ಟೀಂ ಇಂಡಿಯಾ ಮಹಿಳಾ ತಂಡದ ಜೊತೆಗಿನ ಕಿತ್ತಾಟದ ಬಳಿಕ ಕೋಚ್ ತುಷಾರ್ ಅರೋಥೆ  ರಾಜಿನಾಮೆ ನೀಡಿದ್ದಾರೆ. ತುಷಾರ್ ರಾಜಿನಾಮೆ ತಂಡದಲ್ಲಿ ಸಂತಸ ಮೂಡಿಸಿದ್ದರೆ, ಬಿಸಿಸಿಐ ಆತಂಕಕ್ಕೆ ಕಾರಣವಾಗಿದೆ. 

ಮುಂಬೈ(ಜು.10): ಟೀಂ ಇಂಡಿಯಾ ಮಹಿಳಾ ಆಟಗಾರ್ತಿಯರೂ ಹಾಗೂ ಕೋಚ್ ನಡುವಿನ ಜಟಾಪಟಿ ಇದೀಗ ರಾಜಿನಾಮೆಯೊಂದಿಗೆ ಅಂತ್ಯವಾಗಿದೆ. ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಕೋಚ್ ತುಷಾರ್ ಆರೋಥೆ ರಾಜಿನಾಮೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಭಾರತ ತಂಡದ ಹೆಡ್ ಕೋಚ್ ತುಷಾರ್ ಆರೋಥೆ ಹಾಗೂ ತಂಡದ ಆಟಗಾರರ ನಡುವಿನ ಮನಸ್ತಾಪ ಹೆಚ್ಚಾಗಿತ್ತು. ತಂಡದ ಆಟಗಾರರು ಕೋಚ್ ವಿರುದ್ಧ ಬಿಸಿಸಿಐಗೂ ದೂರು ನೀಡಿದ್ದರು.

ಇದನ್ನು ಓದಿ: ಟೀಂ ಇಂಡಿಯಾ ಮಹಿಳಾ ತಂಡದಲ್ಲಿ ಎಲ್ಲವೂ ಸರಿಯಿಲ್ಲ!ಯಾಕೆ?

ಬಿಸಿಸಿಐ ಇತ್ತೀಚೆಗೆ ಆಯೋಜಿಸಿದ್ದ ಸಭೆಗೆ ನಾಯಕ ಮಿಥಾಲಿ ರಾಜ್, ಟಿ20 ನಾಯಕ ಹರ್ಮನ್‌ಪ್ರೀತ್ ಕೌರ್, ಬಿಸಿಸಿಐ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸಿಓಎ ವಿನೋದ್ ರೈ ಭಾಗವಹಿಸಿದ್ದರು. ಆದರೆ ಮಹಿಳಾ ತಂಡದ ಕೋಚ್ ತುಷಾರ್ ಅರೋಥೆ ಅವರಿಗೆ ಆಹ್ವಾನವೇ ನೀಡಿರಲಿಲ್ಲ. ಈ ಮೂಲಕ ಬಿಸಿಸಿಐ ಕೂಡ ಆರೋಥೆಗೆ ಪರೋಕ್ಷವಾಗಿ ಗೇಟ್ ಪಾಸ್ ನೀಡಿತ್ತು.

ಮಹಿಳಾ ತಂಡದ ಜೊತೆಗಿನ ಶೀತಲ ಸಮರದ ಬಳಿಕ ಕೋಚ್ ತುಷಾರ್ ಅರೋಥೆ ರಾಜಿನಾಮೆ ನೀಡಿದ್ದಾರೆ. ಇನ್ನೈದು ತಿಂಗಳಲ್ಲಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಹೀಗಾಗಿ ಶೀಘ್ರದಲ್ಲೇ ನೂತನ ಕೋಚ್ ನೇಮಕ ಮಾಡಬೇಕಾದ ಅನಿವಾರ್ಯತೆ ಬಿಸಿಸಿಐಗೆ ಬಂದೊದಗಿದೆ.