ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಅಂತ್ಯಗೊಂಡಿದೆ. ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸತತ 2ನೇ ಬಾರಿಗೆ ಬಾಂಗ್ಲಾದೇಶ ತಂಡವನ್ನ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ ರೋಚಕ ಹೋರಾಟ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು. ಪಂದ್ಯದ ಹೈಲೈಟ್ಸ್ ಇಲ್ಲಿದೆ.

ದುಬೈ(ಸೆ.29): ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಭಾರತ 7ನೇ ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದುಕೊಂಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Scroll to load tweet…

ಗೆಲುವಿಗೆ 223 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾಗೆ ನಿರೀಕ್ಷಿತ ಒಪನಿಂಗ್ ಸಿಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 15 ರನ್ ಸಿಡಿಸಿ ಔಟಾದರು. ಇನ್ನು ಅಂಬಾಟಿ ರಾಯುಡು ಕೇವಲ 2 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ನಾಯಕ ರೋಹಿತ್ ಶರ್ಮಾ ಅಲ್ಪ ಹೋರಾಟ ನೀಡಿದರು.

ರೋಹಿತ್ ಶರ್ಮಾ 48 ರನ್ ಸಿಡಿಸಿ ನಿರ್ಗಮಿಸಿದರು. 83 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ತಂಡಕ್ಕೆ ಎಂ.ಎಸ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಆಸರೆಯಾದರು. ಆದರೆ ಕಾರ್ತಿಕ್ ಆಟ 37 ರನ್‌ಗಳಿಗೆ ಅಂತ್ಯವಾಯಿತು.

ಎಂ.ಎಸ್ ಧೋನಿ 36 ರನ್ ಸಿಡಿಸಿ ಔಟಾದರು. ಧೋನಿ ವಿಕೆಟ್ ಪತನವಾಗುತ್ತಿದ್ದಂತೆ ಟೀಂ ಇಂಡಿಯಾದಲ್ಲಿ ಆತಂಕ ಹೆಚ್ಚಾಯಿತು. ನಂತರ ಬಂದ ಕೇದಾರ್ ಜಾಧವ್ ಬಿರುಸಿನ ಹೊಡೆತಕ್ಕೆ ಮುಂದಾದರು. ಆದರೆ 19 ರನ್ ಸಿಡಿದ ಜಾಧವ್ ಇಂಜುರಿಗೆ ತುತ್ತಾಗಿ ಮೈದಾನದಿಂದ ಹೊರನಡೆದರು.

ರವೀಂದ್ರ ಜಡೇಜಾ ಹಾಗೂ ಭುವನೇಶ್ವರ್ ಕುಮಾರ್ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. ಆದರೆ ಜಡೇಜಾ 23 ರನ್ ಸಿಡಿಸಿ ಔಟಾದರು. ಭುವನೇಶ್ವರ್ ಕುಮಾರ್ 21 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

7 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಗೆಲುವಿಗೆ ಅಂತಿಮ 11 ಎಸೆತದಲ್ಲಿ 9 ರನ್‌ಗಳು ಬೇಕಿತ್ತು. ಇಂಜುರಿಯಿಂದ ಚೇತರಿಸಿಕೊಂಡ ಮತ್ತೆ ಕಣಕ್ಕಿಳಿದ ಕೇದಾರ್ ಜಾದವ್ ಹಾಗೂ ಕುಲ್ದೀಪ್ ಯಾದವ್ ಜವಾಬ್ದಾರಿಯುತ ಆಟದಿಂದ ಅಂತಿಮ ಎಸೆತದಲ್ಲಿ ಭಾರತ 3 ವಿಕೆಟ್ ಗೆಲುವು ಸಾಧಿತು.