ಚಿತ್ರೋದ್ಯಮಕ್ಕೆ ದೊಡ್ಡ ಗುಡ್ ನ್ಯೂಸ್ ಕೊಟ್ಟ ಯಡಿಯೂರಪ್ಪ.. ಕಂಡಿಶನ್ ಇದೆ!
ಕೊರೋನಾ ಎರಡನೇ ಅಲೆ/ ಚಿತ್ರಮಂದಿರ ಅರ್ಧ ಭರ್ತಿ ವಿಚಾರ/ ಸರ್ಕಾರದ ಮುಂದೆ ಅಂತ ಪ್ರಸ್ತಾಪ ಇಲ್ಲ ಎಂದ ಸಿಎಂ ಯಡಿಯೂರಪ್ಪ/ ಚಿತ್ರೋದ್ಯಮಕ್ಕೆ ನಿರಾಳ ಸುದ್ದಿ/ ಪುನೀತ್ ರಾಜ್ ಕುಮಾರ್ ವಿರೋಧ ಮಾಡಿದ್ದರು.
ಬೆಂಗಳೂರು(ಮಾ. 19) ಹೆಚ್ಚಾಗುತ್ತಿರುವ ಕೊರೋನಾ ನಿಯಂತ್ರಣಕ್ಕೆ ಚಿತ್ರಮಂದಿರಗಳಲ್ಲಿ ಶೇ. 50 ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಬೇಕು ಎಂಬ ಮಾತು ಬಿಬಿಎಫಿಯಿಂದ ಕೇಳಿಬಂದಿತ್ತು. ಇದೇ ಕಾರಣಕ್ಕೆ ನಿರ್ಮಾಪಕರ ಸಂಘ ಮತ್ತು ವಾಣಿಜ್ಯ ಮಂಡಳಿಯಿಂದ ತರ್ತು ಸಭೆ ಕರೆಯಲು ಚಿಂತನೆ ನಡೆದಿತ್ತು.
ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಸಿನಿಮಾ ಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ಪ್ರೇಕ್ಷಕರು ಮತ್ತು ಥಿಯೇಟರ್ ಮಾಲೀಕರು ಎಲ್ಲಾ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ, ಕೊರೋನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕರಿಸಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಿರ್ಬಂಧ ಹೇರುವುದಕ್ಕೆ ನೆನಪಿರಲಿ ಪ್ರೇಮ್ ಏನಂತಾರೆ?
ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಭೆ ನಡೆಸೋ ಬಗ್ಗೆ ಮನವಿ ಮಾಡಿರೋ ನಿರ್ಮಾಪಕರ ಸಂಘ ಯೋಚನೆ ಮಾಡಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಹೇಳಿಕೆ ನೀಡಿದ್ದರು.
ತುಂಬಾ ದಿನಗಳ ನಂತರ ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಲಾಗಿದೆ. ಈಗ ಮತ್ತೆ ಕ್ರಮಕ್ಕೆ ಮುಂದಾದರೆ ನಿರ್ಮಾಪಕರು ಸೇರಿದಂತೆ ಚಿತ್ರೋದ್ಯಮಕ್ಕೆ ನಷ್ಟ ಎಂಬ ವಿಚಾರವನ್ನು ಪುನೀತ್ ರಾಜ್ ಕುಮಾರ್ ಆದಿಯಾಗಿ ಅನೇಕರು ಹೇಳಿದ್ದರು .