ಸೌರವ್ ಗಂಗೂಲಿ ಬಿಚ್ಚಿಟ್ರು ಎಂ ಎಸ್ ಧೋನಿಯ ನಂ.3 ಕತೆ!
ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಕ್ರಿಕೆಟ್ ಕರಿಯರ್ ಆರಂಭವಾಗಿದ್ದು ಮತ್ತೊರ್ವ ಶ್ರೇಷ್ಠ ನಾಯಕ ಸೌರವ್ ಗಂಗೂಲಿ ನಾಯಕತ್ವದಲ್ಲಿ. ಇದೀಗ ಗಂಗೂಲಿ ಧೋನಿಯ ನಂ.3 ಕತೆಯನ್ನ ಬಿಚ್ಚಿಟ್ಟಿದ್ದಾರೆ. ಹಾಗಾದರೆ ಧೋನಿ ನಂ.3 ಕತೆ ಏನು? ಇಲ್ಲಿದೆ ವಿವರ
ಕೋಲ್ಕತ್ತಾ(ಜು.30): ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಭಾರತ ಕಂಡ ಶ್ರೇಷ್ಠ ನಾಯಕ. ಗಂಗೂಲಿ ನಾಯಕತ್ವದಡಿಯಲ್ಲೇ ಎಂ ಎಸ್ ಧೋನಿ, ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಶ್ರೇಷ್ಠ ಕ್ರಿಕೆಟಿಗರ ಉದಯವಾಗಿತ್ತು.
ಎಂ ಎಸ್ ಧೋನಿಯ ಕ್ರಿಕೆಟ್ ಕರಿಯರ್ನಲ್ಲಿ ಗಂಗೂಲಿ ಪಾತ್ರ ಬಹಳಷ್ಟಿದೆ. ಧೋನಿ 2004ರಲ್ಲಿ ಗಂಗೂಲಿ ನಾಯಕತ್ವದಡಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆರಂಭಿಕ 2 ಪಂದ್ಯದಲ್ಲಿ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
ಧೋನಿಯಲ್ಲಿರುವ ಪ್ರತಿಭೆ ಗಮನಿಸಿದ ನಾಯಕ ಗಂಗೂಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಂ ಎಸ್ ಧೋನಿಯನ್ನ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯಲು ಸೂಚಿಸಿದ್ದರು. ಧೋನಿಗಾಗಿ ತನ್ನ 3ನೇ ಕ್ರಮಾಂಕವನ್ನ ಗಂಗೂಲಿ ಬಿಟ್ಟುಕೊಟ್ಟಿದ್ದರು.
7ನೇ ಕ್ರಮಾಂಕದಿಂದ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿದ ಗಂಗೂಲಿ ನಿರ್ಧಾರವನ್ನ ಧೋನಿ ಸಮರ್ಥಿಸಿಕೊಂಡಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಧೋನಿ ಸ್ಫೋಟಕ 145 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಧೋನಿಯ ಈ ನಂ.3 ಕತೆಯನ್ನ ಗಂಗೂಲಿ ನಿರೂಪಕ ಗೌರವ್ ಕಪೂರ್ ನಡೆಸಿಕೊಡುವ ಬ್ರೇಕ್ ಫಾಸ್ಟ್ ವಿಥ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.