"ನಾನು ಐಪಿಎಲ್'ನಿಂದ ಸಾಕಷ್ಟು ಕಲಿತಿದ್ದು, ಈ ಬಾರಿ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಖಚಿತತೆಯಿಲ್ಲ. ನಾನು ಬಾಂಗ್ಲಾ ಕ್ರಿಕೆಟ್ ಮಂಡಳಿಯ ಅನುಮತಿಗಾಗಿ ಎದುರು ನೋಡುತ್ತಿದ್ದೇನೆ"

ಹೈದರಾಬಾದ್(ಮಾ.31): ಬಾಂಗ್ಲಾದೇಶದ ಯುವ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಈ ಬಾರಿಯ ಐಪಿಎಲ್‌'ನಿಂದ ಹೊರಗುಳಿಯುವ ಸಾಧ್ಯತೆ ಇದೆ.

ಯಾರ್ಕರ್ ಸ್ಪೆಷಲಿಸ್ಟ್ ಮುಸ್ತಾಫಿಜುರ್, 2016ರ ಆವೃತ್ತಿಯಲ್ಲಿ ಸನ್‌'ರೈಸರ್ಸ್‌ ಹೈದರಾಬಾದ್ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 21 ವರ್ಷದ ಬಾಂಗ್ಲಾದೇಶದ ಯುವವೇಗಿ ಕಳೆದ ಆವೃತ್ತಿಯಲ್ಲಿ ತಾವಾಡಿದ 16 ಪಂದ್ಯಗಳಲ್ಲಿ 6.9ರ ಸರಾಸರಿಯಲ್ಲಿ 17 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು.

"ನಾನು ಐಪಿಎಲ್'ನಿಂದ ಸಾಕಷ್ಟು ಕಲಿತಿದ್ದು, ಈ ಬಾರಿ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಖಚಿತತೆಯಿಲ್ಲ. ನಾನು ಬಾಂಗ್ಲಾ ಕ್ರಿಕೆಟ್ ಮಂಡಳಿಯ ಅನುಮತಿಗಾಗಿ ಎದುರು ನೋಡುತ್ತಿದ್ದೇನೆ" ಎಂದು ಮುಸ್ತಾಫಿಜುರ್ ಪ್ರತಿಕ್ರಿಯಿಸಿದ್ದಾರೆ.

ಅತಿಯಾದ ಕ್ರಿಕೆಟ್‌ನಿಂದ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಅವರ ಮೇಲಿರುವ ಕೆಲಸದ ಹೊರೆಯನ್ನು ನಿಭಾಯಿಸಲು ನಿರ್ಧರಿಸಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ ಐಪಿಎಲ್‌'ನಲ್ಲಿ ಆಡಲು ಇನ್ನೂ ಅನುಮತಿ ನೀಡಿಲ್ಲ. ಬಿಸಿಬಿ ಮೂಲಗಳ ಪ್ರಕಾರ, ಮುಸ್ತಾಫಿಜುರ್ ಖಂಡಿತವಾಗಿಯೂ ಐಪಿಎಲ್‌'ನ ಮೊದಲ ಹಂತವನ್ನು ತಪ್ಪಿಸಿಕೊಳ್ಳಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ಷಮತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಐಪಿಎಲ್'ನಲ್ಲಿ ಬಾಗವಹಿಸದಿರುವುದೇ ಒಳಿತು ಎಂದು ಮುಸ್ತಾಫಿಜುರ್'ಗೆ ಹಿರಿಯ ಕ್ರಿಕೆಟಿಗ ಮಶ್ರಫೆ ಮೊರ್ತಾಜಾ ಸಲಹೆ ನೀಡಿದ್ದಾರೆ.