2019ರ ಏಕದಿನ ವಿಶ್ವಕಪ್ ನಂತರ ಕ್ರಿಕೆಟ್‌'ಗೆ ವಿದಾಯ ಘೋಷಿಸುವ ಚಿಂತನೆಯಲ್ಲಿರುವ ಮಾಲಿಂಗ, ಆ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಂಡರೆ ಅಚ್ಚರಿಯಿಲ್ಲ. 34 ವರ್ಷದ ವೇಗಿ ತಮ್ಮನ್ನು ತಂಡದಿಂದ ಏಕೆ ಕೈಬಿಡಲಾಗುತ್ತಿದೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.

ಕೊಲಂಬೊ(ಡಿ.30): ಪ್ರಚಂಡ ಯಾರ್ಕರ್‌'ಗಳ ಮೂಲಕ ಕ್ರಿಕೆಟ್ ಜಗತ್ತನ್ನು ಆಳಿದ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗಾ ಈಗ ನೆಟ್ ಬೌಲರ್...!

ನಂಬಲು ಕಷ್ಟವಾದರೂ ಇದು ನಿಜ. ಶ್ರೀಲಂಕಾ ತಂಡದಿಂದ ಹೊರಬಿದ್ದಿರುವ ಮಾಲಿಂಗ, ಅಭ್ಯಾಸ ಶಿಬಿರದಲ್ಲಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಯಿತು.

ಮುಂದಿನ ತಿಂಗಳು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಲಂಕಾ, ನೂತನ ಕೋಚ್ ಚಂದಿಕಾ ಹತುರಸಿಂಘ ಅವರ ನೇತೃತ್ವದಲ್ಲಿ ಗುರುವಾರದಿಂದ ಅಭ್ಯಾಸ ಶಿಬಿರ ಆರಂಭಿಸಿತು. 23 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯದ ಮಾಲಿಂಗ, ಮೈದಾನಕ್ಕೆ ಆಗಮಿಸಿ ನೆಟ್ಸ್‌'ನಲ್ಲಿ ಬ್ಯಾಟ್ಸ್‌'ಮನ್‌ಗಳಿಗೆ ನೆರವಾದರು. ‘ನಾನು ಕ್ರಿಕೆಟ್ ಆರಂಭಿಸಿದ ದಿನಗಳಲ್ಲಿ ರಾಷ್ಟ್ರೀಯ ತಂಡ ಅಭ್ಯಾಸ ನಡೆಸುತ್ತಿದ್ದ ವೇಳೆ ನೆಟ್ ಬೌಲರ್ ಆಗಿ ಅವರಿಗೆ ಸಹಕರಿಸುತ್ತಿದ್ದೆ. ಇದೀಗ ಆ ದಿನಗಳು ಮರಳಿವೆ. ಮತ್ತೆ ನೆಟ್ ಬೌಲರ್ ಆಗಿ ತಂಡಕ್ಕೆ ನೆರವು ನೀಡುವುದರಲ್ಲಿ ನನಗೆ ಖುಷಿಯಿದೆ’ ಎಂದು ಮಾಲಿಂಗ ಹೇಳಿದ್ದಾರೆ.

2019ರ ಏಕದಿನ ವಿಶ್ವಕಪ್ ನಂತರ ಕ್ರಿಕೆಟ್‌'ಗೆ ವಿದಾಯ ಘೋಷಿಸುವ ಚಿಂತನೆಯಲ್ಲಿರುವ ಮಾಲಿಂಗ, ಆ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಂಡರೆ ಅಚ್ಚರಿಯಿಲ್ಲ. 34 ವರ್ಷದ ವೇಗಿ ತಮ್ಮನ್ನು ತಂಡದಿಂದ ಏಕೆ ಕೈಬಿಡಲಾಗುತ್ತಿದೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.

‘ನನ್ನನ್ನು ಏಕೆ ಆಯ್ಕೆ ಮಾಡುತ್ತಿಲ್ಲ ಎಂದು ಆಯ್ಕೆಗಾರರ ಕಾರಣ ನೀಡಬೇಕು. 26-27 ವರ್ಷದ ಬೌಲರ್‌'ಗಳಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಆದರೆ ನನಗೀಗ ವಿಶ್ರಾಂತಿ ಬೇಕಿಲ್ಲ. ಹೆಚ್ಚು ಎಂದರೆ ಇನ್ನೆರಡು ವರ್ಷ ಕ್ರಿಕೆಟ್‌'ನಲ್ಲಿ ನಾನು ಮುಂದುವರಿಯಬಹುದು. ಈಗಲೂ ನನಗೆ ವಿಶ್ರಾಂತಿ ನೀಡುತ್ತಿದ್ದೇವೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದರೆ, ಅವರು ನನ್ನ ಅವಕಾಶ ಕಿತ್ತುಕೊಳ್ಳುತ್ತಿದ್ದಾರೆ ಎಂದರ್ಥ’ ಎಂದು ಮಾಲಿಂಗ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ ವಿರುದ್ಧ ಸೆಪ್ಟೆಂಬರ್‌'ನಲ್ಲಿ ನಡೆದ ಏಕೈಕ ಟಿ20 ಪಂದ್ಯದ ಬಳಿಕ ಅವರು ಲಂಕಾ ಪರ ಆಡುವ ಅವಕಾಶ ಪಡೆದಿಲ್ಲ. ಇತ್ತೀಚಿನ ದಿನಗಳಲ್ಲಿ ಅವರು ಲಯ ಕಳೆದುಕೊಂಡಿದ್ದಾರೆ ಎನಿಸಿದರಾದರೂ ಬಾಂಗ್ಲಾ ಪ್ರೀಮಿಯರ್ ಲೀಗ್ ಟಿ20ಯಲ್ಲಿ 8 ಪಂದ್ಯಗಳಿಂದ 8 ವಿಕೆಟ್ ಕಬಳಿಸಿದ್ದಾರೆ. 2017ರಲ್ಲಿ 6 ಟಿ20 ಪಂದ್ಯಗಳಿಂದ 12 ವಿಕೆಟ್ ಪಡೆದಿರುವ ಅವರು, 13 ಏಕದಿನಗಳಲ್ಲಿ 10 ವಿಕೆಟ್ ಪಡೆದಿದ್ದಾರೆ.

‘ಕಳೆದ 14 ವರ್ಷಗಳಿಂದ ನಾನು ಕ್ರಿಕೆಟ್ ಆಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಾನು ಈ ಮಟ್ಟದ ವೈಫಲ್ಯ ಕಾಣುತ್ತಿರುವುದು. 13 ಪಂದ್ಯಗಳಲ್ಲಿ ನನ್ನ ಬೌಲಿಂಗ್‌'ನಲ್ಲಿ 12 ಕ್ಯಾಚ್‌'ಗಳನ್ನು ಕೈಚೆಲ್ಲಲಾಗಿದೆ. ಆದರೆ ಅದು ಲೆಕ್ಕಕ್ಕಿಲ್ಲ. ವಿಕೆಟ್ ಅವಕಾಶ ಸೃಷ್ಟಿಸಿದ ಆಟಗಾರನನ್ನೇ ತಂಡದಿಂದ ಹೊರಗಿಡಲಾಗಿದೆ. ಆಯ್ಕೆ ಸಮಿತಿ ಈ ನಡೆ ಬೇಸರವನ್ನುಂಟು ಮಾಡಿದೆ’ ಎಂದು ಮಾಲಿಂಗ ಹೇಳಿದ್ದಾರೆ.