ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ಅವರ ಹೊಸ ಚಿತ್ರ 'ಮಾಚಿಸ್' ಘೋಷಣೆಯಾಗಿದ್ದು, ಪೃಥ್ವಿ ಅಂಬಾರ್ ನಿರ್ದೇಶನದ 'ಬುಲ್ಡಾಗ್' ಚಿತ್ರೀಕರಣ ಪೂರ್ಣಗೊಳಿಸಿದೆ. ಇದರೊಂದಿಗೆ 'ಚಿಕ್ಕವರು ಕೋಣರಲ್ಲ' ಎಂಬ ಮಕ್ಕಳ ಚಿತ್ರ ಹಾಗೂ 'ನಂದಗೋಕುಲ' ಧಾರಾವಾಹಿಯ ಹೊಸ ಪ್ರಸಂಗಗಳು ಕನ್ನಡ ಮನರಂಜನಾ ಲೋಕದಲ್ಲಿ ಸದ್ದು ಮಾಡುತ್ತಿವೆ.
ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನದಂದೇ ಹೊಸ ಚಿತ್ರ ಅನೌನ್ಸ್ ಮಾಡಲಾಗಿದೆ. ಆ ಸಿನಿಮಾವೇ ಮಾಚಿಸ್.. ಈ ಹಿಂದೆ ಮರ್ಫಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಬಿ ಎಸ್ ಪಿ ವರ್ಮ 'ಮಾಚಿಸ್' ಚಿತ್ರ ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ಸುರೇಶ್ ಗೌಡ ಹೆಣ್ಣೂರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಶಿವುಗೌಡ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದ ಛಾಯಾಗ್ರಾಹಕರಾಗಿ ಆದರ್ಶ ಆರ್, ಸಂಕಲನಕಾರರಾಗಿ ಕಿರಣ್, ಕಲಾ ನಿರ್ದೇಶಕರಾಗಿ ಗುಣ, ಕಾರ್ಯಕಾರಿ ನಿರ್ಮಾಪಕರಾಗಿ ಮೋಹನ್ ಎನ್ ಮುನಿ ನಾರಾಯಣಪ್ಪ, ನಿರ್ವಹಣಾ ನಿರ್ಮಾಪಕರಾಗಿ ಸುರೇಶ್ ಮೈಸೂರು ಹಾಗೂ ಸಾಹಸ ಸಂಯೋಜನೆಯನ್ನ ಡಾ. ಕೆ. ರವಿ ವರ್ಮಾ ಮಾಡಲಿದ್ದಾರೆ. ಜುಲೈ ಇಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಪೃಥ್ವಿಅಂಬಾರ್ ನಿರ್ದೇಶನದ ಬುಲ್ ಡಾಗ್ ಚಿತ್ರೀಕರಣ ಪೂರ್ಣ!
ಚೌಕೀದಾರ್, ಭುವನಂ ಗಗನಂ ಖ್ಯಾತಿಯ ನಟ ಪೃಥ್ವಿ ಅಂಬಾರ್ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರ 'ಬುಲ್ಡಾಗ್'. ಡಾರ್ಕ್ ಡ್ಯೂಮರ್ ಜಾನರ್ ನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಅವರೇ ನಾಯಕನಾಗಿ ನಟಿಸಿದ್ದಾರೆ. ಇದೀಗ 'ಬುಲ್ಡಾಗ್' ಚಿತ್ರದ ಅಂತಿಮ ಹಂತದ ಶೂಟಿಂಗ್ ಪೂರೈಸಿ ಪೋಸ್ಟ್ ಪ್ರೊಡಕ್ಷನ್ಗೆ ಸಿದ್ಧತೆ ನಡೆಸುತ್ತಿದ್ದಾರೆ. 'ಬುಲ್ ಡಾಗ್' ಒಂದೂರಿನ ನಾಲ್ವರು ಹುಡುಗರ ಕಥೆಯ ಸಿನಿಮಾ. ಈ ಚಿತ್ರದಲ್ಲಿ ನಟ ಪೃಥ್ವಿ ಅಂಬಾರ್ 'ಬುಲ್ಡಾಗ್' ಎಂಬ ಪಾತ್ರವನ್ನೇ ಮಾಡುತ್ತಿದ್ದಾರೆ. ಅಸ್ಟ್ರಾ ಪ್ರೊಡಕ್ಷನ್ಸ್ ಅಡಿ ಲಾಂಚು ಲಾಲ್ ಅವರ ನಿರ್ಮಾಣದ ಈ ಚಿತ್ರಕ್ಕೆ ಚೆಂತುಮೆಪ್ಪಯರ್ ಅವರ ಕ್ಯಾಮೆರಾ ವರ್ಕ್, ನಿಶಾನ್ ರೈ ಅವರ ಸಂಗೀತ ಸಂಯೋಜನೆ, ಗಣೇಶ್ ನೀರ್ಚಲ್ ಅವರ ಸಂಕಲನವಿದೆ. ಸಿಹಿ ಗೌಡ,ಆರಾಧನಾಭಟ್, ಪ್ರಜ್ವಲ್ ಪೈ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಕಾಶ್ ತುಮ್ಮಿನಾಡ್ ಪ್ರಮುಖ ಪಾತ್ರದಲ್ಲಿದ್ದಾರೆ.
ಚಂದನವನದಲ್ಲಿ ಬೆರಳಣಿಕೆಯಷ್ಟು ಮಕ್ಕಳ ಚಿತ್ರಗಳು ಬರುತ್ತಿವೆ. ಆ ಸಾಲಿಗೆ ’ಚಿಕ್ಕವರು ಕೋಣರಲ್ಲ’ ಸೇರ್ಪಡೆಯಾಗಿದೆ. ಪ್ರಕಾಶ್ ಚಿನ್ನಪ್ಪ ಸಿನಿಮಾಕ್ಕೆ ಕಥೆ, ಚಿತ್ರಕಥೆ, ನಿರ್ದೆಶನ ಜತೆಗೆ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ನೇತ್ರಬಾಬು-ಶ್ವೇತ-ಜಮೀಲ-ನಾಜಿಯ ಖಾಜಿ-ಸತೀಶ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾಡಿದ ಚಿತ್ರತಂಡ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದೆ. ಮುಖ್ಯ ಪಾತ್ರದಲ್ಲಿ ಚಿಣ್ಣರುಗಳಾದ ಸೆಹರಿ, ತಿಷ್ಯ, ಹನ್ಸಿಕಾ, ಶ್ರೀವಾಸ್, ವಿಯಾನ್, ಶ್ರೀಗೌರಿ ಮತ್ತು ಶ್ರೀವಾಸ್ ಅಭಿನಯಸಿದ್ದಾರೆ. ಉಳಿದಂತೆ ಹಿರಿಯ ಕಲಾವಿದರುಗಳಾದ ರಮೇಶ್ಭಟ್, ಸುಂದರರಾಜ್ ಹಾಗೂ ಅನಿತಾಭಟ್ ನಟಿಸಿದ್ದಾರೆ.
ಸರ್ಕಾರಿ ಕೆಲಸಕ್ಕೆ ಕೇಶವ, ಡ್ರೈವಿಂಗ್ ಕೆಲಸಕ್ಕೆ ವಲ್ಲಭ,ನಂದಗೋಕುಲದಲ್ಲಿ ಸಹೋದರರ ಸವಾಲ್!
ಕಲರ್ಸ್ ಕನ್ನಡ ವಾಹಿನಿಯಲ್ಲಿ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಧಾರಾವಾಹಿ 'ನಂದಗೋಕುಲ'. ಕೌಟುಂಬಿಕ ಮೌಲ್ಯಗಳ ಜೊತೆಗೆ ಸಣ್ಣಪುಟ್ಟ ಮೋಜಿನ ಪ್ರಸಂಗಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿರುವ ಈ ಸೀರಿಯಲ್ನಲ್ಲಿ, ಇದೀಗ ಕೇಶವ ಮತ್ತು ವಲ್ಲಭನ 'ಸಹೋದರರ ಸವಾಲ್' ಪ್ರಸಂಗ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದೆ. ಅಷ್ಟೆ ಅಲ್ಲ ಗಂಡಂದಿರ ಅತಿಯಾದ ಆತ್ಮವಿಶ್ವಾಸ ಮತ್ತು ಹೆಂಡತಿಯರ ಮುಗ್ಧ ಚಾಡಿ ಮಾತುಗಳ ನಡುವಿನ ಈ ಕಚ್ಚಾಟ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಈ ಮೋಜಿನ ಪ್ರಸಂಗಗಳನ್ನು ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ಮತ್ತು ಜಿಯೋಹಾಟ್ಸ್ಟಾರ್ನಲ್ಲಿ ಮಿಸ್ ಮಾಡದೆ ನೋಡಬಹುದು.


