ಪ್ರತಿಭಾನ್ವಿತ ಕ್ರಿಕೆಟಿಗ ದಲಾಲ್ ಸಿ.ಕೆ ನಾಯ್ಡು ಟ್ರೋಫಿಯಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕ ಸೇರಿದಂತೆ 52ರ ಸರಾಸರಿಯಲ್ಲಿ 468 ರನ್ ಕಲೆಹಾಕಿದ್ದರು. ಆದರೆ ದಲಾಲ್ ಅವರನ್ನು ಕಡೆಗಣಿಸಿ ಸಾರ್ಥಕ್ ಆಯ್ಕೆ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನವದೆಹಲಿ(ಜ.09): ಈ ಋತುವಿನಲ್ಲಿ ಒಂದೂ ಪಂದ್ಯವನ್ನಾಡದ, ಬಿಹಾರದ ವಿವಾದಾತ್ಮಕ ರಾಜಕಾರಣಿ ಪಪ್ಪು ಯಾದವ್ ಪುತ್ರ ಸಾರ್ಥಕ್ ರಂಜನ್‌'ಗೆ ದೆಹಲಿಯ ಟಿ20 ಸ್ಥಾನ ನೀಡಲಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಅಂಡರ್-23 ತಂಡದ ಪ್ರತಿಭಾನ್ವಿತ ಬ್ಯಾಟ್ಸ್‌'ಮನ್' ಹಿತನ್ ದಲಾಲ್ ಅವರನ್ನು ಮೀಸಲು ಆಟಗಾರನ್ನಾಗಿಸಲಾಗಿದೆ.

ಸಾರ್ಥಕ್ ತಂದೆ ಪಪ್ಪು ಯಾದವ್ ಮಾಜಿ ರಾಜ್ಯಸಭಾ ಸದಸ್ಯರಾಗಿದ್ದರೆ, ತಾಯಿ ರಂಜಿತ್ ರಾಜನ್ ಕಾಂಗ್ರೆಸ್ ಪಕ್ಷದ ಸಂಸದೆ ಆಗಿದ್ದಾರೆ. ಕಳೆದ ಆವೃತ್ತಿ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಸಾರ್ಥಕ್ ಅವರನ್ನು ಆಯ್ಕೆ ಮಾಡಿದ್ದು ಆದಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಟೂರ್ನಿಯಲ್ಲಿ ಡೆಲ್ಲಿ ಪರ ಸಾರ್ಥಕ್ 5,3 ಮತ್ತು 2 ಒಟ್ಟು ಕೇವಲ 10 ರನ್ ಕಲೆಹಾಕಿದ್ದರು. ಆ ಬಳಿಕ ಡೆಲ್ಲಿ ರಣಜಿ ಸಂಭಾವ್ಯ ಪಟ್ಟಿಯಲ್ಲೂ ಆತನ ಹೆಸರು ಸೇರಿಸಲಾಗಿತ್ತು. ಆದರೆ ಸ್ವತಃ ಸಾರ್ಥಕ್ ಹಿಂದೆ ಸರಿದಿದ್ದರು.

ಪ್ರತಿಭಾನ್ವಿತ ಕ್ರಿಕೆಟಿಗ ದಲಾಲ್ ಸಿ.ಕೆ ನಾಯ್ಡು ಟ್ರೋಫಿಯಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕ ಸೇರಿದಂತೆ 52ರ ಸರಾಸರಿಯಲ್ಲಿ 468 ರನ್ ಕಲೆಹಾಕಿದ್ದರು. ಆದರೆ ದಲಾಲ್ ಅವರನ್ನು ಕಡೆಗಣಿಸಿ ಸಾರ್ಥಕ್ ಆಯ್ಕೆ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಅತುಲ್ ವಾಸ್ಸನ್ ನೇತೃತ್ವದ ಆಯ್ಕೆ ಸಮಿತಿ ಈ ನಿರ್ಣಯ ಕೈಗೊಂಡಿದೆ. ಪ್ರತಿಭಾನ್ವಿತರನ್ನು ಕೈಬಿಟ್ಟು ಈ ರೀತಿಯಲ್ಲಿ ಪ್ರಭಾವಿಗಳ ಮಕ್ಕಳಿಗೆ ತಂಡದಲ್ಲಿ ಸ್ಥಾನ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.