ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆಹಾಕಿ ದಂತಕಥೆ ಮೇಜರ್ ಧ್ಯಾನ್‌ ಚಂದ್ ಸ್ಮರಣಾರ್ಥ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ2020ನೇ ಸಾಲಿನ ರಾಜ್ಯ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಲು ರಾಜ್ಯ ಸರ್ಕಾರ ತೀರ್ಮಾನ

ಬೆಂಗಳೂರು(ಆ.29): ಹಾಕಿ ದಂತಕತೆ ಮೇಜರ್‌ ಧ್ಯಾನ್‌ಚಂದ್‌ರ ಹುಟ್ಟುಹಬ್ಬದ ಅಂಗವಾಗಿ ಆ.29, ಸೋಮವಾರ ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಇದೇ ವೇಳೆ ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ 2020ನೇ ಸಾಲಿನ ರಾಜ್ಯ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕ್ರೀಡಾ ಸಾಧಕರಿಗೆ ಏಕಲವ್ಯ, ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾ ರತ್ನ ಹಾಗೂ 2021-22ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಕಾರ‍್ಯಕ್ರಮ ನಡೆಯಲಿದೆ. ಇದರ ಜೊತೆಗೆ ಸಹಸ್ರ ಕ್ರೀಡಾ ಪ್ರತಿಭಾ ಯೋಜನೆಯಡಿ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಸಹ ನೀಡಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇಂದು ಮೈಸೂರಲ್ಲಿ ಮೀಟ್‌ ದಿ ಚಾಂಪಿಯನ್‌ ಕಾರ‍್ಯಕ್ರಮ

ಮೈಸೂರು: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌)ವು ‘ಮೀಟ್‌ ದಿ ಚಾಂಪಿಯನ್‌’ ಎನ್ನುವ ಕಾರ‍್ಯಕ್ರಮವನ್ನು ದೇಶದ 25 ಕಡೆಗಳಲ್ಲಿ ಆಯೋಜಿಸುತ್ತಿದೆ. ಕರ್ನಾಟಕದಲ್ಲಿ ಈ ಕಾರ‍್ಯಕ್ರಮವು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ನಡೆಯಲಿದ್ದು, ಅಂತಾರಾಷ್ಟ್ರೀಯ ಪ್ಯಾರಾ ಈಜುಪಟು ನಿರಂಜನ್‌ ಮುಕುಂದನ್‌ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ವಿದ್ಯಾರ್ಥಿಗಳ ಜೊತೆ ನಿರಂಜನ್‌ ಸಂವಾದ ನಡೆಸಲಿದ್ದಾರೆ

ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20ರ ಗಡುವು

ನವದೆಹಲಿ: 2022ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅರ್ಜಿ ಅಹ್ವಾನಿಸಿದ್ದು, ಮುಂಬರುವ ಸೆಪ್ಟೆಂಬರ್ 20ರೊಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಂತೆ ಕೋರಿದೆ. ಈ ಬಗ್ಗೆ www.yas.nic.in ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ‘ಕ್ರೀಡಾಪಟುಗಳು ತಮ್ಮ ಅರ್ಜಿಗಳನ್ನು ಸೆಪ್ಟೆಂಬರ್ 20ರ ಮೊದಲು dbtyas-sports.gov.in ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕು. ನಿಗದಿತ ದಿನದ ಬಳಿಕ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಕ್ರೀಡಾಪಟುಗಳು ಯಾವುದೇ ವ್ಯಕ್ತಿ/ಸಂಸ್ಥೆಗಳ ನಾಮನಿರ್ದೇಶನವಿಲ್ಲದೇ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಬೇಕು’ ಎಂದು ಸೂಚಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟಲ್ಲಿ 950+ ವಿಕೆಟ್‌: ಜಿಮ್ಮಿ ದಾಖಲೆ

ಮ್ಯಾಂಚೆಸ್ಟರ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 950 ವಿಕೆಟ್‌ ಕಿತ್ತ ಮೊದಲ ವೇಗಿ ಎಂಬ ಖ್ಯಾತಿಗೆ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್‌ಸನ್‌ ಪಾತ್ರರಾಗಿದ್ದಾರೆ. ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅವರು ಈ ಮೈಲಿಗಲ್ಲು ತಲುಪಿದರು. ಆ್ಯಂಡರ್‌ಸನ್‌ಗೂ ಮೊದಲು ಮೂವರು ಬೌಲರ್‌ಗಳು 950+ ವಿಕೆಟ್‌ ಪಡೆದಿದ್ದಾರೆ. ಅವರೆಲ್ಲರೂ ಸ್ಪಿನ್ನರ್‌ಗಳು. 

Asia Cup 2022 ಪಾಕ್‌ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕೂಡಿಕೊಂಡ ಗುರು ರಾಹುಲ್ ದ್ರಾವಿಡ್

ಶ್ರೀಲಂಕಾದ ಮುರಳೀಧರನ್‌ 1347 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, 1001 ವಿಕೆಟ್‌ ಪಡೆದಿರುವ ಶೇನ್‌ ವಾರ್ನ್‌ ಹಾಗೂ 956 ವಿಕೆಟ್‌ ಕಿತ್ತಿರುವ ಅನಿಲ್‌ ಕುಂಬ್ಳೆ ನಂತರದ ಸ್ಥಾನಗಳಲ್ಲಿದ್ದಾರೆ. ಆಸ್ಪ್ರೇಲಿಯಾದ ಮಾಜಿ ವೇಗಿ ಗ್ಲೆನ್‌ ಮೆಗ್ರಾಥ್‌ 949 ವಿಕೆಟ್‌ ಪಡೆದಿದ್ದಾರೆ.