ಟೀಂ ಇಂಡಿಯಾಗೆ ಶ್ರೀಶಾಂತ್ ಕಮ್'ಬ್ಯಾಕ್ ಮಾಡಲು ಇನ್ನೂ ಅವಕಾಶವಿದೆ
2013ರಲ್ಲಿ ರಾಜಸ್ಥಾನ ತಂಡವನ್ನು ಪ್ರತಿನಿಧಿಸುತ್ತಿದ್ದ ಶ್ರೀಶಾಂತ್ ಸ್ಪಾಟ್'ಪಿಕ್ಸಿಂಗ್ ಆರೋಪದಡಿ ಜೈಲು ಸೇರಬೇಕಾಯಿತು.
ಮುಂಬೈ(ಫೆ.06): ಸ್ಪಾಟ್ ಪಿಕ್ಸಿಂಗ್ ಹಗರಣದ ಆರೋಪದಿಂದಾಗಿ ತಂಡದಿಂದ ಹೊರಬಿದ್ದಿರುವ ಕೇರಳ ಮೂಲದ ಎಸ್. ಶ್ರೀಶಾಂತ್'ಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷ ಟಿ.ಸಿ ಮ್ಯಾಥ್ಯೂ ಪ್ರಕಾರ ಶ್ರೀಶಾಂತ್ ಟೀಂ ಇಂಡಿಯಾಗೆ ಕಮ್'ಬ್ಯಾಕ್ ಮಾಡಲು ಸಂಪೂರ್ಣ ಬಾಗಿಲು ಮುಚ್ಚಿಲ್ಲ, ತಂಡಕ್ಕೆ ಮರಳಲು ಇನ್ನೂ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'ಆಶೀಷ್ ನೆಹ್ರಾ ತಮ್ಮ 37ನೇ ವಯಸ್ಸಿನಲ್ಲಿ ತಂಡಕ್ಕೆ ಕಮ್'ಬ್ಯಾಕ್ ಮಾಡಲು ಸಾಧ್ಯವೆಂದಾದರೆ, ಶ್ರೀಶಾಂತ್ ಕೂಡ ತಂಡಕ್ಕೆ ಮರಳಬಹುದು. 33 ವರ್ಷದ ಶ್ರೀಶಾಂತ್ ಈಗಲೂ ಆಕ್ರಮಣಕಾರಿ ಬೌಲರ್' ಎಂದು ಮ್ಯಾಥ್ಯೂ ಅಭಿಪ್ರಾಯಪಟ್ಟಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್'ಗೆ 2005ರಲ್ಲಿ ಪಾದಾರ್ಪಣೆ ಮಾಡಿದ ಶ್ರೀಶಾಂತ್ ಆರಂಭದಲ್ಲಿ ಇನ್'ಸ್ವಿಂಗ್ ಹಾಗೂ ಔಟ್ ಸ್ವಿಂಗ್'ಗಳ ಮೂಲಕ ಎದುರಾಳಿ ಬ್ಯಾಟ್ಸ್'ಮನ್'ಗಳ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿದ್ದಾರು. ಆದರೆ ನಂತರದ ದಿನಗಳಲ್ಲಿ ತಮ್ಮ ಬೌಲಿಂಗ್ ಮೊನಚನ್ನು ಕಳೆದುಕೊಂಡು ತಂಡದಿಂದಲೇ ಹೊರಬೀಳಬೇಕಾಯಿತು.
ಈ ನಡುವೆ 2013ರಲ್ಲಿ ರಾಜಸ್ಥಾನ ತಂಡವನ್ನು ಪ್ರತಿನಿಧಿಸುತ್ತಿದ್ದ ಶ್ರೀಶಾಂತ್ ಸ್ಪಾಟ್'ಪಿಕ್ಸಿಂಗ್ ಆರೋಪದಡಿ ಜೈಲು ಸೇರಬೇಕಾಯಿತು. ಇದಾದ ಬಳಿಕ ಬಿಸಿಸಿಐ ಶ್ರೀಶಾಂತ್ ಮೇಲೆ ಅಜೀವ ನಿಷೇಧ ಹೇರಿತು. 2015ರಲ್ಲಿ ಶ್ರೀಶಾಂತ್ ಸ್ಪಾಟ್'ಪಿಕ್ಸಿಂಗ್'ನಲ್ಲಿ ಭಾಗಿಯಾಗಿರುವ ಕುರಿತಂತೆ ಯಾವುದೇ ಸೂಕ್ತ ಸಾಕ್ಷ್ಯಾಧಾರ ಲಭ್ಯವಿಲ್ಲ ಎಂದು ಮೋಕಾ ಕಾಯ್ದೆಯಡಿ ದೆಹಲಿ ನ್ಯಾಯಲಯ ಕೇರಳ ವೇಗಿಗೆ ಕ್ಲೀನ್'ಚಿಟ್ ನೀಡಿತು.