Asianet Suvarna News Asianet Suvarna News

ISRO Rocket ಇಸ್ರೋದ ಮಾನವ ಶ್ರೇಣಿಯ ಘನ ರಾಕೆಟ್‌ ಬೂಸ್ಟರ್‌ ಪರೀಕ್ಷೆ ಯಶಸ್ವಿ

  • ಗಗನಯಾನ ಮಿಶನ್‌ನತ್ತ ಇಸ್ರೋ ಮಹತ್ವದ ಹೆಜ್ಜೆ
  • ಗಗನಯಾನ ನಿಗದಿತ ಸಮಯದಲ್ಲೇ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪರೀಕ್ಷೆ
  • ಬಾಹ್ಯಾಕಾಶ ಸಹಕಾರಕ್ಕೆ ಇಸ್ರೋ, ಹಿಮಾಚಲಪ್ರದೇಶ ವಿವಿ ಒಪ್ಪಂದ
     
ISRO successfully conduct static fire test of boosters HS200 rocket for Gaganyaan ckm
Author
Bengaluru, First Published May 14, 2022, 4:40 AM IST

ಬೆಂಗಳೂರು(ಮೇ.14): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಗನಯಾನ ಕ್ಕಾಗಿ ಬಳಸಲಾಗುವ ಮಾನವ ಶ್ರೇಣಿಯ ಘನ ರಾಕೆಟ್‌ ಬೂಸ್ಟರ್‌ ಎಚ್‌ಎಸ್‌200ನ ಸ್ಟ್ಯಾಟಿಕ್‌ ಪರೀಕ್ಷೆಯನ್ನು ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಇಸ್ರೋದ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ ಗಗನಯಾನವನ್ನು ನಿಗದಿತ ಸಮಯದಲ್ಲೇ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪರೀಕ್ಷೆಯ ಸಫಲತೆ ಮಹತ್ವದ್ದಾಗಿದೆ.

ಮಂಗಳನ ನಂತರ ಈಗ ಶುಕ್ರಯಾನಕ್ಕೆ ಇಸ್ರೋ ಸಜ್ಜು!

‘ಉಪಗ್ರಹ ಉಡ್ಡಯನ ವಾಹನ ಎಲ್‌ವಿಎಂ3ಯನ್ನು ಗಗನಯಾನ ಕಾರ್ಯಕ್ರಮಕ್ಕಾಗಿ ಬಳಸಲಾಗುತ್ತಿದ್ದು, ಮಾನವ ಸಹಿತ ಬಾಹ್ಯಾಕಾಶ ಯಾನಕ್ಕಾಗಿ ಉಡ್ಡಯನ ವಾಹನದಲ್ಲಿ ಹಲವಾರು ಸುಧಾರಣೆಗಳನ್ನು ಮಾಡಲಾಗಿತ್ತು. ಈ ಇಡೀ ವ್ಯವಸ್ಥೆಯನ್ನು ದೇಶಿಯವಾಗಿ ಸಿದ್ಧಪಡಿಸಲಾಗಿದೆ ಎಂಬುದು ವಿಶೇಷವಾಗಿದೆ. ಮಾನವ ಶ್ರೇಣಿಯ ಘನ ರಾಕೆಟ್‌ ಬೂಸ್ಟರ್‌ ಎಚ್‌ಎಸ್‌200 ಅನ್ನು 135 ಸೆಕೆಂಡ್‌ಗಳ ಕಾಲ ಪರೀಕ್ಷಿಸಲಾಗಿದ್ದು, 20 ಮೀ. ಉದ್ದ 3.2 ಮೀ ವ್ಯಾಸ ಹೊಂದಿರುವ ಇದು ಜಗತ್ತಿನ 2 ನೇ ಅತಿದೊಡ್ಡ ಕಾರ್ಯಾಚರಣೆಯಲ್ಲಿರುವ ಬೂಸ್ಟರ್‌ ಆಗಿದೆ. ಕೈಗೊಂಡ ಎಲ್ಲ ವಿಧದ ಪರೀಕ್ಷೆಯಲ್ಲೂ ರಾಕೆಟ್‌ ಬೂಸ್ಟರ್‌ ಸಫಲವಾಗಿದೆ’ ಎಂದು ಇಸ್ರೋ ಹೇಳಿದೆ.

ಈ ಪರೀಕ್ಷೆಯ ವೇಳೆಗೆ ಇಸ್ರೋದ ಮುಖ್ಯಸ್ಥ ಹಾಗೂ ಬಾಹ್ಯಾಕಾಶ ವಿಭಾಗದ ಕಾರ್ಯದರ್ಶಿಯಾದ ಎಸ್‌. ಸೋಮನಾಥ್‌ ಹಾಗೂ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್‌. ಉನ್ನಿಕೃಷ್ಣನ್‌, ಇಸ್ರೋ ವಿಜ್ಞಾನಿಗಳೊಂದಿಗೆ ಉಪಸ್ಥಿತರಿದ್ದರು.

ಬಾಹ್ಯಾಕಾಶ ಸಹಕಾರಕ್ಕೆ ಇಸ್ರೋ, ಹಿಮಾಚಲಪ್ರದೇಶ ವಿವಿ ಒಪ್ಪಂದ
ಬಾಹ್ಯಕಾಶದ ಸ್ಥಿತಿ, ಖಗೋಳ ಶಾಸ್ತ್ರ ಮತ್ತು ಖಭೌತ ಶಾಸ್ತ್ರ ಮುಂತಾದ ವಿಷಯಗಳಲ್ಲಿ ಪರಸ್ಪರ ಸಹಕರಿಸುವ ಕುರಿತು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಹಿಮಾಚಲ ಪ್ರದೇಶ ಕೇಂದ್ರಿಯ ವಿಶ್ವವಿದ್ಯಾಲಯದ ಮಧ್ಯೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಚಂದ್ರಯಾನ-3 ಮಿಷನ್ ಮೊದಲ ನೋಟ ಬಹಿರಂಗ, ಈ ವರ್ಷದ ಆಗಸ್ಟ್‌ನಲ್ಲಿ ಚಾಲನೆ

ಬಾಹ್ಯಾಕಾಶದಲ್ಲಿ ದಿನದಿಂದ ದಿನಕ್ಕೆ ಮಾನವ ನಿರ್ಮಿತ ಉಪಗ್ರಹಗಳು ಸೇರಿದಂತೆ ವಿವಿಧ ವಸ್ತುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳು ಮತ್ತು ಇನ್ನಿತರ ಆಸ್ತಿಗಳನ್ನು ರಕ್ಷಿಸುವುದು ಅತಿ ಮುಖ್ಯ. ವೀಕ್ಷಣಾ ಸ್ಥಳಗಳಿಂದ ನಮ್ಮ ಬಾಹ್ಯಾಕಾಶ ವಸ್ತುಗಳು ಮತ್ತು ಅದಕ್ಕೆ ಸಂಭಾವ್ಯ ಅಪಾಯ ಒಡ್ಡಬಹುದಾದ ವಸ್ತುಗಳ ಮೇಲೆ ನಿಗಾ ಇಡುವುದು ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ವೀಕ್ಷಣಾ ವ್ಯವಸ್ಥೆಗಳನ್ನು ಸ್ಥಾಪಿಸಿ ಬಾಹ್ಯಾಕಾಶ ವಸ್ತುಗಳ ಮೇಲೆ ನಿಗಾ ಇಡುವುದು, ಆಳ ಬಾಹ್ಯಾಕಾಶದ ಅನ್ವೇಷಣೆ, ಖಭೌತ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅನ್ವೇಷಣೆ ಮತ್ತು ಭೂಮಿಯ ಸಮೀಪದಲ್ಲಿರುವ ವಸ್ತುಗಳ ಪರಿಶೀಲನೆ ಮುಂತಾದ ವಿಷಯದಲ್ಲಿ ಸಹಕರಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಬಾಹ್ಯಾಕಾಶ ಸನ್ನಿವೇಶದ ಅರಿವು ಮತ್ತು ನಿರ್ವಹಣೆ ನಿರ್ದೇಶನಾಲಯದ ನಿರ್ದೇಶಕ ಡಾ ಎ.ಕೆ.ಅನಿಲ್‌ ಕುಮಾರ್‌, ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ಪ್ರೊಫೆಸರ್‌ ಡಾ ಪಿ.ಶ್ರೀಕುಮಾರ್‌, ವಿಜ್ಞಾನ ಕಾರ್ಯಕ್ರಮ ಅಧಿಕಾರಿ ಡಾ ತೀರ್ಥ ಪ್ರತಿಮ್‌ ದಾಸ್‌, ಹಿಮಾಚಲ ವಿವಿಯ ಭೌತಶಾಸ್ತ್ರ ಮತ್ತು ಖಗೋಲ ವಿಜ್ಞಾನಗಳ ವಿಭಾಗದ ಪ್ರೊಫೆಸರ್‌ ಹುಮ್‌ ಚಾಂದ್‌, ರಿಜಿಸ್ಟ್ರಾರ್‌ ವಿಶಾಲ್‌ ಸೂದ್‌ ಮುಂತಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios