ಏಷ್ಯನ್ ಗೇಮ್ಸ್‌ ಚಿನ್ನ ವಿಜೇತ ಪುರುಷ ಡಬಲ್ಸ್‌ ಜೋಡಿ, ವಿಶ್ವ ನಂ.1 ಸಾತ್ವಿಕ್‌-ಚಿರಾಗ್‌ ಶೆಟ್ಟಿ ಫ್ರಾನ್ಸ್‌ನ ಲ್ಯುಕಾಸ್‌ ಕಾರ್ವೀ-ರೋನನ್‌ ಲಾಬರ್‌ ವಿರುದ್ಧ 21-13, 21-13 ಅಂತರದಲ್ಲಿ ಸುಲಭ ಜಯಗಳಿಸಿ 2ನೇ ಸುತ್ತು ಪ್ರವೇಶಿಸಿದರು.

ರೆನ್ನೆಸ್‌(ಫ್ರಾನ್ಸ್‌): ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಇಲ್ಲಿ ಆರಂಭಗೊಂಡ ಫ್ರೆಂಚ್ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಿಂಧು, ಇಂಡೋನೇಷ್ಯಾದ ಗ್ರೆಗೋರಿಯಾ ಮಾರಿಸ್ಕಾ ವಿರುದ್ಧ 12-21, 21-18, 21-15ರಲ್ಲಿ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ಏಷ್ಯನ್ ಗೇಮ್ಸ್‌ ಚಿನ್ನ ವಿಜೇತ ಪುರುಷ ಡಬಲ್ಸ್‌ ಜೋಡಿ, ವಿಶ್ವ ನಂ.1 ಸಾತ್ವಿಕ್‌-ಚಿರಾಗ್‌ ಶೆಟ್ಟಿ ಫ್ರಾನ್ಸ್‌ನ ಲ್ಯುಕಾಸ್‌ ಕಾರ್ವೀ-ರೋನನ್‌ ಲಾಬರ್‌ ವಿರುದ್ಧ 21-13, 21-13 ಅಂತರದಲ್ಲಿ ಸುಲಭ ಜಯಗಳಿಸಿ 2ನೇ ಸುತ್ತು ಪ್ರವೇಶಿಸಿದರು.

ಸರಬ್‌ಜೋತ್‌ ಸಿಂಗ್‌ ಒಲಿಂಪಿಕ್ಸ್‌ಗೆ ಅರ್ಹತೆ

ಚಾಂಗ್ವೊನ್‌(ದ.ಕೊರಿಯಾ): ಇಲ್ಲಿ ನಡೆಯುತ್ತಿರುವ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಶೂಟರ್‌ ಸರಬ್‌ಜೋತ್‌ ಸಿಂಗ್‌ ಕಂಚಿನ ಪದಕ ಗೆದ್ದಿದ್ದು, ಜೊತೆಗೆ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದುಕೊಂಡಿದ್ದಾರೆ. ಮಂಗಳವಾರ ಪುರುಷರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಸರಬ್‌ಜೋತ್‌ 221.1 ಅಂಕಗಳೊಂದಿಗೆ 3ನೇ ಸ್ಥಾನಿಯಾದರು. 

Asian Para Games 2023: ಭಾರತಕ್ಕೆ ಪದಕ ಸುರಿಮಳೆ

ಇದು ಪಿಸ್ತೂಲ್‌ ವಿಭಾಗದಲ್ಲಿ ಮೊದಲನೇ ಹಾಗೂ ಒಟ್ಟಾರೆ ಶೂಟಿಂಗ್‌ನಲ್ಲಿ ಭಾರತಕ್ಕೆ ಸಿಕ್ಕ 8ನೆ ಒಲಿಂಪಿಕ್‌ ಕೋಟಾ. ಈ ಮೊದಲು ಏಷ್ಯನ್‌ ಗೇಮ್ಸ್ ಹಾಗೂ ಇತರ ಕೂಟಗಳ ಮೂಲಕ ಭಾರತಕ್ಕೆ 7 ಒಲಿಂಪಿಕ್‌ ಕೋಟಾ ಲಭ್ಯವಾಗಿತ್ತು. ಇದೇ ವೇಳೆ ಕೂಟದ ಕಿರಿಯ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಸೈನ್ಯಂ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅವರು ಫೈನಲ್‌ನಲ್ಲಿ 240.6 ಅಂಕ ಸಂಪಾದಿಸಿದರು

ರಾಷ್ಟ್ರೀಯ ಗೇಮ್ಸ್‌: ರಾಜ್ಯಕ್ಕೆ 2 ಚಿನ್ನ!

ಪಣಜಿ: ಇಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕ ಬ್ಯಾಡ್ಮಿಂಟನ್‌ನಲ್ಲಿ ಮತ್ತೆರಡು ಚಿನ್ನದ ಪದಕ ಗೆದ್ದಿದೆ. ಮಂಗಳವಾರ ಪುರುಷ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ರಾಜ್ಯಕ್ಕೆ ಪ್ರಶಸ್ತಿ ಒಲಿಯಿತು.

ಶಿಖಾ ಗೌತಂ-ಅಶ್ವಿನಿ ಭಟ್‌ ಜೋಡಿ ಫೈನಲ್‌ನಲ್ಲಿ ಮಹಾರಾಷ್ಟ್ರದ ರಿತಿಕಾ-ಸಿಮ್ರಾನ್‌ ಜೋಡಿ ವಿರುದ್ಧ 21-11, 21-18 ಅಂತರದಲ್ಲಿ ಗೆಲುವು ಸಾಧಿಸಿದರು. ಪುರುಷರ ಡಬಲ್ಸ್‌ನಲ್ಲಿ ಎಚ್‌.ವಿ.ಸುನಿಲ್‌-ಪೃಥ್ವಿ ರಾಯ್‌ ಜೋಡಿ ತಮಿಳುನಾಡಿದ ಹರಿಹರನ್‌-ರುಬಾನ್‌ ಕುಮಾರ್‌ ವಿರುದ್ಧ 15-21, 21-18, 21-18ರಲ್ಲಿ ಗೆದ್ದು ಪ್ರಶಸ್ತಿ ಪಡೆಯಿತು.

ವಾಂಖೇಡೆಯಲ್ಲಿ ರನ್ ಸುರಿಮಳೆ; ಡಿ ಕಾಕ್ ಸೆಂಚುರಿ, ಬಾಂಗ್ಲಾಗೆ ಕಠಿಣ ಗುರಿ..!

ಇದೇ ವೇಳೆ ಮಹಿಳೆಯರ ಬಾಸ್ಕೆಟ್‌ಬಾಲ್‌ನ ಗುಂಪು ಹಂತದ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 69-51ರಲ್ಲಿ ಜಯಗಳಿಸಿತು.

ದಾವಣಗೆರೆ ಓಪನ್‌ ಟೆನಿಸ್‌: ಸಿದ್ಧಾರ್ಥ್‌ ಪ್ರಿ ಕ್ವಾರ್ಟರ್‌ಗೆ

ದಾವಣೆಗೆರೆ: ಭಾರತದ ತಾರಾ ಟೆನಿಸಿಗ ಸಿದ್ಧಾರ್ಥ್‌ ರಾವತ್‌ ಐಟಿಎಫ್‌ ದಾವಣಗೆರೆ ಓಪನ್‌ ಪುರುಷರ ಟೆನಿಸ್‌ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಂಗಳವಾರ ಇಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಿದ್ಧಾರ್ಥ್‌, ಕರ್ನಾಟಕದ ಸೂರಜ್‌ ಪ್ರಬೋಧ್‌ ವಿರುದ್ಧ 6-1, 6-4 ಅಂತರದಲ್ಲಿ ಜಯಗಳಿಸಿದರು. ಇದೇ ವೇಳೆ ಕರಣ್‌ ಸಿಂಗ್‌ ಅವರು ರಿಶಿ ರೆಡ್ಡಿ ವಿರುದ್ಧ 6-1, 6-4ರಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತು ತಲುಪಿದರು. ಡಬಲ್ಸ್‌ನಲ್ಲಿ ರಾಮ್‌ಕುಮಾರ್‌ ರಾಮನಾಥನ್‌-ಪುರವ್‌ ರಾಜಾ ಜೋಡಿ ಭಾರತದ ದೇವ್‌ ಜಾವಿಯಾ-ಮಲೇಷ್ಯಾದ ಮಿಟ್ಸುಕಿ ವೆಯ್‌ ವಿರುದ್ಧ 6-3, 7-6(4) ಅಂತರದಲ್ಲಿ ಗೆದ್ದು ಕ್ವಾರ್ಟರ್‌ಗೇರಿತು.

'ದಿನಕ್ಕೆ 8 ಕೆಜಿ ಮಟನ್ ತಿಂದ್ರೆ ಫಿಟ್ನೆಸ್ ಎಲ್ಲಿಂದ ಬರುತ್ತೆ?': ಪಾಕ್ ಕ್ರಿಕೆಟಿಗರ ಮೇಲೆ ವಾಸೀಂ ಅಕ್ರಂ ಸಿಡಿಮಿಡಿ

ರಾಷ್ಟ್ರೀಯ ಗೇಮ್ಸ್‌: ರಾಜ್ಯ ಟೆನಿಸ್‌ ತಂಡದಲ್ಲಿ ಬದಲು

ಬೆಂಗಳೂರು: ಅ.30ರಿಂದ ನ.6ರ ವರೆಗೆ ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ಟೆನಿಸ್‌ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈ ಮೊದಲು ಪುರುಷರ ಮುಖ್ಯ ತಂಡದಲ್ಲಿ ದೀಪಕ್‌, ಕೆವಿನ್‌ರನ್ನು ಮೀಸಲು ತಂಡಕ್ಕೆ ಕಳುಹಿಸಲಾಗಿದ್ದು, ಸೂರಜ್‌ ಪ್ರಬೋಧ್‌ ಹಾಗೂ ಆದಿಲ್‌ ಕಲ್ಯಾಣ್‌ಪುರ್‌ರನ್ನು ಮುಖ್ಯ ತಂಡಕ್ಕೆ ಸೇರಿಸಲಾಗಿದೆ. ಮಹಿಳಾ ತಂಡದಲ್ಲಿ ಬದಲಾವಣೆಯಾಗಿಲ್ಲ.

ಪುರುಷರ ತಂಡ: ಪ್ರಜ್ವಲ್‌, ರಿಶಿ, ಸೂರಜ್‌, ಆದಿಲ್‌, ರಶೀನ್‌. ಮೀಸಲು: ದೀಪಕ್‌, ಕೆವಿನ್‌.

ಮಹಿಳಾ ತಂಡ: ಶರ್ಮದಾ, ಸುಹಿತಾ, ಸೋಹಾ ಸಾದಿಕ್‌, ಪ್ರತಿಭಾ, ಸಾಯ್‌ ಜಾನ್ವಿ.ಮೀಸಲು: ಸಿರಿ ಮಂಜುನಾಥ್‌.