ದೆಹಲಿ ಕ್ರಿಕೆಟ್ ತಂಡದಿಂದ ಅತ್ಯುತ್ತಮ ಕ್ರಿಕೆಟರ್ಸ್ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ , ಇಶಾಂತ್ ಶರ್ಮಾ ಸೇರಿದಂತೆ ಸ್ಟಾರ್ ಕ್ರಿಕೆಟಿಗರು ದೆಹಲಿ ಮೂಲದವರು. ಇದೇ ಸಾಲಿಗೆ ಸೇರಿಕೊಳ್ಳಬೇಕಿದ್ದ ಯುವ ಕ್ರಿಕೆಟಿಗ ಇದೀಗ ದೆಹಲಿ ತಂಡ ತೊರೆದಿದ್ದಾರೆ.

ದೆಹಲಿ(ಸೆ.20): ಅವಕಾಶಗಳನ್ನು ಅರಸಿ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಕರ್ನಾಟಕದ ನಾಯಕ ಆರ್ ವಿನಯ್ ಕುಮಾರ್ ಪಾಂಡಿಚೇರಿಗೆ ತೆರಳಿದ್ದರೆ, ಸ್ಟುವರ್ಟ್ ಬಿನ್ನಿ ನಾಗಾಲ್ಯಾಂಡ್ ತಂಡ ಸೇರಿಕೊಂಡಿದ್ದಾರೆ. ಇದೀಗ ದೆಹಲಿಯ ಯುವ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಉನ್ಮುಕ್ತ್ ಚಾಂದ್ ರಾಜ್ಯ ತಂಡ ತೊರೆದಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ವಿರಾಟ್ ಕೊಹ್ಲಿ, ಉನ್ಮಕ್ತ್ ಚಾಂದ್ ದಾಖಲೆ ಅಳಿಸಿ ಹಾಕಿದ ಪೃಥ್ವಿ ಶಾ

2012ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಉನ್ಮುಕ್ತ್ ಚಾಂದ್ ನೇತೃತ್ವದ ಟೀಂ ಇಂಡಿಯಾ ಪ್ರಶಸ್ತಿ ಗೆದ್ದು ಇತಿಹಾಸ ರಚಿಸಿತ್ತು. 16ನೇ ವಯಸ್ಸಿಗೆ ದೆಹಲಿ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದ್ದ ಚಾಂದ್, ಪ್ರತಿಭಾನ್ವಿತ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಚಾಂದ್ ದೆಹಲಿ ತಂಡ ತೊರೆದು ಉತ್ತರಖಂಡ ತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಯಶಸ್ಸಿಗೆ ಕಾರಣ ಬಿಟ್ಟಿಟ್ಟ ಗೌತಮ್ ಗಂಭೀರ್!

ದೆಹಲಿ ಕ್ರಿಕೆಟ್ ಸಂಸ್ಥೆಯಿಂದ ಕ್ಲೀಯರೆನ್ಸ್ ಸರ್ಟಿಫಿಕೇಟ್(NOC)ಪಡೆದಿರುವ ಚಾಂದ್, ಈಗಾಗಲೇ ಉತ್ತರಖಂಡ್ ತಂಡ ಸೇರಿಕೊಂಡಿದ್ದಾರೆ. ದೆಹಲಿ ತಂಡ ಬಿಡುವಾಗಿ ಭಾವುಕರಾದ ಚಾಂದ್, ನಾನು ದೆಹಲಿ ಹುಡುಗ ಎಂದು ಗುರುತಿಸಿಕೊಳ್ಳಲು ಇಷ್ಟ ಪಡುತ್ತೇನೆ. ದೆಹಲಿ ಪರ ಆಡಿದ ಪ್ರತಿಯೊಂದು ಕ್ಷಣಗಳು ನನಗೆ ಅಮೂಲ್ಯ ಆದರೆ ಕಳೆದ 2-3 ವರ್ಷಗಳಲ್ಲಿ ತಂಡದಿಂದ ಡ್ರಾಪ್ ಆಗಿತ್ತಿದ್ದೇನೆ. ಪ್ರತಿ ಪಂದ್ಯ ಕೂಡ ನನಗೆ ಕಮ್‌ಬ್ಯಾಕ್ ಪಂದ್ಯವಾಗಿತ್ತು. ಆದರೆ ಖಾಯಂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಉತ್ತರಖಂಡ ತಂಡ ಸೇರಿಕೊಳ್ಳುತ್ತಿದ್ದೇನೆ. ಹೊಸ ತಂಡ ನನಗೆ ಮತ್ತಷ್ಟು ಸವಾಲು ಒಡ್ಡಲಿದೆ ಎಂದು ಚಾಂದ್ ಹೇಳಿದ್ದಾರೆ.

ದೆಹಲಿ ತಂಡ ತೊರೆದ ಸ್ಟಾರ್ ಕ್ರಿಕೆಟಿಗರ ಪೈಕಿ ವಿರೇಂದ್ರ ಸೆಹ್ವಾಗ್ ಮುಂಚೂಣಿಯಲ್ಲಿದ್ದಾರೆ.