ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್‌ ತಂಡವು ಎರಡನೇ ಗೆಲುವು ಸಾಧಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಹೈದರಾಬಾದ್‌: 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ತಂಡ ಎರಡನೇ ಗೆಲುವು ದಾಖಲಿಸಿದೆ. ಸೋಮವಾರ ತಮಿಳ್‌ ತಲೈವಾಸ್‌ ವಿರುದ್ಧ ಬುಲ್ಸ್‌ 36-32 ಅಂಕಗಳ ಅಂತರದಲ್ಲಿ ಜಯಗಳಿಸಿತು.

Add Asianetnews Kannada as a Preferred SourcegooglePreferred

ಸತತ ಸೋಲುಗಳಿಂದ ಕಂಗೆಟ್ಟಿದ್ದ ಬುಲ್ಸ್‌ ಈ ಪಂದ್ಯದಲ್ಲಿ ಆರಂಭದಲ್ಲೇ ಸುಧಾರಿತ ಪ್ರದರ್ಶನ ತೋರಿತು. ಮೊದಲಾರ್ಧದಲ್ಲಿ ತಂಡ 14-13 ಅಂಕಗಳಿಂದ ಮುಂದಿತ್ತು. ಕೊನೆವರೆಗೂ ಮುನ್ನಡೆ ಕಾಯ್ದುಕೊಂಡ ತಂಡ 4 ಅಂಕಗಳ ಅಂತರದಲ್ಲಿ ಗೆಲುವು ಒಲಿಸಿಕೊಂಡಿತು. ಪ್ರದೀಪ್‌ ನರ್ವಾಲ್‌ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ತಂಡದ ಪರ ಅಜಿಂಕ್ಯಾ ಪವಾರ್‌ 6, ಅಕ್ಷಿತ್‌ 6 ಅಂಕ ಗಳಿಸಿದರು. ಬೆಂಗಳೂರು ಸದ್ಯ 7 ಪಂದ್ಯಗಳಲ್ಲಿ 12 ಅಂಕ ಗಳಿಸಿದ್ದು, ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.

ಕಿವೀಸ್‌ ಎದುರು ಭಾರತ ವೈಟ್‌ವಾಶ್‌: ಎದ್ದಿವೆ ಗಂಭೀರ ಪ್ರಶ್ನೆಗಳು!

ದಿನದ ಮತ್ತೊಂದು ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಪುಣೇರಿ ಪಲ್ಟನ್‌ 49-30 ಅಂಕಗಳ ಭರ್ಜರಿ ಗೆಲುವು ಸಾಧಿಸಿತು. 7 ಪಂದ್ಯಗಳಲ್ಲಿ 5ನೇ ಜಯ ದಾಖಲಿಸಿದ ಪುಣೇರಿ ಅಗ್ರಸ್ಥಾನದಲ್ಲಿದೆ.

ಇಂದಿನ ಪಂದ್ಯಗಳು

ಜೈಪುರ-ಯುಪಿ ಯೋಧಾಸ್‌, ರಾತ್ರಿ 8ಕ್ಕೆ

ಯು ಮುಂಬಾ-ದಬಾಂಗ್‌ ಡೆಲ್ಲಿ, ರಾತ್ರಿ 9ಕ್ಕೆ

ನ.30ರಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್‌

ಬೆಂಗಳೂರು: ಪ್ರತಿಷ್ಠಿತ ಅಂತಾರಾಷ್ಟ್ರಿಯ ವೃತ್ತಿಪರ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಬೆಂಗಳೂರಿನಲ್ಲಿ ನ.30ರಂದು ನಡೆಯಲಿದೆ. ಕ್ರೌನ್ಸ್‌ ಬಾಕ್ಸಿಂಗ್‌ ಪ್ರಮೋಷನ್ಸ್‌ ಸಂಸ್ಥೆಯು ಗ್ರಾಸ್‌ರೂಟ್‌ ಬಾಕ್ಸಿಂಗ್‌ ಸಂಸ್ಥೆಯ ಸಹಯೋಗದಲ್ಲಿ ಈ ಚಾಂಪಿಯನ್‌ಶಿಪ್‌ ಆಯೋಜಿಸಲಿದ್ದು, ಎಚ್‌ಎಸ್‌ಆರ್‌ ಲೇಔಟ್‌ನ ವೈಟ್‌ಹೌಸ್‌ನಲ್ಲಿ ಪಂದ್ಯಗಳು ನಡೆಯಲಿವೆ.

ಸೋಮವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಯೋಜಕರು ಚಾಂಪಿಯನ್‌ಶಿಪ್‌ ಬಗ್ಗೆ ಮಾಹಿತಿ ನೀಡಿದರು. ಡಬ್ಲ್ಯುಬಿಸಿ ಯೂತ್‌ ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಡಬ್ಲ್ಯುಬಿಸಿ ಭಾರತೀಯ ಚಾಂಪಿಯನ್‌ಶಿಪ್‌ ಹೆಸರಿನ ಎರಡು ವಿಭಾಗಗಳಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ಭಾರತದ ಅಗ್ರ ಬಾಕ್ಸರ್‌ಗಳ ಜೊತೆ ಉಗಾಂಡ, ಘಾನಾ, ಥಾಯ್ಲೆಂಡ್‌, ಫಿಲಿಪ್ಪೀನ್ಸ್‌ನ ಬಾಕ್ಸರ್‌ಗಳೂ ಸ್ಪರ್ಧಿಸಲಿದ್ದಾರೆ. ವಿಶ್ವ ಯೂತ್‌ ಚಾಂಪಿಯನ್‌ಶಿಪ್‌ನಲ್ಲಿ ಲಾಲ್ಡಿನ್‌ಸಂಘ ಸ್ಪರ್ಧಿಸಲಿದ್ದು, ರಿತೇಶ್‌ ಸಿಂಗ್‌ ಹಾಗೂ ಲಾಲ್‌ರುವಾಯ್ಟ್‌ಲುವಾಂಗ್‌ ಭಾರತೀಯ ಚಾಂಪಿಯನ್‌ಶಿಪ್‌ನಲ್ಲಿ ಸೆಣಸಲಿದ್ದಾರೆ.

ಕ್ರಿಕೆಟ್‌ಗೆ ಸಂಬಂಧಿಸಿದ 'ಕೌನ್ ಬನೇಗಾ ಕರೋಡ್‌ಪತಿ'ಯಲ್ಲಿ ಕೇಳಲಾದ ₹6.40 ಲಕ್ಷದ ಈ ಪ್ರಶ್ನೆಗೆ ಉತ್ತರ ಗೊತ್ತಾ?

ಕ್ರೌನ್ ಬಾಕ್ಸಿಂಗ್‌ ಸಂಸ್ಥಾಪಕ ಪಾಯಮ್‌ ಹೊನಾರಿ, ಭಾರತದ ಮಾಜಿ ಅಮೆಚೂರ್‌ ಬಾಕ್ಸರ್‌ ಮುಜ್‌ತಬಾ ಕಮಲ್‌, ಮಾಜಿ ಕ್ರಿಕೆಟಿಗ ನಾರಾಯಣ ರಾಜು ಸೇರಿ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.