ಮೂರು ವರ್ಷದ ಬಳಿಕ ಕುಸ್ತಿ ಅಖಾಡಕ್ಕೆ ಸುಶೀಲ್!
ನಾನು ಸ್ಪರ್ಧಾತ್ಮಕ ಕಣದಲ್ಲಿ ಸೆಣಸಲು ದೈಹಿಕ ಹಾಗೂ ಮಾನಸಿಕವಾಗಿ ಸಿದ್ದವಾಗಿದ್ದೇನೆ ಎಂದು ರಾಷ್ಟ್ರೀಯ ಕುಸ್ತಿ ಚಾಂಪಿಯನ್'ಶಿಪ್'ನಲ್ಲಿ ರೈಲ್ವೇಸ್ ತಂಡವನ್ನು ಪ್ರತಿನಿಧಿಸಲಿರುವ ಸುಶೀಲ್ ಹೇಳಿದ್ದಾರೆ.a
ನವದೆಹಲಿ(ನ.13): ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಮೂರು ವರ್ಷದ ಬಳಿಕ ಕುಸ್ತಿ ಅಖಾಡಕ್ಕೆ ಮರಳುತ್ತಿದ್ದು, ಇದೇ ನ.15ರಿಂದ ಆರಂಭಗೊಳ್ಳಲಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್'ಶಿಪ್'ನಲ್ಲಿ ಸ್ಪರ್ಧಿಸುವುದಾಗಿ ಖಚಿತ ಪಡಿಸಿದ್ದಾರೆ.
2014ರ ಗ್ಲಾಸ್ಗೊ ಕಾಮನ್'ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಬಳಿಕ ಸುಶೀಲ್, ಸ್ಪರ್ಧಾ ಕಣದಿಂದ ದೂರ ಉಳಿದಿದ್ದರು.
ಜಾರ್ಜಿಯಾದ ಟಿಬಿಲಿಸಿಯಲ್ಲಿ ತರಬೇತಿ ಪಡೆಯುತ್ತಿದ್ದ ಸುಶೀಲ್(74 ಕೆಜಿ), ಆಯ್ಕೆ ಟ್ರಯಲ್ಸ್ನಲ್ಲಿ ದಿನೇಶ್ ವಿರುದ್ಧ ಸೆಣಸಾಟ ನಡೆಸಿದ್ದರು. ಇನ್ನು ಭಾರತದ ಮತ್ತೋರ್ವ ಖ್ಯಾತ ಕುಸ್ತಿಪಟು, ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಯೋಗೇಶ್ವರ್ ದತ್ ಸ್ಪರ್ಧಾ ಕಣದಿಂದ ದೂರ ಉಳಿದಿದ್ದಾರೆ.
ರಿಯೋ ಒಲಿಂಪಿಕ್ಸ್'ನ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಗೀತಾ ಪೊಗಟ್, ವಿನೀಶಾ ಮಹಿಳೆಯರ ವಿಭಾಗದ ಪ್ರಮುಖ ಆಕರ್ಷಣೆಯಾಗಿದ್ದಾರೆ.
ನಾನು ಸ್ಪರ್ಧಾತ್ಮಕ ಕಣದಲ್ಲಿ ಸೆಣಸಲು ದೈಹಿಕ ಹಾಗೂ ಮಾನಸಿಕವಾಗಿ ಸಿದ್ದವಾಗಿದ್ದೇನೆ ಎಂದು ರಾಷ್ಟ್ರೀಯ ಕುಸ್ತಿ ಚಾಂಪಿಯನ್'ಶಿಪ್'ನಲ್ಲಿ ರೈಲ್ವೇಸ್ ತಂಡವನ್ನು ಪ್ರತಿನಿಧಿಸಲಿರುವ ಸುಶೀಲ್ ಹೇಳಿದ್ದಾರೆ. ರಿಯೋ ಒಲಿಂಪಿಕ್ಸ್'ನಲ್ಲಿ ಸ್ಥಾನಗಿಟ್ಟಿಸುವಲ್ಲಿ ವಿಫಲವಾಗಿದ್ದ ಸುಶೀಲ್, ಸಹ ಕುಸ್ತಿಪಟು ನರಸಿಂಗ್ ಯಾದವ್ ಜೊತೆ ಸಾಕಷ್ಟು ವಾಗ್ವಾದಕ್ಕೆ ಕಾರಣರಾಗಿದ್ದರು. ನರಸಿಂಗ್ ಯಾದವ್ ಹಾಗೂ ನನ್ನ ನಡುವೆ ಆಯ್ಕೆ ಟ್ರಯಲ್ ನಡೆಸಬೇಕು ಎಂದು ಸುಶೀಲ್ ಪಟ್ಟು ಹಿಡಿದಿದ್ದರು. ಆದರೆ ದೆಹಲಿ ಹೈಕೋರ್ಟ್ ಸುಶೀಲ್ ಕುಮಾರ್ ಅರ್ಜಿಯನ್ನು ತಿರಸ್ಕರಿಸಿತ್ತು. ಆ ಬಳಿಕ ನರಸಿಂಗ್ ಯಾದವ್ ರಿಯೊ ಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.