ಅತ್ಯಾ*ಚಾರ ಆರೋಪದ ನಡುವೆಯೇ ಸದ್ದಿಲ್ಲದೇ ಮದುವೆಯಾದ ಆರ್ಸಿಬಿ ವೇಗಿ ಯಶ್ ದಯಾಳ್! ಯಾರೀಕೆ?
ಬೆಂಗಳೂರು: ಕಳೆದ ಕೆಲ ತಿಂಗಳಿನಿಂದ ಬೇಡದ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದ ಆರ್ಸಿಬಿ ವೇಗಿ ಯಶ್ ದಯಾಳ್ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ಯಶ್ ದಯಾಳ್ ಕೈಹಿಡಿದ ಹುಡುಗಿ ಯಾರು? ಯಾವಾಗ ಮದುವೆಯಾಗಿದ್ದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಕ್ರಿಕೆಟಿಗರ ಮದುವೆ ಪರ್ವ
ಟೀಂ ಇಂಡಿಯಾ ಆಟಗಾರ ಕುಲದೀಪ್ ಯಾದವ್ ಅವರ ಮದುವೆ ವಿಚಾರ ಈಗ ಚರ್ಚೆಯಲ್ಲಿದೆ. ಇದರ ನಡುವೆಯೇ ಮತ್ತೊಬ್ಬ ಕ್ರಿಕೆಟಿಗ ಸದ್ದಿಲ್ಲದೆ ಮದುವೆಯಾಗಿರುವ ಸುದ್ದಿ ಹೊರಬಿದ್ದಿದೆ. ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಶ್ವೇತಾ ಪುಂಡಿರ್ ಮದುವೆಯಾದ ಯಶ್ ದಯಾಳ್
ಈ ಕ್ರಿಕೆಟಿಗ ಬೇರಾರೂ ಅಲ್ಲ, ಐಪಿಎಲ್ ಆಟಗಾರ ಯಶ್ ದಯಾಳ್. ಇವರು ಶ್ವೇತಾ ಪುಂಡಿರ್ ಅವರನ್ನು ತಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಬನ್ನಿ, ಇವರಿಬ್ಬರ ಬಗ್ಗೆ ತಿಳಿದುಕೊಳ್ಳೋಣ.
ಕಳೆದ ಫೆಬ್ರವರಿ 04ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಶ್ ದಯಾಳ್
ಯಶ್ ದಯಾಳ್, ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಐಪಿಎಲ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡುತ್ತಾರೆ. ಯಶ್ ದಯಾಳ್ ಕಳೆದ ಫೆಬ್ರವರಿ 4 ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ಕೇವಲ ಎರಡೂ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಆದರೆ, ಈ ಮದುವೆಗೆ ಕ್ರಿಕೆಟ್ ಕ್ಷೇತ್ರದ ಯಾವುದೇ ಗಣ್ಯರು ಬಂದಿದ್ದರೇ ಎಂಬುದು ತಿಳಿದುಬಂದಿಲ್ಲ.
ಯಾರು ಈ ಶ್ವೇತಾ ಪುಂಡಿರ್?
ಯಶ್ ದಯಾಳ್ ಅವರ ಪತ್ನಿ ಶ್ವೇತಾ ಪುಂಡಿರ್ ಕೂಡ ಸಖತ್ ಫೇಮಸ್. ಅವರೊಬ್ಬ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ವ್ಲಾಗರ್. ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ ಸುಮಾರು 5.87 ಲಕ್ಷ ಫಾಲೋವರ್ಸ್ ಇದ್ದು, ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇವರು ಇಂಟರ್ಕಾಂಟಿನೆಂಟಲ್ ಲೆಜೆಂಡ್ಸ್ ಲೀಗ್ನಲ್ಲಿ ಬ್ರಾಡ್ಕಾಸ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಶ್ವೇತಾ ದೆಹಲಿ ಮೂಲದವರು.
ಯಶ್ ದಯಾಳ್ ಮೇಲೆ ಗಂಭೀರ ಆರೋಪ
ಕಳೆದ ವರ್ಷ ಯಶ್ ದಯಾಳ್ ಮೇಲೆ ಎರಡು ಅತ್ಯಾ*ಚಾರ ಪ್ರಕರಣಗಳು ದಾಖಲಾಗಿದ್ದವು. ಮೊದಲ ಪ್ರಕರಣ ಗಾಜಿಯಾಬಾದ್ನದ್ದು. ಅಲ್ಲಿ ಮಹಿಳೆಯೊಬ್ಬರು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ದೈಹಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಎರಡನೇ ಪ್ರಕರಣ ಜೈಪುರದ್ದು. ಅಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಅತ್ಯಾ*ಚಾರದ ದೂರು ದಾಖಲಿಸಿದ್ದಳು. ಕ್ರಿಕೆಟ್ನಲ್ಲಿ ಸಹಾಯ ಮಾಡುವ ಭರವಸೆ ನೀಡಿ ದಯಾಳ್ 2023ರಲ್ಲಿ ತನ್ನ ಮೇಲೆ ಅತ್ಯಾ*ಚಾರ ಎಸಗಿದ್ದಾರೆ ಎಂದು ಆ ಹುಡುಗಿ ಆರೋಪಿಸಿದ್ದಳು.
ಕಳೆದೊಂದು ವರ್ಷದಿಂದ ಯಶ್ ದಯಾಳ್ ಕ್ರಿಕೆಟ್ನಿಂದ ದೂರ
ಯಶ್ ದಯಾಳ್, ಐಪಿಎಲ್ 2025ರ ಫೈನಲ್ ನಂತರ ಯಾವುದೇ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಅವರು ಸದ್ಯಕ್ಕೆ ಲೈಮ್ಲೈಟ್ನಿಂದ ದೂರ ಉಳಿದಿದ್ದಾರೆ. ಸೋಶಿಯಲ್ ಮೀಡಿಯಾದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮದುವೆಯ ಬಗ್ಗೆಯೂ ಯಾವುದೇ ಪೋಸ್ಟ್ ಮಾಡಿಲ್ಲ. ಗಮನಿಸಬೇಕಾದ ಅಂಶವೆಂದರೆ, ಆರ್ಸಿಬಿ ತಂಡವು ಐಪಿಎಲ್ 2026ರ ಸೀಸನ್ಗೂ ಮುನ್ನ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಆದರೆ, ಅವರ ಮೇಲಿನ ಆರೋಪಗಳ ಬಗ್ಗೆ ಏನನ್ನೂ ಹೇಳಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

