ಅಹಮದಾಬಾದ್(ಅ.06): ಇದುವರೆಗೆ ನಡೆದಿರುವ ಅಷ್ಟೂ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಮೆರೆದಿರುವ ಭಾರತ ತಂಡ ಇದೀಗ ಶುಕ್ರವಾರದಿಂದ ಆರಂಭವಾಗುತ್ತಿರುವ ಏಳನೇ ಆವೃತ್ತಿಯ ಮತ್ತೊಂದು ಸುತ್ತಿನ ವಿಶ್ವ ಕಬಡ್ಡಿಗೆ ಅಣಿಯಾಗಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ಇದುವರೆಗೂ ನಡೆದಿರುವ ವಿಶ್ವಕಪ್ ಟೂರ್ನಿಗಳಲ್ಲಿ ಭಾರತದ್ದೇ ಅಧಿಪತ್ಯ, ಎಲ್ಲಾ ಆವೃತ್ತಿಗಳು ಭಾರತದಲ್ಲಿಯೇ ಆಯೋಜನೆಗೊಂಡಿದ್ದು ಎಲ್ಲದರಲ್ಲೂ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ, ಭಾರತಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಪಾಕಿಸ್ತಾನ ನಾಲ್ಕು ಬಾರಿ ರನ್ನರ್ಅಪ್ ಆಗಿದ್ದು, ಪ್ರಸಕ್ತ ಉಭಯ ದೇಶಗಳ ಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ಟೂರ್ನಿಯಿಂದ ಅದನ್ನು ಈ ಬಾರಿ ಬಹಿಷ್ಕರಿಸಲಾಗಿದೆ.
ಇನ್ನು 2010ರ ಚೊಚ್ಚಲ ಟೂರ್ನಿಯಿಂದ ಇಲ್ಲಿಯವರೆಗೂ ಅಂದರೆ ಸತತ 6 ವರ್ಷ ಕಾಲ ಭಾರತ ಚಿನ್ನ ಗೆದ್ದು ಸಾಧನೆ ಮೆರೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ನಲ್ಲಿ ಕಬಡ್ಡಿ ಟೂರ್ನಿ ನಡೆಯಲಿದೆ. ಪ್ರೊ ಲೀಗ್ಗಳಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡ ಆಟಗಾರರನ್ನು ಒಳಗೊಂಡ ಭಾರತ ತಂಡ ಸತತವಾಗಿ ತನ್ನ ಜೈತ್ರಯಾತ್ರೆ ಮುಂದುವರಿಸಿಕೊಂಡು ಬಂದಿದ್ದು, ಭಾರತ ತಂಡವನ್ನು ಮುನ್ನಡೆಸುತ್ತಿರುವ ಅನೂಪ್ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಭರವಸೆಯಲ್ಲಿದ್ದಾರೆ.
ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ, ಪ್ರೊ ಟೂರ್ನಿ ಬಂದ ನಂತರ ಆಧುನಿಕತೆಯ ಸ್ಪರ್ಶ ಸಿಕ್ಕಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಪ್ರಚುರತೆಯಿಂದ ಜನಮನಸದಲ್ಲಿ ಉದಯಿಸುತ್ತಿರುವ ಕಬಡ್ಡಿ ಕ್ರೀಡೆ, ಇತರೆ ಕ್ರೀಡೆಗಳಿಗಿಂತ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ.
ಭಾರತ ತಂಡ ಇಂತಿದೆ
ರೈಡರ್ಸ್: ಅನೂಪ್ ಕುಮಾರ್ (ನಾಯಕ), ಅಜಯ್ ಠಾಕೂರ್, ದೀಪಕ್ ಹೂಡಾ, ಜಸ್ವೀರ್ ಸಿಂಗ್, ಪ್ರದೀಪ್ ನರ್ವಾಲ್, ರಾಹುಲ್ ಚೌಧರಿ; ಡಿಫೆಂಡರ್ಸ್: ಡಿಫೆಂಡರ್ಸ್: ಧರ್ಮರಾಜ್ ಚೇರ್ಲಾಥನ್, ಕಿರಾಣ್ ಪರ್ಮಾರ್, ಮೋಹಿತ್ ಚಿಲ್ಲಾರ್, ಸುರೇಂದ್ರ ನಾಡ, ಸುರ್ಜಿತ್: ಆಲ್ರೌಂಡರ್ಸ್: ಮಂಜೀತ್ ಚಿಲ್ಲಾರ್, ನಿತಿನ್ ತೋಮರ್ ಮತ್ತು ಸಂದೀಪ್ ನರ್ವಾಲ್,
