ಭಾರತ-ವಿಂಡೀಸ್ 4ನೇ ಏಕದಿನ ಪಂದ್ಯ ಸ್ಥಳಾಂತರ!
ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಏಕದಿನ ಸರಣಿಗೆ ಹಲವು ಅಡೆ ತಡೆ ಎದುರಾಗಿದೆ. ಆರಂಭದಲ್ಲಿ ಟಿಕೆಟ್ ಸಮಸ್ಯೆಯಿಂದ ಪಂದ್ಯ ಸ್ಥಳಾಂತರಗೊಂಡಿತ್ತು. ಆದರೆ ಇದೀಗ ಅಧಿಕಾರಿಗಳಿಲ್ಲ ಕಾರಣ ಪಂದ್ಯ ವಾಂಖೇಡೆ ಕ್ರೀಡಾಂಗಣದಿಂದ ಶಿಫ್ಟ್ ಆಗಿದೆ.
ಮುಂಬೈ(ಅ.13): ಭಾರತ-ವೆಸ್ಟ್ಇಂಡೀಸ್ ನಡುವಿನ 4ನೇ ಏಕದಿನ ಪಂದ್ಯ ವಾಂಖೇಡೆ ಕ್ರೀಡಾಂಗಣದಿಂದ ಇಲ್ಲಿನ ಬ್ರೇಬೊರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿದೆ. ಪಂದ್ಯ ಅ.29ರಂದು ನಡೆಯಲಿರುವ ಪಂದ್ಯದ ಸ್ಥಳಾಂತರಕ್ಕೆ ಬಿಸಿಸಿಐ ತಾಂತ್ರಿಕ ಸಮಸ್ಯೆಯ ಕಾರಣ ನೀಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲು ಸೂಕ್ತ ಅಧಿಕಾರಿಗಳಿಲ್ಲ. ಪಂದ್ಯದದ ಉಸ್ತುವಾರಿ, ಹಣಕಾಸು ಸೇರಿದಂತೆ ಹಲವು ವಿಚಾಗಳ ಮೇಲುಸ್ತುವಾರಿಗೆ ಯಾವುದೇ ಅಧಿಕಾರಿಗಳಿಲ್ಲ ಎಂದು ಮಂಬೈ ಕ್ರಿಕೆಟ್ ಸಂಸ್ಥೆ ಹೇಳಿತ್ತು. ಇದರ ಬೆನ್ನಲ್ಲೇ ಪಂದ್ಯವನ್ನ ಸ್ಥಳಾಂತರಗೊಳಿಸಲಾಗಿದೆ.
ಹಣಕಾಸಿನ ನಿರ್ಬಂಧಗಳಿಂದಾಗಿ ಪಂದ್ಯಕ್ಕೆ ಆತಿಥ್ಯ ವಹಿಸುವುದು ಅಸಾಧ್ಯ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಅಧಿಕಾರಿಗಳು ಈ ಹಿಂದೆಯೇ ತಿಳಿಸಿದ್ದರು. ಈ ವರ್ಷದ ಆರಂಭದಲ್ಲಿ ಬಾಂಬೆ ಹೈಕೋರ್ಟ್ ಎಂಸಿಎಗೆ ಇಬ್ಬರು ನಿವೃತ್ತಿ ನ್ಯಾಯಾಧೀಶರನ್ನು ಆಡಳಿತಗಾರರನ್ನಾಗಿ ನೇಮಿಸಿತ್ತು. ಸೆ.14ರಂದು ಈ ಇಬ್ಬರು ಅಧಿಕಾರಿ ತ್ಯಜಿಸಿದ್ದರು. ಆ ಬಳಿಕ ಎಂಸಿಎ ಬ್ಯಾಂಕ್ ಖಾತೆಗಳನ್ನು ಯಾರು ನಿರ್ವಹಿಸಬೇಕು ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದ ಕಾರಣ ಪಂದ್ಯ ಆಯೋಜನೆ ಅಸಾಧ್ಯ ಎಂದು ಎಂಸಿಎ ಅಧಿಕಾರಿಗಳು ಬಿಸಿಸಿಐಗೆ ವಿವರಣೆ ನೀಡಿದ್ದಾರೆ.