ಭಾರತ 'ತವರಿನ ಹುಲಿ' ತಾಕತ್ತಿದ್ದರೆ ವಿದೇಶದಲ್ಲಿ ಸರಣಿ ಗೆಲ್ಲಿ : ಟೀಂ ಇಂಡಿಯಾಗೆ ಸವಾಲೆಸೆದ ಮಾಜಿ ಕೀಪರ್
ಸದ್ಯ ಟೀಂ ಇಂಡಿಯಾ ಅದ್ಭುತ ಫಾರ್ಮ್ನಲ್ಲಿದೆ. ಸರಣಿ ಮೇಲೆ ಸರಣಿ ಗೆಲ್ತಿದೆ. ಆದರೆ ಇಲ್ಲಿ ಸರಣಿ ಗೆದ್ದಿದ್ದು ದೊಡ್ಡದಲ್ಲ, ಅಲ್ಲಿ ಸರಣಿ ಗೆಲ್ಲಿ ಅಂತ ಮಾಜಿ ಆಟಗಾರನೊಬ್ಬ ಸವಾಲಾಕಿದ್ದಾನೆ. ಹಾಗಾದರೆ ಭಾರತೀಯರು ಎಲ್ಲಿ ಸರಣಿ ಗೆಲ್ಲಬೇಕು. ಭಾರತಕ್ಕೆ ಸವಾಲಾಕಿರುವ ಆಟಗಾರ ಯಾರು? ಇಲ್ಲಿದೆ ವಿವರ.
ಸದ್ಯಕ್ಕಂತೂ ಟೀಂ ಇಂಡಿಯಾವನ್ನ ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗ್ತಿಲ್ಲ. ಸರಣಿ ಮೇಲೆ ಸರಣಿ ಗೆಲ್ಲುತ್ತಿದೆ. ವಿರಾಟ್ ಕೊಹ್ಲಿ ಕ್ಯಾಪ್ಟನ್ ಆದ್ಮೇಲೆ ಅಂತೂ ಭಾರತವನ್ನ ಕಟ್ಟಿಹಾಕಲು ಆಗ್ತಿಲ್ಲ. ತವರಿನಲ್ಲಿ ಹುಲಿಗಳ ಆರ್ಭಟ ಜೋರಾಗಿಯೇ ಇದೆ. ಚಾಂಪಿಯನ್ಸ್ ಟ್ರೋಫಿ ಫೈನಲ್'ನಲ್ಲಿ ಸೋತಿದ್ದು ಬಿಟ್ರೆ ಈ ವರ್ಷ ಟೀಂ ಇಂಡಿಯಾ ಒಂದೇ ಒಂದು ಸರಣಿಯನ್ನೂ ಸೋತಿಲ್ಲ. ಎಲ್ಲ ಗೆಲುವುಗಳೇ. ಟೆಸ್ಟ್'ನಲ್ಲಿ ನಂಬರ್ 1, ಒಂಡೇಯಲ್ಲಿ ಜಂಟಿ ನಂಬರ್ 1, ಟಿ20ಯಲ್ಲೂ ಈ ವರ್ಷವೇ ನಂಬರ್ ವನ್ರೇರುವ ಎಲ್ಲ ಚಾನ್ಸಸ್ ಇದೆ. ಆ ಮಟ್ಟಕ್ಕೆ ಭಾರತೀಯರು ಹವಾ ಕ್ರಿಯೇಟ್ ಮಾಡಿದ್ದಾರೆ.
ಈ ವರ್ಷ ಭಾರತದಲ್ಲಿ ಆಸ್ಟ್ರೇಲಿಯಾ ಟೆಸ್ಟ್, ಒಂಡೇ ಮತ್ತು ಟಿ20 ಸರಣಿಗಳನ್ನಾಡಿತು. ಒಂದನ್ನೂ ಗೆದ್ದುಕೊಂಡು ಹೋಗಲಿಲ್ಲ. ಈಗ ಕಾಂಗರೂಗಳಿಗೆ ಭಾರತೀಯರ ಸರಣಿ ಜಯಗಳನ್ನ ಕಂಡ್ರೆ ಯಾಕೋ ಅಸೂಯೆ ಹುಟ್ಟಿಕೊಂಡಿದೆ. ಹೀಗಾಗಿ ಭಾರತದಲ್ಲಿ ಗೆಲುವು ಸಾಧಿಸಿದ್ದು ದೊಡ್ಡದಲ್ಲ, ವಿದೇಶದಲ್ಲಿ ಗೆದ್ದು ತೋರಿಸಿ ಅಂತ ಸವಾಲ್ ಹಾಕಿದ್ದಾರೆ. ಅಷ್ಟುಕ್ಕೂ ಈ ಸವಾಲು ಹಾಕಿರೋದು ಯಾರು ಗೊತ್ತಾ..? ವರ್ಲ್ಡ್ ಬೆಸ್ಟ್ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್'ಮನ್ ಎನಿಸಿಕೊಂಡಿದ್ದ ಆಡಂ ಗಿಲ್'ಕ್ರಿಸ್ಟ್.
ತವರಿನ ಮೈದಾನಗಳಲ್ಲಿ ಭಾರತ ತಂಡ ಉತ್ತಮವಾಗಿ ಆಡುತ್ತಿದೆ. ಆದರೆ ಉಪಖಂಡದ ಆಚೆ ಗೆಲುವು ಸಾಧಿಸಿದಾಗ ಮಾತ್ರ ನಾವು ಭಾರತವನ್ನು ತಾಳೆ ಮಾಡಬಹುದು. ವಿದೇಶಿ ನೆಲದಲ್ಲಿ ನಡೆಯುವ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಗೆಲುವು ಸಾಧಿಸುವುದು ಭಾರತದ ಮುಂದಿರುವ ಸವಾಲು. ಜೊತೆಗೆ ಇಷ್ಟು ಬೇಗ ಭಾರತ ಮುಂದಿನ ವಿಶ್ವಕಪ್ ಗೆಲ್ಲುತ್ತಾ-ಇಲ್ವಾ ಎಂದು ಹೇಳುವುದು ಸೂಕ್ತವೆನಿಸುವುದಿಲ್ಲ. ವಿಶ್ವಕಪ್ ಮಾದರಿಯ ಟೂರ್ನಿಗಳಲ್ಲಿ ಟೀಂ ಇಂಡಿಯಾ ಯಾವಾಗಲೂ ಬಲಿಷ್ಠ ತಂಡವೇ. ಆದರೆ ಭಾರತೀಯ ಆಟಗಾರರು ತಮ್ಮ ಆಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕು' ಎಂದು ಆಡಂ ಗಿಲ್ಕ್ರಿಸ್ಟ್ ಹೇಳಿಕೊಂಡಿದ್ದಾರೆ.
ಗಿಲ್ಕ್ರಿಸ್ಟ್ ಹೀಗೆ ಹೇಳಿದ್ದೇಕೆ ಗೊತ್ತಾ..?: ವಿದೇಶದಲ್ಲಿ ಭಾರತದ ಸಾಧನೆ ಏನು ಇಲ್ವಾ..?
ಆಡಂ ಗಿಲ್'ಕ್ರಿಸ್ಟ್ ಇಂತದೊಂದು ಹೇಳಿಕೆ ನೀಡಲು ಕೇವಲ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಸೋತು ಹೋಗಿದೆ ಅನ್ನೋ ಕಾರಣಕ್ಕಲ್ಲ. ನಿಜವಾಗ್ಲೂ ವಿದೇಶದಲ್ಲಿ ಭಾರತೀಯರ ಸಾಧನೆ ಕಳಪೆಯಾಗಿದೆ. ಭಾರತದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಫ್ರಿಕಾ ಹೀಗೆ ಬಲಿಷ್ಠ ತಂಡಗಳನ್ನ ಸೋಲಿಸಿ ಸರಣಿ ಗೆದ್ದಿದೆ. ಆದ್ರೆ ಇದುವರೆಗೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ತಂಡ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಎರಡು ಬಲಿಷ್ಠ ತಂಡಗಳನ್ನ ಅದರ ತವರಿನಲ್ಲಿ ಮಣಿಸಲು ಸಾಧ್ಯವಾಗದ ಭಾರತವನ್ನ ಹೇಗೆ ತಾನೆ ಬಲಿಷ್ಠ ತಂಡ ಅಂತ ಒಪ್ಪಿಕೊಳ್ಳೋದು ಅನ್ನೋ ವಾದ ಮಾಜಿ ವಿಕೆಟ್ ಕೀಪರ್'ನದ್ದು.
ಗಿಲ್'ಕ್ರಿಸ್ಟ್ ಮಾತನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಾ ಭಾರತ..?: ಮುಂದಿನ ವರ್ಷ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ತಾರಾ ಕೊಹ್ಲಿ ಬಾಯ್ಸ್..?
ಸದ್ಯಕ್ಕೆ ಭಾರತ ಜಯದ ಅಲೆಯಲ್ಲಿ ತೇಲುತ್ತಿರಬಹುದು. ಗಿಲ್ಕ್ರಿಸ್ಟ್ ಮಾತು ಭಾರತಕ್ಕೆ ಬೇಸರ ಆಗಿರಬಹುದು. ಆದ್ರೆ ಗಿಲ್ಲಿ ಮಾತಿನಲ್ಲಿ ಸತ್ಯವಿದೆ. ಈ ಸತ್ಯವನ್ನ ಭಾರತೀಯರು ಅರಿತುಕೊಳ್ಳಬೇಕು. ಗಿಲ್ಲಿ ಮಾತಿಗೆ ತಿರುಗೇಟು ನೋಡೋ ಬದಲು ಆಟದಿಂದ ತಿರುಗೇಟು ನೀಡಿದ್ರೆ ಉತ್ತಮ. ಮುಂದಿನ ವರ್ಷ ಆರಂಭದಲ್ಲಿ ಟೀಂ ಇಂಡಿಯಾ ಸೌತ್ ಆಫ್ರಿಕಾ ಪ್ರವಾಸಕೈಗೊಳ್ಳುತ್ತಿದೆ. ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿದಂತೆ ಅಲ್ಲಿಯೂ ಉತ್ತಮ ಪ್ರದರ್ಶನ ನೀಡ್ಬೇಕು. ಸರಣಿ ಗೆದ್ದು ಇತಿಹಾಸ ನಿರ್ಮಿಸಬೇಕು. ಗಿಲ್ಕ್ರಿಸ್ಟ್ ಸೇರಿದಂತೆ ಅನೇಕ ಕ್ರಿಕೆಟ್ ಲೆಜೆಂಡ್'ಗಳಿಂದ ಭಾರತ ಬೆಸ್ಟ್ ತಂಡ ಅನಿಸಿಕೊಳ್ಳಬೇಕು. ಇದೆಲ್ಲಾ ಸಾಧ್ಯವಾಗಬೇಕಾದ್ರೆ ಆಫ್ರಿಕಾ ನಾಡಲ್ಲಿ ಸರಣಿ ಗೆಲ್ಲಬೇಕು.
ವಿದೇಶದಲ್ಲಿ ಸರಣಿ ಗೆಲ್ಲಲೆಂದೇ ಟೀಂ ಇಂಡಿಯಾ ರೋಟೇಶನ್ ಪಾಲಿಸಿ ಮಾಡ್ತಿದೆ. ಅದಕ್ಕಾಗಿ ಸಿದ್ದತೆ ಮಾಡಿಕೊಳ್ತಿದೆ. ಆಫ್ರಿಕಾ ಸಫಾರಿ ಯಶಸ್ವಿಯಾದ್ರೆ ಕೊಹ್ಲಿ ಬಾಯ್ಸ್ ವಿಶ್ವದ ಬೆಸ್ಟ್ ತಂಡ ಎನಿಸಿಕೊಳ್ಳಲಿದ್ದಾರೆ.