ಲಂಕಾ ಸಚಿವರಿಗೆ ಮಂಕಿ ಎಂದ ವೇಗಿ ಮಾಲಿಂಗ ವಿಚಾರಣೆ
ಲೀಗ್ ಹಂತದಲ್ಲೇ ಹೊರಬಿದ್ದ ತಂಡವನ್ನು ಟೀಕಿಸುವ ಎಲ್ಲಾ ಅಧಿಕಾರ ಶ್ರೀಲಂಕಾ ಕ್ರೀಡಾ ಸಚಿವರಿಗಿದೆ. ಆದರೆ ಮಾಲಿಂಗ ಪರಿಸ್ಥಿತಿಯನ್ನು ಮೃದುವಾಗಿ ನಿಭಾಯಿಸಬಹುದಿತ್ತು.
ಕೊಲೊಂಬೊ(ಜೂ.27): ಶ್ರೀಲಂಕಾದ ಕ್ರೀಡಾ ಸಚಿವ ದಯಸಿರಿ ಜಯಶೇಖರ ಅವರನ್ನು ‘ಕೋತಿ’ಗೆ ಹೋಲಿಸಿದ್ದ ಲಸಿತ್ ಮಾಲಿಂಗ ಅವರ ವಿಚಾರಣೆ ನಡೆಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಈ ಸಂಬಂಧ ತ್ರಿಸದಸ್ಯ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು ಲಂಕಾ ಮಂಡಳಿ ಕಾರ್ಯದರ್ಶಿ ಮೊಹನ್ ಡಿ ಸಿಲ್ವಾ ಹಾಗೂ ಸಿಇಓ ಆಶ್ಲೆ ಡಿ ಸಿಲ್ವಾ ಈ ಸಮಿತಿಯಲ್ಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲೇ ನಿರ್ಗಮಿಸಿದ ಲಂಕಾ ತಂಡದ ಆಟಗಾರರ ದೈಹಿಕ ಕ್ಷಮತೆಯನ್ನು ಕ್ರೀಡಾ ಸಚಿವರು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಮಾಲಿಂಗ, ಸುಮ್ಮನೆ ಕುರ್ಚಿ ಬಿಸಿ ಮಾಡುವವರ ಟೀಕೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ರಿಕೆಟ್ ಬಗ್ಗೆ ಆ ಮಂಗನಿಗೇನು ಗೊತ್ತು ಎಂಬರ್ಥದಲ್ಲಿ ಶ್ರೀಲಂಕಾ ವೇಗಿ ವ್ಯಂಗ್ಯವಾಡಿದ್ದರು.
ಲೀಗ್ ಹಂತದಲ್ಲೇ ಹೊರಬಿದ್ದ ತಂಡವನ್ನು ಟೀಕಿಸುವ ಎಲ್ಲಾ ಅಧಿಕಾರ ಶ್ರೀಲಂಕಾ ಕ್ರೀಡಾ ಸಚಿವರಿಗಿದೆ. ಆದರೆ ಮಾಲಿಂಗ ಪರಿಸ್ಥಿತಿಯನ್ನು ಮೃದುವಾಗಿ ನಿಭಾಯಿಸಬಹುದಿತ್ತು. ಆದರೆ ಕ್ರೀಡಾ ಸಚಿವರ ಮೇಲೆ ವೈಯುಕ್ತಿಕ ಟೀಕೆ ಮಾಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಂತಾಗಿದೆ.