ಕುಂಬ್ಳೆ ವಿಚಾರದಲ್ಲಿ ಕೊಹ್ಲಿಯನ್ನು ಸುಖಾಸುಮ್ಮನೆ ಗುರಿ ಮಾಡಲಾಗುತ್ತಿದೆ
ಅನುರಾಗ್ ಠಾಕೂರ್ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದಾರೆ.
ನವದೆಹಲಿ(ಜೂ.25): ಭಾರತದ ತಂಡದ ಕ್ರಿಕೆಟ್ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜಿನಾಮೆ ನೀಡಿದ ವಿಚಾರದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಸುಖಾಸುಮ್ಮನೆ ಗುರಿಯನ್ನಾಗಿಸಿಕೊಳ್ಳಲಾಗುತ್ತಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಟೀಕಿಸಿದ್ದಾರೆ. ಬಿಸಿಸಿಐ ತಕ್ಷಣವೇ ಈ ಅಹಿತಕರ ಘಟನೆಗೆ ಇತಿಶ್ರೀ ಹಾಡಬೇಕೆಂದು ಆಗ್ರಹಿಸಿದ್ದಾರೆ.
‘ಕುಂಬ್ಳೆ ರಾಜಿನಾಮೆ ವಿಷಯದಲ್ಲಿ ಕೊಹ್ಲಿಯನ್ನು ಎಳೆದಾಡುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ನನ್ನ ಪ್ರಕಾರ ಈ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಗಳು ನಿಲ್ಲಬೇಕು. ಮುಂದಿನ 10 ವರ್ಷಗಳಲ್ಲಿ ಭಾರತ ಕ್ರಿಕೆಟ್ ಅನ್ನು ಅತ್ಯಂತ ಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಹೋಗಬಲ್ಲ ಸಾಮರ್ಥ್ಯ ಕೊಹ್ಲಿಗಿದೆ. ಆಟಗಾರರನ್ನು ಈ ರೀತಿ ಗುರಿಯಾಗಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನಾಯಕರು, ಮಾಜಿ ನಾಯಕರು ಟೀಕೆಗೊಳಪಟ್ಟಿದ್ದರು’ ಎಂದು ರಾಠೂರ್ ಹೇಳಿದ್ದಾರೆ.
ಅನುರಾಗ್ ಠಾಕೂರ್ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದಾರೆ. ಹಾಲಿ ಸಂಸದರಾಗಿರುವ ಅವರು ಹಿಮಾಚಲ ಪ್ರದೇಶ ಒಲಿಂಪಿಕ್ ಸಮಿತಿ ನೇತೃತ್ವ ವಹಿಸಿದ್ದಾರೆ. ಇಂತಹ ಪರಿಸ್ಥಿತಿಯನ್ನು ಈಗಿನ ಆಡಳಿತ ಮಂಡಳಿಗಿಂತ ನನ್ನ ನೇತೃತ್ವದ ಬಿಸಿಸಿಐ ಚೆನ್ನಾಗಿ ನಿಭಾಯಿಸುತ್ತಿತ್ತು ಎಂದು ಠಾಕೂರ್ ಹೇಳಿದ್ದಾರೆ.