ಜನ್-ಧನ್'ದಿಂದ ಮದ್ಯಪಾನ, ತಂಬಾಕು ಸೇವನೆ ಇಳಿಮುಖ..!
ಹೆಚ್ಚಿನ ಪ್ರಮಾಣದಲ್ಲಿ ಜನ-ಧನ ಖಾತೆ ತೆರೆಯಲ್ಪಟ್ಟಿರುವ ರಾಜ್ಯಗಳಲ್ಲಿ ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಬಳಕೆ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ ಎಂದು ಭಾರತೀಯ ಸ್ವೇಟ್ ಬ್ಯಾಂಕ್ (ಎಸ್'ಬಿಐ)ನ ಆರ್ಥಿಕ ಸಂಶೋಧನಾ ಘಟಕ ವರದಿ ನೀಡಿದೆ.
ನವದೆಹಲಿ(ಅ.17): ಬ್ಯಾಂಕ್ ಖಾತೆ ಹೊಂದಿಲ್ಲದ ಜನರಿಗೆ ಶೂನ್ಯ ಠೇವಣಿ ಖಾತೆ ತೆರೆಯಲು ಅವಕಾಶ ಕಲ್ಪಿಸುವ ಪ್ರಧಾನಮಂತ್ರಿ ಜನ-ಧನ ಯೋಜನೆಯಡಿ ಸದ್ದಿಲ್ಲದೇ ಕ್ರಾಂತಿಯೇ ನಡೆದಿದೆ.
ಹೆಚ್ಚಿನ ಪ್ರಮಾಣದಲ್ಲಿ ಜನ-ಧನ ಖಾತೆ ತೆರೆಯಲ್ಪಟ್ಟಿರುವ ರಾಜ್ಯಗಳಲ್ಲಿ ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಬಳಕೆ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ ಎಂದು ಭಾರತೀಯ ಸ್ವೇಟ್ ಬ್ಯಾಂಕ್ (ಎಸ್'ಬಿಐ)ನ ಆರ್ಥಿಕ ಸಂಶೋಧನಾ ಘಟಕ ವರದಿ ನೀಡಿದೆ. ಜನ ಧನ- ಆಧಾರ್- ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿದ್ದರಿಂದಾಗಿ ಸರ್ಕಾರದ ಸಬ್ಸಿಡಿ ಸೂಕ್ತವಾಗಿ ಫಲಾನುಭವಿಗಳನ್ನು ತಲುಪುತ್ತಿದೆ. ಬ್ಯಾಂಕ್ ಖಾತೆಗೇ ಹಣ ಜಮೆಯಾಗುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಮದ್ಯ ಹಾಗೂ ತಂಬಾಕಿಗೆಂದು ಮಾಡುತ್ತಿದ್ದ ಖರ್ಚು ಇಳಿಮುಖವಾಗಿದೆ.
ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಂತಹ ರಾಜ್ಯಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಮಾಡುವ ವೆಚ್ಚದಲ್ಲಿ ಹೆಚ್ಚಳ ಕಂಡುಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಜನ-ಧನ ಖಾತೆಗಳಿರುವ ರಾಜ್ಯಗಳಲ್ಲಿ ಗ್ರಾಮೀಣ ಹಣದುಬ್ಬರ ಕೆಳಪ್ರಮಾಣದಲ್ಲೇ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
3 ವರ್ಷ ಹಿಂದೆ ಆರಂಭವಾದ ಜನ-ಧನ ಯೋಜನೆಯಡಿ 30 ಕೋಟಿ ಕುಟುಂಬಗಳು ಬ್ಯಾಂಕ್ ಖಾತೆ ಹೊಂದುವಂತಾಗಿದೆ. ಈ ಪೈಕಿ ಶೇ.60ರಷ್ಟು ಖಾತೆಗಳು ಗ್ರಾಮೀಣ ಪ್ರದೇಶದಲ್ಲೇ ತೆರೆಯಲ್ಪಟ್ಟಿವೆ. ಆರಂಭದಲ್ಲಿ ಶೇ.77ರಷ್ಟಿದ್ದ ಶೂನ್ಯ ಠೇವಣಿಯ ಖಾತೆಗಳು ಈಗ ಶೇ.20ಕ್ಕೆ ಇಳಿಕೆ ಕಂಡಿವೆ.