣಿಗೆ ಕಮ್ಬ್ಯಾಕ್ ಮಾಡಿದ್ದಾರೆ. ಆದರೆ ಕೊಹ್ಲಿಗೆ ಪ್ರತಿಷ್ಠಿತಿ ಏಷ್ಯಾಕಪ್ ಟೂರ್ನಿಗೆ ವಿಶ್ರಾಂತಿ ನೀಡಿರೋ ಹಿಂದಿನ ಕಾರಣಗಳನ್ನ ಕೋಚ್ ರವಿ ಶಾಸ್ತ್ರಿ ಬಿಚ್ಚಿಟ್ಟಿದ್ದಾರೆ.
ಮುಂಬೈ(ಅ.01): ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸದ್ಯ ವೆಸ್ಟ್ಇಂಡೀಸ್ ವಿರುದ್ಧದ ಸರಣಿಗೆ ತಯಾರಿ ನಡೆಸುತ್ತಿದೆ. ಅಕ್ಟೋಬರ್ 4 ರಿಂದ ವಿಂಡೀಸ್ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿ ಆಯೋಜನೆಗೊಳ್ಳಲಿದೆ. ಆದರೆ ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್ ಟೂರ್ನಿಯಿಂದ ನಾಯಕ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು.
ಪ್ರತಿಷ್ಠಿತ ಟೂರ್ನಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಿದ್ದು ಯಾಕೆ ಅನ್ನೋ ಚರ್ಚೆಗಳು ನಡೆದಿದೆ. ಇದೀಗ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ, ವಿಶ್ರಾಂತಿ ಹಿಂದಿನ ಕಾರಣಗಳನ್ನ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಸುದೀರ್ಘ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಎಲ್ಲಾ ಪಂದ್ಯಗಳನ್ನ ಆಡಿದ್ದಾರೆ. ಸತತ ಕ್ರಿಕೆಟ್ನಿಂದ ವಿರಾಟ್ ಬಳಲಿದ್ದರು. ಇಷ್ಟೇ ಅಲ್ಲ ನಾಯಕನ ಜವಾಬ್ದಾರಿ ನಿರ್ವಹಿಸೋ ಕೊಹ್ಲಿಗೆ ಮಾನಸಿಕವಾಗಿಯೂ ವಿಶ್ರಾಂತಿ ಅವಶ್ಯಕತೆ ಇತ್ತು. ಆಟಗಾರನ ಹಿತದೃಷ್ಟಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ.
ಏಷ್ಯಾಕಪ್ ವಿಶ್ರಾಂತಿಯಿಂದ ಕೊಹ್ಲಿಗೆ ಉಪಯುಕ್ತ ಸಮಯ ಸಿಕ್ಕಿದೆ. ಇಷ್ಟೇ ಅಲ್ಲ ವೆಸ್ಟ್ಇಂಡೀಸ್ ಸರಣಿಗೆ ಕೊಹ್ಲಿ ಫ್ರೆಶ್ ಆಗಿದ್ದಾರೆ ಎಂದು ಶಾಸ್ತ್ರಿ ಹೇಳಿದ್ದಾರೆ. ವಿಶ್ರಾಂತಿ ಕೇವಲ ಕೊಹ್ಲಿಗೆ ಮಾತ್ರವಲ್ಲ, ವೇಗಿಗಳಿಗೂ ಅವಶ್ಯಕತೆ ಇದೆ ಎಂದು ಶಾಸ್ತ್ರಿ ಹೇಳಿದ್ದಾರೆ.