ಬ್ರಹ್ಮಾಂಡ ಸೃಷ್ಟಿಯ ‘ದೇವಕಣ’ ಬೆಂಗಳೂರಿಗೂ ಬರುತ್ತೆ| ಯಾವಾಗ? ಎಲ್ಲಿ ಪ್ರದರ್ಶನ? ಇಲ್ಲಿದೆ ಮಾಹಿತಿ

ನವದೆಹಲಿ[ಏ.20]: ಬ್ರಹ್ಮಾಂಡ ಸೃಷ್ಟಿಯಲ್ಲಿ ಮಹತ್ವದ್ದಾಗಿರುವ ‘ದೇವಕಣ’ದ ಅಸ್ತಿತ್ವವನ್ನು 2012ರಲ್ಲಿ ವಿಜ್ಞಾನಿಗಳು ನಿರೂಪಿಸಿದ್ದರು. ಈ ದೇವಕಣ ಯಾವ ರೀತಿ ಕೆಲಸ ಮಾಡುತ್ತದೆ ಎಂಬ ಕುತೂಹಲ ನಿಮ್ಮಲ್ಲಿದ್ದರೆ, ಇನ್ನೆರಡು ತಿಂಗಳು ಕಾಯಿರಿ. ಸಂಚಾರಿ ಪ್ರಯೋಗಾಲಯ ಭಾರತಕ್ಕೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗೆ ಬರುತ್ತಿದೆ. ಜುಲೈ ಕೊನೆಯ ವಾರದಿಂದ ಸೆಪ್ಟೆಂಬರ್‌ ಕೊನೆಯ ವಾರದವರೆಗೂ ಬೆಂಗಳೂರಿನಲ್ಲೇ ಇರಲಿದ್ದು, ವಿಜ್ಞಾನ ಪ್ರೇಮಿಗಳ ಕೌತುಕವನ್ನು ತಣಿಸುವ ಪ್ರಯತ್ನ ನಡೆಸಲಿದೆ.

Add Asianetnews Kannada as a Preferred SourcegooglePreferred

ಸ್ವಿಜರ್ಲೆಂಡ್‌ ಮೂಲದ ‘ಯುರೋಪಿಯನ್‌ ಆರ್ಗನೈಸೇಷನ್‌ ಫಾರ್‌ ನ್ಯೂಕ್ಲಿಯರ್‌ ರೀಸಚ್‌ರ್‍’ (ಸರ್ನ್‌) ಸಂಸ್ಥೆ ಬೃಹತ್‌ ಕಣ ವೇಗೋತ್ಕರ್ಷಕ (ಆ್ಯಕ್ಸಲೆರೇಟರ್‌) ಉಪಕರಣವನ್ನು ತನ್ನ ಸಂಚಾರಿ ಪ್ರದರ್ಶನದ ಭಾಗವಾಗಿ ಭಾರತಕ್ಕೂ ತರುತ್ತಿದೆ. ಮೇ ಅಂತ್ಯಕ್ಕೆ ಮುಂಬೈಗೆ ಬರಲಿರುವ ಈ ಉಪಕರಣ, 2020ರ ಮಾಚ್‌ರ್‍ ಮೂರನೇ ವಾರದವರೆಗೂ ಭಾರತದಲ್ಲೇ ಇರಲಿದೆ. ಮುಂಬೈ ಬಳಿಕ ಜುಲೈ ಕೊನೆಯ ವಾರ ಬೆಂಗಳೂರಿಗೆ ಬರಲಿದ್ದು, ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ಮ್ಯೂಸಿಯಂನಲ್ಲಿ ನೆಲೆಯೂರಲಿದೆ. ನಂತರ, ಕೋಲ್ಕತಾ ಹಾಗೂ ದೆಹಲಿಗೆ ತೆರಳಲಿದೆ.

ಹಲವು ಉಪಕರಣಗಳು ಕೂಡ ಈ ಪ್ರದರ್ಶನದಲ್ಲಿರಲಿವೆ. ವಿಜ್ಞಾನಿಗಳೊಂದಿಗೆ ವಿಚಾರ ಸಂಕಿರಣ, ಸಂವಾದ ಮತ್ತಿತರೆ ಕಾರ್ಯಕ್ರಮಗಳು ಇರುತ್ತವೆ. ಈ ಪ್ರದರ್ಶನಕ್ಕೆ ಭಾರತೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಪಾಲ್ಗೊಳ್ಳಬಹುದು. ಬಿಇ/ಬಿಟೆಕ್‌/ಬಿಎಸ್ಸಿ/ಎಂಎಸ್ಸಿ/ಎಂಟೆಕ್‌/ಪಿಎಚ್‌ಡಿ ಮಾಡಿರುವ ಅಥವಾ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೆ, ಅಂಥವರಿಗೆ ತರಬೇತಿ ನೀಡಲಾಗುತ್ತದೆ. ಈ ರೀತಿ ತರಬೇತಿ ಪಡೆದವರೇ ನಾಗರಿಕರಿಗೆ ದೇವಕಣದ ಕುರಿತು ಮಾಹಿತಿ ನೀಡಬೇಕಾಗುತ್ತದೆ.

ಏನಿದು ದೇವಕಣ? ಮಹತ್ವವೇನು?

ಬ್ರಹ್ಮಾಂಡ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸಿದ ಒಂದು ಕಣವನ್ನು ‘ಹಿಗ್ಸ್‌ ಬಾಸನ್ಸ್‌’ ಅಥವಾ ದೇವಕಣ ಎಂದು ಕರೆಯಲಾಗುತ್ತದೆ. ಇದರ ಸಂಶೋಧನೆಗೆ ವಿಶ್ವಾದ್ಯಂತದ ಸಹಸ್ರಾರು ವಿಜ್ಞಾನಿಗಳು ದುಡಿದಿದ್ದಾರೆ. ವಿಶ್ವದಲ್ಲಿ ಪ್ರತಿಯೊಂದು ಅಣುವಿನಿಂದ ಮಾರ್ಪಟ್ಟಿದೆ. ಅಣುವಿನ ಒಳಗೆ ಎಲೆಕ್ಟ್ರಾನ್‌, ಪ್ರೋಟಾನ್‌ ಹಾಗೂ ನ್ಯೂಟ್ರಾನ್‌ಗಳು ಇರುತ್ತವೆ. ಅದರೊಳಗೆ ಪುಟ್ಟಪುಟ್ಟಕಣಗಳು ಇರುತ್ತವೆ.

ಈ ಕಣಗಳು ರಾಶಿಯನ್ನು ಗಳಿಸಿರುವ ಕಾರಣ ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಈ ರೀತಿ ಅಂಟಿಕೊಳ್ಳುವುದಕ್ಕೆ ಮತ್ತೊಂದು ಕಣ ಕಾರಣ ಎಂದು ಪೀಟರ್‌ ಹಿಗ್ಸ್‌ ಎಂಬ ಬ್ರಿಟಿಷ್‌ ಭೌತಶಾಸ್ತ್ರಜ್ಞ ಹಾಗೂ ಬೆಲ್ಜಿಯಂನ ತಂಡಗಳು ಹೇಳಿದ್ದವು. ಈ ಸಂಬಂಧ ದೊಡ್ಡ ಪ್ರಯೋಗ ನಡೆದಿತ್ತು. 2012ರಲ್ಲಿ ದೇವಕಣ ಇರುವುದು ನಿಜ ಎಂದು ಹೇಳಲಾಗಿತ್ತು.