ಕಳೆದ 11 ವಿಶ್ವಕಪ್ ಆವೃತ್ತಿಗಳಲ್ಲಿ ಟೀಂ ಇಂಡಿಯಾ ಕಂಡ ಕೆಲವು ಮಧುರ ಹಾಗೆಯೇ ಮತ್ತೆ ಕೆಲವು ಕರಾಳ ಕ್ಷಣಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 

ಬೆಂಗಳೂರು[ಮೇ.29]: ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. 12ನೇ ಆವೃತ್ತಿಯ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಆತಿಥ್ಯ ವಹಿಸಿದ್ದು, ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ.
1975ರಿಂದ 2015ರವರಗೆ ಟೀಂ ಇಂಡಿಯಾ ಹಲವು ಏರು-ಪೇರುಗಳಿಗೆ ಸಾಕ್ಷಿಯಾಗಿದೆ. 1983ರಲ್ಲಿ ಕಪಿಲ್ ದೇವ್ ಹಾಗೂ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ವಿಶ್ವಕಪ್ ಜಯಿಸಿತ್ತು. ಇದೀಗ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಮತ್ತೊಮ್ಮೆ ವಿಶ್ವಕಪ್ ಗೆದ್ದು ಇತಿಹಾಸ ಬರೆಯಲು ಎದುರು ನೋಡುತ್ತಿದೆ.

Add Asianetnews Kannada as a Preferred SourcegooglePreferred

ಈ ಸಂದರ್ಭದಲ್ಲಿ ಕಳೆದ 11 ವಿಶ್ವಕಪ್ ಆವೃತ್ತಿಗಳಲ್ಲಿ ಟೀಂ ಇಂಡಿಯಾ ಕಂಡ ಕೆಲವು ಮಧುರ ಹಾಗೆಯೇ ಮತ್ತೆ ಕೆಲವು ಕರಾಳ ಕ್ಷಣಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 

ಮಧುರ ಕ್ಷಣಗಳು:

* 1975ರಲ್ಲಿ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಅತ್ಯಂತ ಶಿಸ್ತುಬದ್ಧ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಈಸ್ಟ್ ಆಫ್ರಿಕಾ ವಿರುದ್ಧ 12 ಓವರ್ ಮಾಡಿ 8 ಮೇಡನ್ ಸಹಿತ 6 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. [*12-08-06-1 ಆಗ ಏಕದಿನ ಪಂದ್ಯಗಳಲ್ಲಿ 60 ಓವರ್ ಮಾಡಲಾಗುತ್ತಿತ್ತು] 

* ಯಶ್‌ಪಾಲ್ ಶರ್ಮಾ ಬಾರಿಸಿದ 89 ರನ್ ನೆರವಿನಿಂದ 1983ರಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಗ್ರೂಪ್ ಹಂತದಲ್ಲೇ ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿತ್ತು. 

* 1983ರಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ ಬಾರಿಸಿದ 175 ರನ್ ಹಾಗೂ ವಿಶ್ವಕಪ್ ಫೈನಲ್ ನಲ್ಲಿ ಕಪಿಲ್ ವಿಂಡೀಸ್ ದೈತ್ಯ ಕ್ರಿಕೆಟಿಗ ವೀವ್ ರಿಚರ್ಡ್ಸನ್ ಅವರ ಕ್ಯಾಚ್ ಹಿಡಿದ್ದದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಲ್ಲಿ ಹಚ್ಚಹಸಿರಾಗಿ ಉಳಿದಿದೆ.

* 1987ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವೇಗಿ ನ್ಯೂಜಿಲೆಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ವಿಶ್ವದ ಬೌಲರ್ ಹೆಗ್ಗಳಿಕೆಗೆ ಚೇತನ್ ಶರ್ಮಾ ಭಾಜನರಾಗಿದ್ದರು.

* 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಆಲ್ರೌಂಡ್ ಪ್ರದರ್ಶನ, ಫೈನಲ್ ಪಂದ್ಯದಲ್ಲಿ ಗೌತಮ್ ಗಂಭೀರ್ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ದೇಶ ಖುಷಿಯ ಹೊನಲಿನಲ್ಲಿ ತೇಲುವಂತೆ ಮಾಡಿದ್ದು ಟೀಂ ಇಂಡಿಯಾದ ಮಧುರ ಕ್ಷಣಗಳಲ್ಲಿ ಒಂದು.

ಕರಾಳ ಕ್ಷಣ:

* 1975ರ ವಿಶ್ವಕಪ್ ಟೂರ್ನಿಯಲ್ಲಿ ಸುನಿಲ್ ಗವಾಸ್ಕರ್ 174 ಎಸೆತಗಳನ್ನು ಎದುರಿಸಿ ಅಜೇಯ 36 ರನ್ ಬಾರಿಸಿದ್ದು, ಭಾರತದ ಅತ್ಯಂತ ಕೆಟ್ಟ ಇನ್ನಿಂಗ್ಸ್ಗಳಲ್ಲಿ ಒಂದಾಗಿದೆ.

* 1996ರ ವಿಶ್ವಕಪ್ ಟೂರ್ನಿಯಲ್ಲಿ ಕೋಲ್ಕತಾದ ಈಡನ್ಗಾರ್ಡನ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಆಘಾತಕಾರಿ ಸೋಲು, ವಿನೋದ್ ಕಾಂಬ್ಳಿ ಕಣ್ಣೀರಿಟ್ಟಿದ್ದು ಭಾರತದ ಕಹಿಘಟನೆಗಳಲ್ಲಿ ಒಂದು.

* 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ಗಳ ಹೀನಾಯ ಸೋಲು ಕಂಡು ಲೀಗ್ ಹಂತದಲ್ಲೇ ಹೊರಬಿದ್ದಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಇಂದಿಗೂ ಮರೆತಿಲ್ಲ.