ಇಂದು ರಕ್ತಚಂದ್ರಗ್ರಹಣ, ರಾತ್ರಿ 11 ಗಂಟೆಯಿಂದ ಚಂದ್ರ ಕೆಂಪು ಬಣ್ಣಕ್ಕೆ ತಿರುಗಲಿದ್ದಾನೆ. ಬಹುತೇಕ ಎಲ್ಲಾ ದೇವಸ್ಥಾನಗಳು ಬಂದ್. ಬ್ಲಡ್ ಮೂನ್ ವಿಶೇಷತೆ ಏನು?
ಬೆಂಗಳೂರು (ಸೆ.07) ರಕ್ತ ಚಂದ್ರಗ್ರಹಣ ಹಲವು ವಿಶೇಷತೆಗಳನ್ನು ಹೊಂದಿದೆ. ಇಂದು (ಸೆ.07) 8.58 ರಿಂಗ ಈ ರಕ್ತ ಚಂದ್ರಗ್ರಹಣ ಆರಂಭಗೊಂಡಿದೆ. ಬರಿಗಣ್ಣಿನಿಂದಲೂ ಈ ರಕ್ತ ಚಂದ್ರಗ್ರಹಣ ನೋಡಬಹುದು. ಇಂದು ರಾತ್ರಿ ಆಗಸದಲ್ಲಿ ಕೌತುಕ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಲಿದೆ. ರಾತ್ರಿ 8.58 ಕ್ಕೆ ಚಂದ್ರ ಭೂಮಿಯ ಪಾರ್ಶ್ವ ಛಾಯಾ ಪ್ರದೇಶವನ್ನು ಪ್ರವೇಶಿಸಿದಾಗ ಗ್ರಹಣ ಪ್ರಾರಂಭವಾಗುತ್ತದೆ. ಗ್ರಹಣದ ಈ ಹಂತದಲ್ಲಿ ಚಂದ್ರನ ಕಾಂತಿಯಲ್ಲಾಗುವ ವ್ಯತ್ಯಾಸವು ಅಷ್ಟೇನೂ ಗಮನಾರ್ಹವಾಗಿ ಕಾಣುವುದಿಲ್ಲ. ಆದರೆ 10 ಗಂಟೆಯಿಂದ ಮಹತ್ತರ ಬದಲಾವಣೆಯಾಗಲಿದೆ.
ರಾತ್ರಿ 9.58 ರಿಂದ ಕಪ್ಪು ಬಣ್ಣಕ್ಕೆ ತಿರುಗಲಿದೆ ಚಂದ್ರ
ಇಂದು ರಾತ್ರಿ 9.58ಕ್ಕೆ ಸರಿಯಾಗಿ ಚಂದ್ರ ಕಪ್ಪು ಬಣ್ಣಕ್ಕೆ ತಿರುಗಲಿದ್ದಾನೆ. ಈಗಾಗಲೇ ಚಂದ್ರನ ಮೇಲೆ ಭೂಮಿಯ ನೆರಳು ಬೀಳಲು ಆರಂಭಿಸಿದೆ. ಇದು 9.58ರ ವೇಳೆ ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣ ಬೀಳುವುದರಿಂದ ಕಪ್ಪು ಬಣ್ಣಕ್ಕೆ ಚಂದ್ರ ತಿರುಗಲಿದ್ದಾನೆ.
82 ನಿಮಿಷ ಭಾರತದಲ್ಲಿ ಗೋಚರಿಸಲಿದೆ ಚಂದ್ರಗ್ರಹಣ, ಬರಿಗಣ್ಣಿನಿಂದಲೂ ನೋಡಲು ಸಾಧ್ಯ
ರಾತ್ರಿ 11 ಗಂಟೆಯಿಂದ 12.22ರ ವರೆಗೆ ಕೆಂಪು ಬಣ್ಣಕ್ಕೆ ಚಂದ್ರ
ರಾತ್ರಿ 11 ಗಂಟೆಗೆ ಪೂರ್ಣ ಛಾಯಾಪ್ರದೇಶ ಪ್ರವೇಶವಾಗಲಿದೆ. ಹೀಗಾಗಿ ಚಂದ್ರ ನಿಧಾನವಾಗಿ ಕಪ್ಪು ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಲಿದ್ದಾನೆ. ರಾತ್ರಿ 11 ರಿಂದ ಮಧ್ಯ ರಾತ್ರಿ 12.22ರ ವರೆಗೆ ಚಂದ್ರ ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ರಾಹು ಗ್ರಸ್ಥ ರಕ್ತ ಚಂದ್ರಗ್ರಹಣ 12.22ರ ವರೆಗೆ ಘಟಿಸಲಿದೆ. 12:22ರಿಂದ ಮತ್ತೆ ಪಾರ್ಶ್ವ ಚಂದ್ರಗ್ರಹಣ ಆರಂಭಗೊಳ್ಳಲಿದೆ. ರಾತ್ರಿ 1.26ರ ವೇಳೆಗೆ ಚಂದ್ರಗ್ರಹಣ ಕೊನೆಗೊಳ್ಳಲಿದೆ.
ಬ್ಲಡ್ ಮೂನ್ ಎಂದೇ ಕರೆಯಿಸಿಕೊಳ್ಳುವ ಈ ರಕ್ತ ಚಂದ್ರಗ್ರಹಣ ವಿಶೇಷ ಹಾಗೂ ಅಪರೂಪ. ಭಾರತದಲ್ಲಿ 82 ನಿಮಿಷಗಳ ಕಾಲ ಬ್ಲಡ್ ಮೂನ್ ಗೋಚರಲಿದೆ. ಹೀಗಾಗಿ ಭಾರತದ ಯಾವುದೇ ಮೂಲೆಯಿಂದಲೂ ಚಂದ್ರಗ್ರಹಣ ಗೋಚರಿಸಲಿದೆ. ಬರಿಗಣ್ಣಿನಲ್ಲೂ ಚಂದ್ರ ಗ್ರಹಣ ನೋಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ದೇವಸ್ಥಾನಗಳು ಬಂದ್
ಚಂದ್ರಗ್ರಹಣ ಹಿನ್ನಲೆಯಲ್ಲಿ ಈಗಾಗಲೇ ದೇಶದ ಬಹುತೇಕ ದೇವಸ್ಥಾನಗಳು ಬಂದ್ ಆಗಿವೆ. ಕರ್ನಾಟಕದ ಬಹುತೇಕ ಎಲ್ಲಾ ದೇವಸ್ಥಾನಗಳು ಬಂದ್ ಆಗಿದೆ. ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಭಾಗಮಂಡಲದ ಭಗಂಡೇಶ್ವರ ದೇವಾಲಯ, ತಲಕಾವೇರಿ ದೇವಾಲಯಗಳು ಬಂದ್ ಆಗಿವೆ. ಸಂಜೆ ಪೂಜೆ ಮುಗಿಸಿ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಹುಬ್ಬಳ್ಳಿಯ ಸ್ಟೇಷನ್ ರಸ್ತೆಯ. ಈಶ್ವರ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿದೆ. ಯಾದಗಿರಿಯ ಲಕ್ಷ್ಮೀ ನಗರದಲ್ಲಿರುವ ಮಹಾಲಕ್ಷ್ಮಿ ಮಂದಿರ ಪೂಜೆ ಮುಗಿಸಿ ಬಂದ್ ಮಾಡಲಾಗಿದೆ. ಚಿಕ್ಕೋಡಿಯ ದಕ್ಷಿಣ ಕಾಶಿ ವೀರಭದ್ರೇಶ್ವರ ದೇವಸ್ಥಾನ ಬಾಗಿಲು ಮುಚ್ಚಲಾಗಿದೆ. ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ಸ್ಥಗಿತಗೊಳಿಸಲಾಗಿದೆ. ಹನುಮ ಜನ್ಮಸ್ಥಳ ಅಂಜನಾದ್ರಿ ದೇಗುಲ, ಕೋಲಾರದಲ್ಲಿ ದೇವಸ್ಥಾನಗಳು ಸೇರಿದಂತೆ ರಾಜ್ಯದ ಬಹುತೇಕ ದೇವಸ್ಥಾನಗಳು ಬಂದ್ ಮಾಡಲಾಗಿದೆ.
ಚಂದ್ರ ಗ್ರಹಣದ ವೇಳೆ ಪ್ರಯಾಣ ಮಾಡಬಹುದಾ? ಶಾಸ್ತ್ರ-ವಿಜ್ಞಾನ ಹೇಳುವುದೇನು?
