ಇಂದು ಭಾರತ ಮತ್ತು ಆಸ್ಟ್ರೇಲಿಯಾ 4ನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗ್ತಿವೆ. ಹ್ಯಾಟ್ರಿಕ್​​ ಜಯ ಸಾಧಿಸಿ ಈಗಾಗಲೇ ಸರಣಿ ವಷಪಡಿಸಿಕೊಂಡ್ರೂ ಕೊಹ್ಲಿ ದಾಖಲೆಗಾಗಿಯಾದರೂ ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಇನ್ನೂ ಆಸ್ಟ್ರೇಲಿಯಾವೂ ವೈಟ್​​​ ವಾಷ್​​ ಅನ್ನು ತಪ್ಪಿಸಿಕೊಳ್ಳಬೇಕಾದರೆ ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅಷ್ಟಕ್ಕೂ ಇಂದಿನ ಪಂದ್ಯ ಹೇಗಿರಲಿದೆ? ಇಲ್ಲಿದೆ ವಿವರ.

ಬೆಂಗಳೂರು(ಸೆ.28): ಇಂದು ಬೆಂಗಳೂರಿನಲ್ಲಿ ಕ್ರಿಕೆಟ್ ಹಬ್ಬ. ಭಾರತ-ಆಸ್ಟ್ರೇಲಿಯಾ 4ನೇ ಯುದ್ಧದಲ್ಲಿ ಮುಖಾಮುಖಿಯಾಗ್ತಿವೆ. ಭಾರತೀಯರಿಗೆ ವೈಟ್ ವಾಶ್ ಮಾಡೋ ತವಕ. ಕಾಂಗರೂಗಳಿಗೆ ಮಾನ ಉಳಿಸಿಕೊಳ್ಳೋ ಒತ್ತಡ. ಹೀಗಾಗಿ ಬಿಗ್​ಫೈಟ್ ನಿರೀಕ್ಷಿಸಲಾಗಿದೆ. ಎರಡು ಮದಗಜಗಳು ಇಂದು ಗೆಲುವಿಗಾಗಿ ತಮ್ಮದೇ ರೀತಿಯಲ್ಲಿ ರೆಡಿಯಾಗಿವೆ. ಅದಕ್ಕೆ ವೇದಿಕೆಯಾಗಿರೋದು ನಮ್ಮ ಚಿನ್ನಸ್ವಾಮಿ ಸ್ಟೇಡಿಯಂ.

ಆಗ್ಲೇ ಸರಣಿ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ಇಂದಿನ ಪಂದ್ಯವನ್ನ ಲೈಟಾಗಿ ತೆಗೆದುಕೊಳ್ಳೋದಿಲ್ಲ. ಸರಣಿಯನ್ನ ವೈಟ್​​ವಾಶ್​​ ಮಾಡಲು ಪಣತೊಟ್ಟಿರುವ ಕೊಹ್ಲಿ ಇಂದಿನ ಪಂದ್ಯಕ್ಕೆ ಕೆಲವು ಬದಲಾವಣೆಗಳನ್ನ ತಂದು ಪಂದ್ಯವನ್ನ ಗೆಲ್ಲಿಸಲು ಪ್ಲಾನ್​ ಮಾಡಿದ್ದಾರೆ. ಮೊದಲು 3 ಪಂದ್ಯಗಳಲ್ಲಿ ಬೆಂಚ್​​ ಕಾದವರಿಗೆ ಇಂದು ಅವಕಾಶ ನೀಡೋ ಸಾಧ್ಯತೆ ಇದೆ. ಉಳಿದ ಎರಡು ಪಂದ್ಯವನ್ನೂ ಗೆದ್ರೆ ಐಸಿಸಿ ಏಕದಿನ ಱಂಕಿಂಗ್​ನಲ್ಲಿ ಟೀಂ ಇಂಡಿಯಾ ಸುಮಾರು ದಿನಗಳ ಕಾಲ ಅಗ್ರಸ್ಥಾನದಲ್ಲೇ ಇರಲಿದೆ.

ಸತತ 9 ಏಕದಿನ ಪಂದ್ಯ ಗೆದ್ದಿರುವ ವಿರಾಟ್ ಕೊಹ್ಲಿ, ಇಬ್ಬರು ದಿಗ್ಗಜ ನಾಯಕರಾದ ರಾಹುಲ್ ದ್ರಾವಿಡ್ ಮತ್ತು ಎಂಎಸ್ ಧೋನಿ ದಾಖಲೆಯನ್ನ ಸರಿಗಟ್ಟಿದ್ದಾರೆ. ಇಂದು ಬೆಂಗಳೂರು ಪಂದ್ಯ ಗೆದ್ರೆ ಅವರಿಬ್ಬರ ದಾಖಲೆ ಮುರಿಯಲಿದ್ದಾರೆ. ಸತತ 10 ಏಕದಿನ ಪಂದ್ಯ ಗೆದ್ದ ಟೀಂ ಇಂಡಿಯಾದ ಏಕೈಕ ನಾಯಕ ಎನಿಸಿಕೊಳ್ಳಲಿದ್ದಾರೆ.

ಇನ್ನು ಸತತ ಸೋಲಿನಿಂದ ಕೆಂಗೆಟ್ಟಿರುವ ಆಸ್ಟ್ರೇಲಿಯಾದಲ್ಲಿ ಏನೂ ಸರಿಯಿಲ್ಲ. ಈಗಾಗಲೇ ಸ್ಪಿನ್ನರ್​​ ಅಸ್ಟನ್​ ಅಗರ್​​ ಗಾಯಾಳುವಾಗಿದ್ದು ಇಂದಿನ ಪಂದ್ಯಕ್ಕೆ ಲಭ್ಯರಿಲ್ಲ. ಅವರ ಬದಲಿಗೆ ಇಂದು ಆಡಂ ಜಂಪಾ ಕಣಕಿಳಿಯಲಿದ್ದಾರೆ. ಡೇವಿಡ್​​ ವಾರ್ನರ್​​​ಗೆ ಇಂದು 100ನೇ ಏಕದಿನ ಪಂದ್ಯ.

ಬೆಂಗಳೂರಿನಲ್ಲಿ ಉಭಯ ತಂಡಗಳು 6 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ನಾಲ್ಕರಲ್ಲಿ ಭಾರತ ಗೆದ್ದಿದ್ದರೆ, ಆಸೀಸ್ ಒಂದನ್ನ ಗೆದ್ದಿದೆ. ಇನ್ನೊಂದು ಮಳೆಯಿಂದ ರದ್ದಾಗಿದೆ. ಇಂದು ಗೆಲ್ಲುವ ನೆಚ್ಚಿನ ತಂಡ ಭಾರತವೇ ಆದ್ರೂ ಕಾಂಗರೂಗಳು ಹುಲಿಗಳಿಗೆ ಸುಲಭವಾಗಿ ತುತ್ತಾಗೋದಿಲ್ಲ. ಟಫ್​ ಫೈಟ್​​ ಇದ್ದೇ ಇರುತ್ತೆ.