ಏಷ್ಯಾಕಪ್: ಇಂದು ಭಾರತ-ಬಾಂಗ್ಲಾ ಕಾದಾಟ
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್ ಭಾರತ, 4ರ ಘಟ್ಟಕ್ಕೆ ಎಂಟ್ರಿಕೊಟ್ಟಿದೆ. 4ರ ಘಟ್ಟದ ಮೊದಲ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ ಬಾಂಗ್ಲದೇಶವನ್ನ ಎದುರಿಸಲಿದೆ.
ದುಬೈ, [ಸೆ.21]: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್ ಭಾರತ, 4ರ ಘಟ್ಟಕ್ಕೆ ಎಂಟ್ರಿಕೊಟ್ಟಿದೆ. 4ರ ಘಟ್ಟದ ಮೊದಲ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ ಬಾಂಗ್ಲದೇಶವನ್ನ ಎದುರಿಸಲಿದೆ.
ಹಾಂಕಾಂಗ್ ಹಾಗೂ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ರೋಹಿತ್ ಪಡೆ, ಗೆಲುವಿನ ಅಜೇಯ ಓಟದ ಮುಂದುವರೆಸುವ ಅತ್ಮವಿಶ್ವಾಸದಲ್ಲಿದೆ. ಟೂರ್ನಿಯಲ್ಲಿ ಸತತ 2 ಗೆಲುವು ದಾಖಲಿಸಿರುವ ಭಾರತಕ್ಕೆ ಇಂದಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಯಾರಿಗೆ ಅವಕಾಶ ನೀಡಬೇಕು ಅನ್ನೋ ಚಿಂತೆ ಶುರುವಾಗಿದೆ.
ಸದ್ಯ ತಂಡದ ಓಪನರ್ಗಳಾದ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಲಯಕ್ಕೆ ಮರಳಿರುವುದು ಸಮಾಧಾನ ಮೂಡಿಸಿದೆ. ಅಷ್ಟೇ ಅಲ್ಲದೇ ಮಿಡಲ್ ಆರ್ಡರ್ನಲ್ಲಿ ಅಂಬಟಿ ರಾಯುಡು ಹಾಗೂ ದಿನೇಶ್ ಕಾರ್ತಿಕ್ ಉತ್ತಮ ಪರ್ಫಾರ್ಮನ್ಸ್ ನೀಡುವ ಮೂಲಕ ಅತ್ಮವಿಶ್ವಾಸ ಮೂಡಿಸಿದ್ದಾರೆ.
ಉಳಿದಂತೆ ಬೌಲಿಂಗ್ನಲ್ಲಿಯೂ ಭಾರತ ಉತ್ತಮ ಲಯದಲ್ಲಿದ್ದು, ಹಾರ್ದಿಕ್ ಅನುಪಸ್ಥಿತಿ ಕಾಡಲಿದೆ. ಹೀಗಾಗಿ ತಂಡಕ್ಕೆ 5ನೇ ಬೌಲರ್ ಕೊರೆತೆ ಕಾಡುವ ಸಾಧ್ಯತೆ ದಟ್ಟವಾಗಿದೆ. ಇನ್ನು ಬಾಂಗ್ಲಾವನ್ನ ನೋಡುವುದಾದರೆ ಉತ್ತಮ ಬ್ಯಾಟ್ಸ್ಮನ್ಸ್,ಆಲ್ರೌಂಡರ್ಸ್ ಹಾಗೂ ಉತ್ತಮ ಬೌಲರ್ಗಳನ್ನು ಹೊಂದಿದ್ದು, ಭಾರತಕ್ಕೆ ಟಕ್ಕರ್ ನೀಡುವ ವಿಶ್ವಾಸದಲ್ಲಿದೆ.
ನಿನ್ನೆ ಅಬುಧಾಬಿಯಲ್ಲಿ ಅಫ್ಘಾನ್ ವಿರುದ್ಧ ಪಂದ್ಯವನ್ನಾಡಿ, ಇಂದು ಬಲಿಷ್ಠ ಭಾರತವನ್ನ ಎದುರಿಸುತ್ತಿರುವುದ ದೊಡ್ಡ ಸವಾಲಾಗಿದೆ. ಅಫ್ಘಾನ್ ವಿರುದ್ಧ ಕಳೆದ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲೂ ವೈಫಲ್ಯ ಅನುಭವಿಸಿದ ಬಾಂಗ್ಲಾ, ಇಂದು ಭಾರತದ ವಿರುದ್ಧ ತಿರುಗಿ ಬೀಳುವ ಲೆಕ್ಕಾಚಾರದಲ್ಲಿದೆ.
ಪಂದ್ಯ ಆರಂಭದ ಸಮಯ: ಸಂಜೆ 4ಕ್ಕೆ.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್