ಏಷ್ಯಾ ಕಪ್ ಪ್ರಶಸ್ತಿ ಗೆದ್ದ ಭಾರತ ತಂಡ, ನಾಲ್ಕು ರಾಷ್ಟ್ರಗಳ ಆಹ್ವಾನಿತ ಟೂರ್ನಿಯಲ್ಲಿ ಪ್ರಬಲ ಜರ್ಮನಿ ತಂಡವನ್ನು ಮಣಿಸಿ ಟ್ರೋಫಿ ಜಯಿಸಿದ ಸಾಧನೆ ಮಾಡಿದೆ ಎಂದು ಕೋಚ್ ಹರೀಂದರ್ ಸಿಂಗ್ ಹೇಳಿದ್ದಾರೆ.

ಲಕ್ನೋ(ಡಿ.09): ಎಲ್ಲಾ ವಿಭಾಗಗಳಲ್ಲಿಯೂ ಸಮರ್ಥ ಆಟಗಾರರನ್ನು ಒಳಗೊಂಡಿರುವ ಭಾರತ ಹಾಕಿ ತಂಡ, ಕಿರಿಯರ ವಿಶ್ವಕಪ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.

ಇಲ್ಲಿನ ಮೇಜರ್ ಧ್ಯಾನ್‌'ಚಂದ್ ಆ್ಯಸ್ಟ್ರೋಟರ್ಫ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಪ್ರಭಾವಿ ಪ್ರದರ್ಶನ ತೋರುವ ಉತ್ಸಾಹದಲ್ಲಿದೆ ಕಿರಿಯರ ಹಾಕಿ ತಂಡದ್ದಾಗಿದೆ.

ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 4-0 ಗೋಲುಗಳಿಂದ ಕೆನಡಾ ವಿರುದ್ಧ ಗೆಲುವು ಪಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. 15 ವರ್ಷಗಳ ನಂತರ ಪ್ರಶಸ್ತಿ ಜಯಿಸುವ ಹುಮ್ಮಸ್ಸಿನಲ್ಲಿರುವ ಭಾರತ ತಂಡ ಉತ್ತಮ ಆಟವಾಡುತ್ತಿದೆ. ಈ ಹಿಂದೆ 2001ರಲ್ಲಿ ಆಸ್ಟ್ರೇಲಿಯಾದ ಹೋಬಾರ್ಟ್‌ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಭಾರತ ಕಿರಿಯರ ತಂಡ ಇತರೆ ಪಂದ್ಯಾವಳಿಗಳನ್ನು ಗೆದ್ದ ಸಾಧನೆ ಮಾಡಿದೆ ಹೊರತು, ವಿಶ್ವಕಪ್ ಪ್ರಶಸ್ತಿ ಜಯಿಸುವಲ್ಲಿ ಹಿನ್ನಡೆ ಅನುಭವಿಸಿತ್ತು.

‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಜಯಿಸುವ ಉತ್ಸಾಹದಲ್ಲಿದೆ. ಇದರಿಂದಾಗಿ ಭಾರತ ತಂಡ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದರೆ, ಕ್ವಾರ್ಟರ್‌ ಫೈನಲ್‌ನಲ್ಲಿ 6 ಬಾರಿ ಪ್ರಶಸ್ತಿ ವಿಜೇತ ತಂಡ, ಹಾಲಿ ಚಾಂಪಿಯನ್ ಜರ್ಮನಿಯನ್ನು ಎದುರಿಸುವುದನ್ನು ತಪ್ಪಿಸಬಹುದಾಗಿದೆ. ಆದರೆ ಭಾರತ ಪ್ರಸಕ್ತ ವರ್ಷದಲ್ಲಿ ಸಾಕಷ್ಟು ಯಶಸ್ಸುಗಳನ್ನು ಸಾಧಿಸಿದೆ.

ಏಷ್ಯಾ ಕಪ್ ಪ್ರಶಸ್ತಿ ಗೆದ್ದ ಭಾರತ ತಂಡ, ನಾಲ್ಕು ರಾಷ್ಟ್ರಗಳ ಆಹ್ವಾನಿತ ಟೂರ್ನಿಯಲ್ಲಿ ಪ್ರಬಲ ಜರ್ಮನಿ ತಂಡವನ್ನು ಮಣಿಸಿ ಟ್ರೋಫಿ ಜಯಿಸಿದ ಸಾಧನೆ ಮಾಡಿದೆ ಎಂದು ಕೋಚ್ ಹರೀಂದರ್ ಸಿಂಗ್ ಹೇಳಿದ್ದಾರೆ.