ಐಪಿಎಲ್ ಮಧ್ಯದಲ್ಲೇ ಬಿಟ್ಟು ಹೊರಟ ಬಾಂಗ್ಲಾ ಕ್ರಿಕೆಟಿಗರು..!
ಕೋಲ್ಕತಾ ನೈಟ್ರೈಡರ್ಸ್ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಮೇ 4ರಂದು ತಮ್ಮ ಈ ಆವೃತ್ತಿಯ ಐಪಿಎಲ್ ಅಭಿಯಾನವನ್ನು ಅಂತ್ಯಗೊಳಿಸಿ ತವರಿಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್(ಏ.23): ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಮುಸ್ತಾಫಿಜುರ್ ರಹಮಾನ್, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪೂರ್ವಸಿದ್ಧತೆ ನಡೆಸುವ ಸಲುವಾಗಿ ಏ.25ರಂದು ಬಾಂಗ್ಲಾದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ‘ಇಎಸ್ಪಿಎನ್ ಕ್ರಿಕ್ಇಸ್ಫೋ' ವರದಿ ಮಾಡಿದೆ. ಹೀಗಾಗಿ ಸನ್'ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.ಐರ್ಲೆಂಡ್'ನಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲೂ ಅವರು ಆಡಲಿದ್ದಾರೆ ಎನ್ನಲಾಗಿದೆ.
ಕೋಲ್ಕತಾ ನೈಟ್ರೈಡರ್ಸ್ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಮೇ 4ರಂದು ತಮ್ಮ ಈ ಆವೃತ್ತಿಯ ಐಪಿಎಲ್ ಅಭಿಯಾನವನ್ನು ಅಂತ್ಯಗೊಳಿಸಿ ತವರಿಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸನ್'ರೈಸರ್ಸ್ ಹೈದರಾಬಾದ್ ತಂಡವು ಏಪ್ರಿಲ್ 25ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದ್ದು ಆ ಪಂದ್ಯದಲ್ಲಿ ಮುಸ್ತಾಫಿಜುರ್ ಕಾಣಿಸಿಕೊಳ್ಳುವ ಸಾದ್ಯತೆಗಳಿಲ್ಲ. ಇನ್ನೊಂದೆಡೆ ಕೋಲ್ಕತಾ ನೈಟ್'ರೈಡರ್ಸ್ ತಂಡದ ಮುಂದಿನ ನಾಲ್ಕು ಪಂದ್ಯಗಳಿಗೆ ಶಕೀಬ್ ಲಭ್ಯವಾಗಲಿದ್ದಾರೆ.
ಮೇ 12ರಿಂದ ಐರ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ಒಳಗೊಂಡ ತ್ರಿಕೋನ ಸರಣಿಯಲ್ಲಿ ಮೊರ್ತಾಜ ಪಡೆ ಪಾಲ್ಗೊಳ್ಳಲಿದ್ದು, ಆನಂತರ ತ್ರಿಕೋನ ಸರಣಿಯ ಬಳಿಕ ಪಾಕಿಸ್ತಾನ ಹಾಗೂ ಭಾರತದೆದುರು ಎರಡು ಅಭ್ಯಾಸ ಪಂದ್ಯಗಳಲ್ಲಿ ಬಾಂಗ್ಲಾದೇಶ ಪಾಲ್ಗೊಳ್ಳಲಿದೆ.