ರಣಜಿ ಟ್ರೋಫಿ ಫೈನಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವು ಕರ್ನಾಟಕದ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಪಡೆದ ಕಾಶ್ಮೀರ, ನಾಲ್ಕನೇ ದಿನದಂತ್ಯಕ್ಕೆ ಒಟ್ಟಾರೆ 477 ರನ್‌ಗಳ ಮುನ್ನಡೆಯೊಂದಿಗೆ ಚೊಚ್ಚಲ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದೆ.  

ಅಜೀಜ ಅಹ್ಮದ ಬಳಗಾನೂರ, ಕನ್ನಡಪ್ರಭ

ಹುಬ್ಬಳ್ಳಿ: ಅತ್ಯುತ್ತಮ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವತ್ತ ದಾಪುಗಾಲು ಹಾಕಿದ್ದು, ಪವಾಡ ನಡೆಯದಿದ್ದರೆ ಈ ಬಾರಿ ಟೂರ್ನಿಯಲ್ಲಿ ಚಾಂಪಿಯನ್‌ ಆಗುವುದು ನಿಶ್ಚಿತ. ಇದರೊಂದಿಗೆ ಕರ್ನಾಟಕದ 11 ವರ್ಷಗಳ ಬಳಿಕ ರಣಜಿ ಗೆಲ್ಲುವ ಕನಸು ಬಹುತೇಕ ಭಗ್ನಗೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ ಕಲೆಹಾಕಿದ್ದ ಜಮ್ಮು-ಕಾಶ್ಮೀರ ತಂಡ ಕರ್ನಾಟಕವನ್ನು 293 ರನ್‌ಗೆ ಆಲೌಟ್‌ ಮಾಡಿ, 291 ರನ್‌ಗಳ ದೊಡ್ಡ ಲೀಡ್‌ ಪಡೆದರೂ ಆತಿಥೇಯರ ಮೇಲೆ ಫಾಲೋಆನ್‌ ಹೇರಲಿಲ್ಲ. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ತಂಡ 4ನೇ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿದ್ದು, ಒಟ್ಟಾರೆ 477 ರನ್‌ಗಳ ಮುನ್ನಡೆಯೊಂದಿಗೆ ಗೆಲುವಿನ ಹಾದಿಯಲ್ಲಿದೆ. ಶನಿವಾರ ಪಂದ್ಯದ ಕೊನೆ ದಿನವಾಗಿದೆ. ಪಂದ್ಯ ಡ್ರಾ ಆದರೂ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಜಮ್ಮು-ಕಾಶ್ಮೀರ ಪ್ರಶಸ್ತಿ ತನ್ನದಾಗಿಸಿಕೊಳ್ಳಲಿದೆ.

ಮಯಾಂಕ್ ಅಗರ್‌ವಾಲ್ 160:

3ನೇ ದಿನದಂತ್ಯಕ್ಕೆ ಮಯಾಂಕ್‌ ಅಗರ್‌ವಾಲ್‌ ಅಜೇಯ 130 ನೆರವಿನಿಂದ ಕರ್ನಾಟಕ 5 ವಿಕೆಟ್‌ಗೆ 220 ರನ್‌ ಗಳಿಸಿತ್ತು. 4ನೇ ದಿನವಾದ ಶುಕ್ರವಾರ ಕರ್ನಾಟಕ ದೊಡ್ಡ ಹೋರಾಟ ನಡೆಸಲಿಲ್ಲ. ವಿವಾದಿತ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದ ಕೃತಿಕ್‌ ಕೃಷ್ಣ 36 ರನ್‌ಗೆ ಔಟಾದರೆ, ಮಯಾಂಕ್‌ ಹೋರಾಟ 160 ರನ್‌ಗೆ ಕೊನೆಗೊಂಡಿತು. ತಂಡ ಹಿಂದಿನ ದಿನದ ಮೊತ್ತಕ್ಕೆ 73 ರನ್ ಸೇರಿಸಿ ಆಲೌಟಾಯಿತು. ಆಕಿಬ್ ನಬಿ 5 ವಿಕೆಟ್‌ ಗೊಂಚಲು ಪಡೆದರು.

2ನೇ ಇನ್ನಿಂಗ್ಸ್‌: 

ನಂತರ 2ನೇ ಇನಿಂಗ್ಸ್ ಆರಂಭಿಸಿದ ಜಮ್ಮು-ಕಾಶ್ಮೀರ ತಂಡಕ್ಕೆ ಆರಂಭಿಕ ಬ್ಯಾಟರ್ ಕಮ್ರಾನ್ ಇಕ್ಬಾಲ್(ಅಜೇಯ 94) ಆಸರೆಯಾದರು. 11 ರನ್‌ ಗಳಿಸುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡರೂ ಬಳಿಕ ತಂಡ ಚೇತರಿಸಿಕೊಂಡಿತು. ಅಬ್ದುಲ್‌ ಸಮದ್‌ 34 ರನ್‌ಗೆ ಔಟಾದರೆ, ಅಜೇಯ 16 ರನ್‌ ಸಿಡಿಸಿರುವ ಸಾಹಿಲ್‌ ಲೋತ್ರಾ ಅವರು ಇಕ್ಬಾಲ್‌ ಜೊತೆ ಕೊನೆ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಪ್ರಸಿದ್ಧ್‌ ಕೃಷ್ಣ 2 ವಿಕೆಟ್‌ ಪಡೆದರು.

ಸ್ಕೋರ್: ಜಮ್ಮು-ಕಾಶ್ಮಿರ ಮೊದಲ ಇನ್ನಿಂಗ್ಸ್‌ 584/10 ಮತ್ತು 2ನೇ ಇನ್ನಿಂಗ್ಸ್‌ 186/4 (4ನೇ ದಿನದಂತ್ಯಕ್ಕೆ) (ಕಮ್ರಾನ್‌ ಔಟಾಗದೆ 94, ಸಮದ್‌ 32, ಪ್ರಸಿದ್ಧ್‌ 2-42), ಕರ್ನಾಟಕ ಮೊದಲ ಇನ್ನಿಂಗ್ಸ್ 293/10 (ಮಯಾಂಕ್ 160, ಕೃತಿಕ್‌ 36, ಆಕಿಬ್ 5-54, ಸುನೀಲ್‌ 2-51, ಯುಧ್‌ವೀರ್‌ 2-55)

ಕರ್ನಾಟಕ ಕಪ್‌ ಗೆಲ್ಲಲು ಪವಾಡ ಘಟಿಸಬೇಕು!

ಪಂದ್ಯದ ಈಗಿನ ಸ್ಥಿತಿ ಗಮನಿಸಿದರೆ ಕರ್ನಾಟಕ ಗೆಲ್ಲುವುದು ಕನಸಿನ ಮಾತು. ಗೆಲ್ಲಬೇಕಿದ್ದರೆ ಪವಾಡವೇ ಘಟಿಸಬೇಕು. ಜಮ್ಮು-ಕಾಶ್ಮೀರ ಈಗ 477 ರನ್‌ ಮುನ್ನಡೆಯಲ್ಲಿದೆ. ಶನಿವಾರ ಜಮ್ಮು-ಕಾಶ್ಮೀರವನ್ನು ಬೇಗನೇ ಆಲೌಟ್‌ ಮಾಡಿ, ಅಂದಾಜು 500ರ ಗುರಿ ಪಡೆದು ಅದನ್ನು ಕರ್ನಾಟಕ ಟಿ20 ಮಾದರಿಯಲ್ಲಿ ಚೇಸ್‌ ಮಾಡಬೇಕು. ಆದರೆ ಕೊನೆ ದಿನ ಪಿಚ್‌ ವರ್ತಿಸುವ ರೀತಿ ಹಾಗೂ ಜಮ್ಮು-ಕಾಶ್ಮೀರದ ಪ್ರಬಲ ಬೌಲಿಂಗ್‌ ಪಡೆಯನ್ನು ಗಮನಿಸಿದರೆ ಕರ್ನಾಟಕಕ್ಕೆ ಇದು ಅಸಾಧ್ಯ. ಪಂದ್ಯ ಡ್ರಾ ಆದರೆ ಜಮ್ಮು-ಕಾಶ್ಮೀರ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಚಾಂಪಿಯನ್‌ ಆಗಲಿದೆ.