ಕರ್ನಾಟಕಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು, ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿರುವ ಛತ್ತೀಸ್'ಗಢದ ಸವಾಲನ್ನು ಎದುರಿಸಲಿದೆ.

ಕೋಲ್ಕತಾ(ಮಾ. 04): ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಇಂದು ಇಲ್ಲಿಯ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಡಿ ಗುಂಪಿನ ಐದನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡ ಹೈದರಾಬಾದ್ ವಿರುದ್ಧ 1 ವಿಕೆಟ್'ನಿಂದ ರೋಚಕ ಗೆಲುವು ಸಾಧಿಸಿದೆ. ಕರ್ನಾಟಕಕ್ಕೆ ಇದು ಸತತ ಐದನೇ ಜಯವಾಗಿದೆ. ಹೈದರಾಬಾದ್ ತಂಡವನ್ನು 108 ರನ್'ಗಳಿಗೆ ಆಲೌಟ್ ಮಾಡಿದ ಕರ್ನಾಟಕ, ಅಲ್ಪಮೊತ್ತದ ಗುರಿಯನ್ನು ಮುಟ್ಟಲು ಬಹಳ ಪರಿಶ್ರಮ ಪಡಬೇಕಾಯಿತು.

ವಿನಯ್ ಕುಮಾರ್ ರಾಜ್ಯದ ಗೆಲುವಿನ ರೂವಾರಿಯಾದರು. ಒಂದು ಹಂತದಲ್ಲಿ 65 ರನ್ನಿಗೆ 8 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಸೋಲಿನ ಸುಳಿಗೆ ಸಿಲುಕಿತ್ತು. 81 ರನ್ನಿಗೆ ಮತ್ತೊಂದು ವಿಕೆಟ್ ಪತನವಾದಾಗ ರಾಜ್ಯದ ಕತೆ ಮುಗಿಯಿತೆಂದೇ ಭಾವಿಸಲಾಗಿತ್ತು. ಆದರೆ, ಮಾಜಿ ಕ್ಯಾಪ್ಟನ್ ವಿನಯ್ ಕುಮಾರ್ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದರು. ವಿನಯ್ ಅಜೇಯ 35 ರನ್ ಗಳಿಸಿದರು. ಕೊನೆಯ ವಿಕೆಟ್'ಗೆ ವಿನಯ್'ಕುಮಾರ್ ಅವರೊಂದಿಗೆ ಪ್ರಸಿದ್ಧ್ ಕೃಷ್ಣ ಉಪಯುಕ್ತ ಜೊತೆಯಾಟದಲ್ಲಿ ಭಾಗಿಯಾದರು. ಕರ್ನಾಟಕ 30ನೇ ಓವರ್'ನಲ್ಲೇ ಗೆಲುವು ಗಳಿಸಿತಾದರೂ ಕೊನೆಯ 15 ಓವರ್'ಗಳಲ್ಲಿ ಸಾಕಷ್ಟು ಒತ್ತಡ ಮತ್ತು ಆತಂಕದ ಕ್ಷಣಗಳನ್ನು ಎದುರಿಸಿ ಪಾರಾಗಿದ್ದು ಗಮನಾರ್ಹ.

ಇದಕ್ಕೂ ಮೊದಲು, ಹೈದರಾಬಾದ್ ನಡೆಸಿದ ಬ್ಯಾಟಿಂಗ್'ನಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದವರು ಎರಡಂಕಿ ಮೊತ್ತ ಕೂಡ ದಾಖಲಿಸಲಿಲ್ಲ. ಕರ್ನಾಟಕದ ಆಲ್'ರೌಂಡರ್ ಕೆ.ಗೌತಮ್ 5 ವಿಕೆಟ್ ಕಬಳಿಸಿ ಹೈದರಾಬಾದಿ ಬ್ಯಾಟುಗಾರರನ್ನು ಬೇಸ್ತುಗೊಳಿಸಿದರು.

ಸತತ ಐದನೇ ಗೆಲುವು ಪಡೆದಿರುವ ಕರ್ನಾಟಕ ತಂಡ ಡಿ ಗುಂಪಿನ ಅಂಕಪಟ್ಟಿಯಲ್ಲಿ 20 ಪಾಯಿಂಟ್'ಗಳೊಂದಿಗೆ ಅಗ್ರಸ್ಥಾನ ಪಡೆದಿದೆ. ಕ್ವಾರ್ಟರ್'ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಇನ್ನೊಂದೆಡೆ ಸತತ ಐದನೇ ಪಂದ್ಯದ ಗೆಲುವು ಪಡೆಯಲು ವಿಫಲವಾದ ಹೈದರಾಬಾದ್ 16 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಈ ತಂಡ ಕೂಡ ಕ್ವಾರ್ಟರ್'ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಕರ್ನಾಟಕಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು, ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿರುವ ಛತ್ತೀಸ್'ಗಢದ ಸವಾಲನ್ನು ಎದುರಿಸಲಿದೆ.

ಸ್ಕೋರು ವಿವರ:

ಹೈದರಾಬಾದ್ 44 ಓವರ್ 108 ರನ್ ಆಲೌಟ್
(ಎಸ್.ಬದ್ರೀನಾಥ್ 18, ಆಕಾಶ್ ಭಂಡಾರಿ 17 ರನ್ - ಕೆ.ಗೌತಮ್ 28/5)

ಕರ್ನಾಟಕ 29.2 ಓವರ್ 109/9
(ಆರ್.ವಿನಯ್ ಕುಮಾರ್ ಅಜೇಯ 35, ಮಯಂಕ್ ಅಗರ್ವಾಲ್ 26, ಕೆ.ಗೌತಮ್ 16, ಸ್ಟುವರ್ಟ್ ಬಿನ್ನಿ 14 ರನ್ - ಮೊಹಮ್ಮದ್ ಸಿರಾಜ್ 24/3, ಸಿ.ವಿ.ಮಿಲಿಂದ್ 42/3, ರವಿ ಕಿರಣ್ 32/2)