ಕೋಚ್ ಆಯ್ಕೆ ಮುಂದೂಡಿದ ಬಿಸಿಸಿಐ
ಸಲಹಾ ಸಮಿತಿಯ ಈ ನಡೆ, ರವಿ ಶಾಸ್ತ್ರಿಯನ್ನು ನೇರವಾಗಿ ಕೋಚ್ ಹುದ್ದೆಗೆ ಆಯ್ಕೆಯಾಗುತ್ತಾರೆ ಎನ್ನುವ ವದಂತಿಗಳನ್ನು ದೂರತಳ್ಳಿದೆ.
ಮುಂಬೈ(ಜು.10): ಟೀಂ ಇಂಡಿಯಾ ನೂತನ ಕೋಚ್ ಯಾರಗಲಿದ್ದಾರೆ ಎನ್ನುವುದನ್ನು ತಿಳಿಯಲು ಇನ್ನಷ್ಟು ದಿನ ಕಾಯಬೇಕಿದೆ. ಹೌದು ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅಂತಿಮಗೊಂಡಿದ್ದ ಆರು ಮಂದಿಯನ್ನು ಇಂದು ಕ್ರಿಕೆಟ್ ಸಲಹಾ ಸಮಿತಿಯು ಸಂದರ್ಶನ ನಡೆಸಿದ್ದು, ನೂತನ ಕೋಚ್ ಘೋಷಣೆಗೆ ಇನ್ನಷ್ಟು ದಿನ ಬೇಕು ಎಂದು ತಿಳಿಸಿದೆ.
ಸಲಹಾ ಸಮಿತಿಯ ಈ ನಡೆ, ರವಿ ಶಾಸ್ತ್ರಿಯನ್ನು ನೇರವಾಗಿ ಕೋಚ್ ಹುದ್ದೆಗೆ ಆಯ್ಕೆಯಾಗುತ್ತಾರೆ ಎನ್ನುವ ವದಂತಿಗಳನ್ನು ದೂರತಳ್ಳಿದೆ.
ಒಟ್ಟು 6 ಸದಸ್ಯರ ಪೈಕಿ ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಲಾಲ್'ಚಂದ್ ರಜ್'ಪೂತ್, ರಿಚರ್ಡ್ ಪೈಬಸ್ ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಫಿಲ್ ಸಿಮನ್ಸ್ ತಾವು ಸಂದರ್ಶನದಿಂದ ದೂರ ಉಳಿಯುವುದಾಗಿ ತಿಳಿಸಿದರು ಎನ್ನಲಾಗಿದೆ. ಕುಟುಂಬದೊಂದಿಗೆ ಲಂಡನ್ನಲ್ಲಿರುವ ಸಚಿನ್, ಅಲ್ಲಿಂದಲೇ ಸ್ಕೈಪ್ ಮೂಲಕ ಸಂದರ್ಶನ ನಡೆಸಿದರು.
ಸಂದರ್ಶನ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೌರವ್ ಗಂಗೂಲಿ, ‘ನೂತನ ಕೋಚ್ ಘೋಷಣೆಯನ್ನು ಕೆಲ ದಿನಗಳ ಕಾಲ ಮುಂದೂಡುತ್ತಿದ್ದೇವೆ. ನಮಗೆ ಇನ್ನೂ ಕೆಲ ದಿನಗಳ ಕಾಲಾವಕಾಶದ ಅಗತ್ಯವಿದೆ. ಶ್ರೀಲಂಕಾ ಪ್ರವಾಸಕ್ಕಿನ್ನು ಕೆಲ ದಿನಗಳು ಬಾಕಿ ಇದೆ. ಕೋಚ್ ಆಯ್ಕೆಗೆ ಆತುರ ಮಾಡುತ್ತಿಲ್ಲ’ ಎಂದರು. ನೂತನವಾಗಿ ಆಯ್ಕೆಯಾಗುವ ಕೋಚ್ 2019ರ ಐಸಿಸಿ ಏಕದಿನ ವಿಶ್ವಕಪ್ ವರೆಗೂ ಮುಂದುವರಿಯಲಿದ್ದಾರೆ ಎನ್ನುವ ವಿಚಾರವನ್ನು ಗಂಗೂಲಿ ಸ್ಪಷ್ಟಪಡಿಸಿದರು.
‘ಆಟಗಾರರು ಮೈದಾನದಲ್ಲಿ ಶ್ರಮವಹಿಸುವುದು. ನಾನಾಗಲಿ, ಇಲ್ಲ ಸಚಿನ್ ಅಥವಾ ಇನ್ಯಾವುದೇ ಅಧಿಕಾರಿಗಳಾಗಲಿ ಆಡುವುದಿಲ್ಲ. ಹೀಗಾಗಿ ಆಟಗಾರರ ಅಭಿಪ್ರಾಯವನ್ನೂ ನಾವು ಪರಿಗಣಿಸಬೇಕಿದೆ. ಆಟಗಾರರ ಹಾಗೂ ಸಹಾಯಕ ಸಿಬ್ಬಂದಿ ನಡುವೆ ಹೊಂದಾಣಿಕೆ ಇದ್ದಾಗ ಮಾತ್ರ ಧನಾತ್ಮಕ ಫಲಿತಾಂಶಗಳನ್ನು ಕಾಣಲು ಸಾಧ್ಯ’ ಎಂದು ಗಂಗೂಲಿ ಹೇಳಿದ್ದಾರೆ.