ಕಳೆದೊಂದು ವರ್ಷದಿಂದ ಭಾರಿ ವಿವಾದ ಸೃಷ್ಟಿಸಿರುವ ನರೇಶ್​-ಪವಿತ್ರಾ ಲೋಕೇಶ್​ ಅಭಿನಯದ ಮತ್ತೆ ಮದುವೆ ಚಿತ್ರಕ್ಕೆ ಭಾರಿ ಟ್ವಿಸ್ಟ್​ ಸಿಕ್ಕಿದ್ದು, ನರೇಶ್​ ಪತ್ನಿ ಕೋರ್ಟ್​ ಮೊರೆ ಹೋಗಿದ್ದಾರೆ.  

ತೆಲುಗು ನಟ ಕಮ್ ನಿರ್ದೇಶಕ ನರೇಶ್ (Naresh) ಮತ್ತು ಬಹುಭಾಷಾ ನಟಿ ಪವಿತ್ರಾ ಲೋಕೇಶ್ ವೈಯಕ್ತಿಕ ಜೀವನದಲ್ಲಿ ಕಳೆದೊಂದು ವರ್ಷದಿಂದ ಅಲ್ಲೋಕ ಕಲ್ಲೋಲವೇ ಸೃಷ್ಟಿಯಾಗಿದೆ. ಹಲವು ವರ್ಷಗಳಿಂದ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಮದುವೆ ಆಗುತ್ತಿದ್ದಾರೆ ಹಾಗೆ ಹೀಗೆ ಎಂದು ಸಾಕಷ್ಟು ವಿಚಾರಗಳನ್ನು ಮಾಧ್ಯಮಗಳ ಎದುರು ಚರ್ಚೆ ಆಯ್ತು. ಇವರ ಸಂಬಂಧ, ಮದುವೆಯ ಕುರಿತು ಇದಾಗಲೇ ಸಾಕಷ್ಟು ಚರ್ಚೆಯಾಗಿರುವ ನಡುವೆಯೇ, ಕೆಲವು ದಿನಗಳ ಹಿಂದೆ ಮದುವೆ ಮಾಡಿಕೊಂಡಿದ್ದ ಸುದ್ದಿ ಬಹಳ ಸದ್ದು ಮಾಡಿತ್ತು. ಕೊನೆಗೆ ಈ ಜೋಡಿ ಒಂದೇ ರೂಮ್‌ನಲ್ಲಿ ಸಿಕ್ಕಿಬಿದ್ದಿತ್ತು. ಆಗ ನರೇಶ್ ಪತ್ನಿ ರಮ್ಯಾ ರಘುಪತಿ ಹಂಗಾಮ ಸೃಷ್ಟಿಸಿದ್ದರು. ಇವೆಲ್ಲಾ ಗಲಾಟೆ ನಡುವೆಯೇ ಇವರು ದುಬೈನಲ್ಲಿ ಹನಿಮೂನ್‌ಗೆ ಹೋಗಿದ್ದರು ಎಂಬ ಕುರಿತು ಸಾಕಷ್ಟು ಫೋಟೋಗಳೂ ವೈರಲ್​ ಆಗಿದ್ದವು.

ನಂತರ ಇವರಿಬ್ಬರ ಮದುವೆ ವಿಡಿಯೋವನ್ನು ಖುದ್ದು ನರೇಶ್​ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು. ಆದರೆ ನಂತರ ಅವರು ಮತ್ತೆ ಮದುವೆ ಎನ್ನುವ ಚಿತ್ರದ ಸೀನ್​ಗಳಷ್ಟೇ ಎಂದು ಸಮಜಾಯಿಷಿಯನ್ನೂ ಕೊಟ್ಟಿತ್ತು ಜೋಡಿ. ‘ಮತ್ತೆ ಮದುವೆ’ ಎನ್ನುವ ಚಿತ್ರ ಇದಾಗಿರುವುದಾಗಿ ಹೊಸ ಪೋಸ್ಟರ್‌ ಬೇರೆ ರಿಲೀಸ್ ಮಾಡಿದ್ದರು. ತಮ್ಮ ವೈಯಕ್ತಿಕ ಜೀವನದ ವಿಚಾರ ಹಿಡಿದು ಮಾಡಿರುವ ಚಿತ್ರಕ್ಕೆ 'ಮತ್ತೆ ಮದುವೆ' ಎನ್ನುವ ಟೈಟಲ್ ಕೊಟ್ಟಿರುವುದಾಗಿ ಹೇಳಲಾಗಿತ್ತು. 

ನಂತರ ತೆಲುಗುವಿನಲ್ಲಿಯೂ ಟೀಸರ್​ (Teaser) ಬಿಡುಗಡೆ ಮಾಡಲಾಗಿತ್ತು. ಹಿರಿಯ ನಟರೂ ಆಗಿರುವ ನರೇಶ್ ಅವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ 'ಮಲ್ಲಿ ಪೆಲ್ಲಿ' (ಮತ್ತೆ ಮದುವೆ- Matte Maduve) ಅನ್ನು ಘೋಷಿಸಿದ್ದರು. ಕನ್ನಡ ಮತ್ತು ತೆಲುಗುವಿನಲ್ಲಿ ಬಿಡುಗಡೆಯಾಗಿದ್ದ ಫಸ್ಟ್​ ಲುಕ್​ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ನರೇಶ್ ಕಾಣಿಸಿಕೊಂಡಿದ್ದರೆ, ಪವಿತ್ರಾ ಲೋಕೇಶ್ (Pavitra Lokesh) ಅವರ ಸುಂದರ ಮನೆಯ ಮುಂದೆ ರಂಗೋಲಿ ಹಾಕುವುದನ್ನು ಆನಂದಿಸುತ್ತಿದ್ದರು. ಚಿತ್ರದಲ್ಲಿ ಜಯಸುಧಾ, ಶರತ್‌ಬಾಬು, ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ ಮತ್ತು ರೋಷನ್ ಕೂಡ ಇದ್ದಾರೆ.

ನರೇಶ್​, ಪವಿತ್ರಾ ಲೋಕೇಶ್​ 'ಮತ್ತೆ ಮದುವೆ'ಗೆ ಡೇಟ್​ ಫಿಕ್ಸ್​- ಕಿಸ್ಸಿಂಗ್​ ಟೀಸರ್​ ಬಿಡುಗಡೆ

ಎಲ್ಲವೂ ಸರಿಯಾಗಿದ್ದರೆ, ಈ ಚಿತ್ರ ಇದೇ 26ಕ್ಕೆ ಈ ಚಿತ್ರ ತೆಲುಗಿನಲ್ಲಿ (ಮಲ್ಲಿ ಪೆಲ್ಲಿ) ಬಿಡುಗಡೆಯಾಗಬೇಕಿದೆ. ಕನ್ನಡ ರಿಲೀಸ್‌ ದಿನಾಂಕವನ್ನು ಶೀಘ್ರ ಘೋಷಿಸುವುದಾಗಿ ಚಿತ್ರತಂಡ ತಿಳಿಸಿತ್ತು. ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಈ ಘಟನೆಗೊಂದು ಭಾರಿ ಟ್ವಿಸ್ಟ್​ ಸಿಕ್ಕಿದೆ. ಅದೇನೆಂದರೆ ಹಿಂದೊಮ್ಮೆ ಮೈಸೂರಿನಲ್ಲಿ ನರೇಶ್ ಹಾಗೂ ಪವಿತ್ರಾ ಒಟ್ಟಿಗೆ ಇದ್ದ ಹೋಟೆಲ್​ಗೆ ತೆರಳಿ ರಾದ್ಧಾಂತ ಮಾಡಿ ಎಂಟ್ರಿ ಕೊಟ್ಟಿದ್ದ ಹಾಗೂ ನರೇಶ್ ಹಾಗೂ ಪವಿತ್ರಾ ವಿರುದ್ಧ ಸತತವಾಗಿ ಮಾಧ್ಯಮಗಳ ಮುಂದೆ ಆರೋಪಗಳನ್ನು ಮಾಡಿದ್ದ ನರೇಶ್ ಪತ್ನಿ ರಮ್ಯಾ ರಘುಪತಿ ಪುನಃ ಎಂಟ್ರಿ ಕೊಟ್ಟಿದ್ದಾರೆ. ಮಲ್ಲಿ ಪೆಲ್ಲಿ ಸಿನಿಮಾ ಬಿಡುಗಡೆ ಮಾಡದಂತೆ ಕೋರಿ ರೊಮ್ಯಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಕುಕಟ್​ಪಲ್ಲಿಯಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ರಮ್ಯಾ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಖ್ಯಾತಿಗೆ ಮಸಿ ಬಳಿಯಲು ಮತ್ತೆ ಮದುವೆ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಘನತೆಗೆ ಧಕ್ಕೆ ಬರುವ ಸನ್ನಿವೇಶಗಳು, ದೃಶ್ಯಗಳು ಇರುವ ಕಾರಣ ಸಿನಿಮಾಕ್ಕೆ ತಡೆ ನೀಡಬೇಕು ಎಂದು ರಮ್ಯಾ ರಘುಪತಿ ನ್ಯಾಯಾಲಯಕ್ಕೆ (Family Court) ಮನವಿ ಸಲ್ಲಿಸಿದ್ದಾರೆ. ಅಂದಹಾಗೆ ರಮ್ಯಾ ರಘುಪತಿ ಅವರು ನರೇಶ್ ಅವರ ಮೂರನೇ ಪತ್ನಿ. 

ಕುತೂಹಲದ ಸಂಗತಿ ಏನೆಂದರೆ, ಇದೇ ಕೋರ್ಟ್​ನಲ್ಲಿ ರಮ್ಯಾ ರಘುಪತಿ ಇದಾಗಲೇ ಸಲ್ಲಿಸಿರುವ ಅರ್ಜಿಯೊಂದು ಇತ್ಯರ್ಥಕ್ಕೆ ಬಾಕಿ ಇದೆ. ರಮ್ಯಾ ರಘುಪತಿ ಹಾಗೂ ನರೇಶ್​ರ ದಾಂಪತ್ಯಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ನ್ಯಾಯಾಲಯವು ರಮ್ಯಾ ರಘುಪತಿಯವರ (Ramya Raghupathi) ಅರ್ಜಿಯ ವಿಚಾರಣೆ ಇನ್ನೂ ಮಾಡಿಲ್ಲ.ಈಗ ಈ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ಕೈಗೆತ್ತಿಕೊಳ್ಳುತ್ತಾ? ಚಿತ್ರ ಬಿಡುಗಡೆಗೆ ತಡೆ ಆಗತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. 

ನಟಿಯಾಗಿ ನೋಡಿ, ಮನೆಯೊಳಗೆ ಇಣುಕಬೇಡಿ: ಪವಿತ್ರಾ ಲೋಕೇಶ್‌