ರಾಹುಗ್ರಸ್ತ ಚಂದ್ರಗ್ರಹಣಕ್ಕೆ ಕೌಂಟ್‌ಡೌನ್ ಶುರುವಾಗಿದೆ. ವಿಶೇಷ ಅಂದರೆ ಈ ಬಾರಿ ಭಾರತದಲ್ಲಿ ಬರೋಬ್ಬರಿ 82 ನಿಮಿಷಗಳ ಕಾಲ ಚಂದ್ರಗ್ರಹಣ ಗೋಚರಿಸಲಿದೆ. ಬರಿಗಣ್ಣಿನಿಂದಲೂ ಚಂದ್ರಗ್ರಹಣ ನೋಡಲು ಸಾಧ್ಯ.

ನವದೆಹಲಿ (ಸೆ.07) ರಕ್ತ ಚಂದ್ರಗ್ರಹಣ ವೀಕ್ಷಣೆಗೆ ಎಲ್ಲೆಡೆ ತಯಾರಿಗಳು ನಡೆಯುತ್ತಿದೆ. ರಾಹುಗ್ರಸ್ತ ಚಂದ್ರಗ್ರಹಣ ಇದಾಗಿದ್ದು, ಭಾರತೀಯ ನಂಬಿಕೆ ಪ್ರಕಾರ ಗ್ರಹಣ ಶುಭಘಳಿಗೆಯಲ್ಲ. ಆದರೆ ವಿಜ್ಞಾನಿಗಳು ಈ ಕೌತುಕವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಇಂದು (ಸೆ.07) ರಾತ್ರಿ 8.58ಕ್ಕೆ ಚಂದ್ರಗ್ರಹಣ ಆರಂಭಗೊಳ್ಳಲಿದೆ. ರಾತ್ರಿ 11 ಗಂಟೆಯಿಂದ 12.22ರ ವೇಳೆ ಚಂದ್ರಗ್ರಹಣ ಘಟಿಲಿದೆ. ವಿಶೇಷ ಅಂದರೆ ಭಾರತದಲ್ಲಿ ಈ ಬಾರಿಯ ಚಂದ್ರಗ್ರಹಣ ಬರೋಬ್ಬರಿ 82 ನಿಮಿಷಗಳ ಕಾಲ ಇರಲಿದೆ. ಅತೀ ಸುದೀರ್ಘ ಸಮಯದ ಕಾಲ ಚಂದ್ರಗ್ರಹಣ ಗೋಚರವಾಗಲಿದೆ. ಬರಿಗಣ್ಣಿನಿಂದಲೂ ಚಂದ್ರಗ್ರಹಣ ನೋಡಲು ಸಾಧ್ಯವಿದೆ.

ಭಾರತದೆಲ್ಲೆಡೆ ಚಂದ್ರಗ್ರಹಣ ಗೋಚರ

ಬ್ಲಡ್ ಮೂನ್ ಎಂದೇ ಕರೆಯಲ್ಪಡುವ ಈ ರಕ್ತ ಚಂದ್ರಗ್ರಹಣ ಭಾರತದೆಲ್ಲೆಡೆ ಗೋಚರಲಿದೆ. 8.58ಕ್ಕೆ ಗ್ರಹಣ ಆರಂಭಗೊಳ್ಳಲಿದೆ. ಆದರೆ ಸಂಪೂರ್ಣ ಗ್ರಹಣ 11.01ಕ್ಕೆ ಸಂಭವಿಸಲಿದೆ. 11.01 ರಿಂದ 12.22ರ ವರೆಗೆ ಈ ಗ್ರಹಣ ಘಟಿಸಲಿದೆ. 82 ನಿಮಿಷಗಳ ಕಾಲ ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೈ ಸೇರಿದಂತೆ ಭಾರತದೆಲ್ಲೆಡೆ ಈ ಗ್ರಹಣ ಗೋಚರಿಸಲಿದೆ. ಪ್ರಪಂಚದ ಶೇಕಡಾ 88ರಷ್ಟು ಜನ ಈ ಬಾರಿಯ ಚಂದ್ರಗ್ರಹಣ ವೀಕ್ಷಣೆ ಮಾಡಬಹುದು. ಈ ದಶಕದ ಅತೀ ಸುದೀರ್ಘ ಚಂದ್ರಗ್ರಹಣ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ಚಂದ್ರ ಗ್ರಹಣದ ವೇಳೆ ಪ್ರಯಾಣ ಮಾಡಬಹುದಾ? ಶಾಸ್ತ್ರ-ವಿಜ್ಞಾನ ಹೇಳುವುದೇನು?

ಅಪರೂಪದ ವಿದ್ಯಾಮಾನ ಬರಿಗಣ್ಣಿನಿಂದ ನೋಡಲು ಸಾಧ್ಯ

ಗ್ರಹಣ ಬರಿಗಣ್ಣಿನಿಂದ ನೋಡಬಾರದು ಅನ್ನೋ ವಾದಗಳು ಇವೆ. ಆದರೆ ವಿಜ್ಞಾನಿಗಳು ಈ ಬಾರಿ ರಕ್ತ ಚಂದ್ರಗ್ರಹಣ ಬರಿಗಣ್ಣಿನಿಂದ ನೋಡಲು ಸಾಧ್ಯ ಎಂದಿದ್ದಾರೆ. ಬರಿಗಣ್ಣಿನಿಂದ ಕೌತುಕದ ಆಳ ಸ್ಪಷ್ಟವಾಗಿ ಗೋಚರಿಸದೇ ಇರಬಹುದು. ಆದರೆ ಬರಿಗಣ್ಣಿನಿಂದ ನೋಡಲು ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಟಿಲಿಸ್ಕೋಪ್ ಮೂಲಕ ಸ್ಪಷ್ಟವಾಗಿ ಚಂದ್ರಗ್ರಹಣ ನೋಡಲು ಸಾಧ್ಯ ಎಂದಿದ್ದಾರೆ.

ಬೆಂಗಳೂರಿನಲ್ಲಿ ಉಚಿತ ಚಂದ್ರಗ್ರಹಣ ವೀಕ್ಷಣೆಗೆ ತಾರಾಲಯದಲ್ಲಿ ವ್ಯವಸ್ಥೆ

ಬೆಂಗಳೂರಿನಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿದೆ. ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಚಂದ್ರಗ್ರಹಣ ವೀಕ್ಷಣೆಗೆ 6 ಟೆಲಿಸ್ಕೋಪ್ ಹಾಗೂ 1 LCD ಪರದೆಯ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ರಾತ್ರಿ 8.30 ರಿಂದ 9.30 ರ ತನಕ ಗ್ರಹಣ ಕುರಿತ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಂದ್ರಗ್ರಹಣ ಕುರಿತು ಮಾಹಿತಿ ನೀಡಲಾಗುತ್ತದೆ. ರಾತ್ರಿ 9.30 ಗಂಟೆ ನಂತರ ಟೆಲಿಸ್ಕೋಪ್ ಮೂಲಕ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಜನಸಾಮಾನ್ಯರಿಗೆ ಗ್ರಹಣವನ್ನು ಉಚಿತವಾಗಿ ವೀಕ್ಷಿಲಲು ನೆಹರೂ ತಾರಾಲಯ ವ್ಯವಸ್ಥೆ ಮಾಡಲಾಗಿದೆ.

ಇಂದು ರಾತ್ರಿ ಅಪ್ಪಿ ತಪ್ಪಿ ಕೂಡ ಈ ರಾಶಿಯವರು ಚಂದ್ರ ಗ್ರಹಣವನ್ನ ನೋಡಲೇಬಾರದು!

ನವದೆಹಲಿ, ಮುಂಬೈ, ಕೋಲ್ಕತಾ ಸೇರಿದಂತೆ ಹಲೆವೆಡೆ ಚಂದ್ರಗ್ರಹಣ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಭಾರತೀಯ ನಂಬಿಕೆ ಪ್ರಕಾರ ಗ್ರಹಣ ಶುಭಘಳಿಗೆಯಲ್ಲ. ಈ ಸಮಯವನ್ನು ಧ್ಯಾನದ ಮೂಲಕ ಕಳೆಯಲು ಸೂಚಿಸುತ್ತಾರೆ. ಕಾರಣ ಚಂದ್ರಗ್ರಹಣದ ವೇಳೆ ಪರಿಸರದಲ್ಲಿ ನೆಗಟೀವ್ ಎನರ್ಜಿ ತುಂಬಿಕೊಳ್ಳುತ್ತದೆ. ಇದು ಮನಸ್ಸು, ದೇಹ, ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎನ್ನುತ್ತಾರೆ. ಕಾರಣ ಪ್ರಕೃತಿಯಲ್ಲಿ ಬದಲಾವಣೆ ಕೆಲ ವ್ಯತಿರಿಕ್ತ ಪರಿಣಾಮ ಸೃಷ್ಟಿಸಬಲ್ಲ ಎಂದು ಹೇಳುತ್ತಾರೆ.