Asianet Suvarna News Asianet Suvarna News

Sandalwood Celebrities: ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಿಡಿಕಾರಿದ ಚಂದನವನದ ತಾರೆಯರು!

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವ ಘಟನೆಯನ್ನು ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

Sandalwood Celebrities demand to take action against kannada flag burners gvd
Author
Bangalore, First Published Dec 16, 2021, 3:06 PM IST

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ (Shiv Sena) ಕಾರ್ಯಕರ್ತರು ಕನ್ನಡ ಬಾವುಟವನ್ನು (Kannada Flag) ಸುಟ್ಟು ಹಾಕಿರುವ ಘಟನೆಯನ್ನು ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು (Sandalwood Celebrities) ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. 'ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು' ಎಂದು ಆಗ್ರಹಿಸಿದ್ದಾರೆ. ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹಿರೋ  ಶಿವರಾಜ್‌ಕುಮಾರ್, ದುನಿಯಾ ವಿಜಯ್, ಗೋಲ್ಡನ್​ ಸ್ಟಾರ್​ ಗಣೇಶ್, ಪ್ರಜ್ವಲ್​ ದೇವರಾಜ್, ಮರಿ ಟೈಗರ್​ ವಿನೋದ್​ ಪ್ರಭಾಕರ್, ನವರಸ ನಾಯಕ ಜಗ್ಗೇಶ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಿಡಿಕಾರಿದ್ದು, ಕನ್ನಡಕ್ಕಾಗಿ ಸ್ಯಾಂಡಲ್​ವುಡ್​ ತಾರೆಯರು​ ಮತ್ತೊಮ್ಮೆ ಒಂದಾಗಿದ್ದಾರೆ.

'ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ' ಎಂದು ಶಿವರಾಜ್‌ಕುಮಾರ್‌ (Shiva Rajkumar) ಟ್ವೀಟ್‌ ಮಾಡಿದ್ದಾರೆ. ಜೊತೆಗೆ ವರನಟ ಡಾ.ರಾಜ್‌ಕುಮಾರ್‌ ಅವರು ಕನ್ನಡ ಪರ ಹೋರಾಟ ಮಾಡಿದ ಸಂದರ್ಭದ ಫೋಟೊವೊಂದನ್ನು ಶಿವರಾಜ್‌ಕುಮಾರ್‌ ಶೇರ್ ಮಾಡಿಕೊಂಡಿದ್ದಾರೆ. 'ಕನ್ನಡ ಹೋರಾಟಗಾರರನ್ನ ಬಿಡುಗಡೆಗೊಳಿಸಿ' ಎಂಬ ಹ್ಯಾಷ್‌ಟ್ಯಾಗ್‌ ಅಭಿಯಾನವನ್ನೂ ಟ್ವೀಟರ್‌ನಲ್ಲಿ ಶಿವರಾಜ್‌ಕುಮಾರ್‌ ಆರಂಭಿಸಿದ್ದಾರೆ. ಈ ಟ್ವೀಟ್‌ಗೆ (Tweet) ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದು, 'ಕನ್ನಡಿಗರ ಹೋರಾಟಕ್ಕೆ ಇದೀಗ ಆನೆಬಲ ಬಂದಂತಾಗಿದೆ' ಎಂದಿದ್ದಾರೆ.
 


ಕನ್ನಡ ಧ್ವಜ ಸುಟ್ಟವರ ವಿರುದ್ಧ ಆಕ್ರೋಶ ಹೊರ ಹಾಕಿದ ನಟ ಗಣೇಶ್ (Ganesh), 'ಅವರು ಸುಟ್ಟಿದ್ದು ಧ್ವಜವಲ್ಲ, ಕನ್ನಡಿಗರ ಸ್ವಾಭಿಮಾನದ ಕಿಚ್ಚು. ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು. ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ಜೈ ಕನ್ನಡಾಂಬೆ' ಎಂದು ಗಣೇಶ್‌ ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ ಅನ್ನು ಸಾವಿರಾರು ಕನ್ನಡಿಗರು ರಿಟ್ವೀಟ್‌ ಮಾಡಿಕೊಂಡಿದ್ದಾರೆ.
 

ಕನ್ನಡ ಬಾವುಟ ಸುಟ್ಟಿರುವ ವಿಚಾರವಾಗಿ ನಟ ದುನಿಯಾ ವಿಜಯ್‌ (Duniya Vijay) ಕೂಡ ಟ್ವೀಟ್‌ ಮಾಡಿದ್ದಾರೆ. 'ನಾಡು, ನುಡಿ, ಭಾಷೆ ನಮ್ಮ ಉಸಿರಾಟದ ಒಂದು ಭಾಗ. ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ' ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.
 

ಕರುನಾಡಿನ ಧ್ವಜ ಸುಟ್ಟ ಘಟನೆಯನ್ನು ನಟ ಜಗ್ಗೇಶ್ (Jaggesh)​ ಕೂಡ ತೀವ್ರವಾಗಿ ಖಂಡಿಸಿದ್ದಾರೆ. 'ಕನ್ನಡ ಬಾವುಟ ಅಪಮಾನಿಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ. ಕನ್ನಡಪರ ಈ ವಿಷಯಕ್ಕೆ ಹೋರಾಟ ಮಾಡಿದ ಕನ್ನಡ ಸೈನಿಕರ ದಯಮಾಡಿ ಬಿಡುಗಡೆಗೊಳಿಸಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಜಗ್ಗೇಶ್​ ಒತ್ತಾಯಿಸಿದ್ದಾರೆ. 'ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ' ಎಂದು ಅವರು ಬರೆದುಕೊಂಡಿದ್ದಾರೆ.
 

ನಟ ಪ್ರಜ್ವಲ್‌ ದೇವರಾಜ್‌ (Prajwal Devaraj) ಕನ್ನಡ ಧ್ವಜವನ್ನು ಸುಟ್ಟವರನ್ನ ಹೇಡಿಗಳು ಎಂದು ಕರೆದಿದ್ದಾರೆ. " ಕನ್ನಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಕನ್ನಡ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ, ಜೈ ಕರ್ನಾಟಕ' ಎಂದು ಪೋಸ್ಟ್​ ಮಾಡಿದ್ದಾರೆ.
 

'ಜೈ ಕರ್ನಾಟಕ, ನಮ್ಮ ಕನ್ನಡದ ಬಾವುಟ ನಮ್ಮ ಘನತೆ, ಗೌರವ, ಅಸ್ಮಿತೆಯ ಸಂಕೇತ. ಕನ್ನಡ ಧ್ವಜಕ್ಕೆ ಮಾಡಿದ ಅವಮಾನ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಮಾಡುವ ಅವಮಾನ. ಕನ್ನಡ ಧ್ವಜವನ್ನು ಸುಟ್ಟು ಅವಮಾನಿಸಿದ ಕನ್ನಡ ದ್ರೋಹಿಗಳನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಿ. ಅದೇ ರೀತಿ ಬಂಧಿಸಿರುವ ಕನ್ನಡ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ' ಎಂದು ನಟ ವಿನೋದ್‌ ಪ್ರಭಾಕರ್‌ (Vinod Prabhakar) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ  ಪೋಸ್ಟ್‌ ಮಾಡಿದ್ದಾರೆ.
 

ಕನ್ನಡ ನಾಡಿನ ಧ್ವಜ ಸುಟ್ಟು ಹಾಕಿದ ಬಗ್ಗೆ ನಟ ಧ್ರುವ ಸರ್ಜಾ (Dhruva Sarja) ಭಾಷೆ ಎನ್ನುವುದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ. ಕನ್ನಡ ಧ್ವಜ ನಮ್ಮ ಸಂಸ್ಕೃತಿಯ ತಿಲಕ. ಕನ್ನಡ ಧ್ವಜವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ. ಸರ್ಕಾರ ಈ ಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕು. ಇದು ನನ್ನಂತಹ ಕೋಟ್ಯಾಂತರ ಕನ್ನಡಿಗರ ಒತ್ತಾಯ. ಜೈ ಆಂಜನೇಯ ಎಂದು ಟ್ವೀಟ್​ ಮಾಡಿದ್ದಾರೆ. ಜೊತೆಗೆ ಕನ್ನಡ ನಾಡಿನ ಬಾವುಟಕ್ಕೆ ಸೆಲ್ಯೂಟ್​ ಮಾಡುವ ಫೋಟೋ ಹಂಚಿಕೊಂಡು ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 


ಕರುನಾಡಿನ ಧ್ವಜ ಸುಟ್ಟ ಘಟನೆಯನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy)ಕೂಡ ತೀವ್ರವಾಗಿ ಖಂಡಿಸಿದ್ದಾರೆ. ಎಂಇಎಸ್‌ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ಹೇಯ. ಧ್ವಜವನ್ನು ಸುಟ್ಟು ವಿಕೃತಿ ಮೆರೆದಿರುವುದು ನೀಚ ಕೃತ್ಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಆಗಿರುವ ಅಪಚಾರ ಕ್ಷಮಾರ್ಹವಲ್ಲ. ಬಹುಭಾಷಾ ಪ್ರೇಮ, ಸಾಮರಸ್ಯ ಕನ್ನಡಿಗರ ದೌರ್ಬಲ್ಯವಲ್ಲ, ಔದಾರ್ಯ. ಇದನ್ನು ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಈ ಪರಮ ಕಿರಾತಕ ಕೃತ್ಯದ ವಿರುದ್ಧ ರಾಜ್ಯ ಸರಕಾರ ಅತ್ಯಂತ ಕಠಿಣವಾಗಿ ವರ್ತಿಸಬೇಕು. ನಮ್ಮ ಧ್ವಜವನ್ನು ಅಪಮಾನಿಸಿದ ಕನ್ನಡ ದ್ರೋಹಿಗಳಿಗೆ ತಕ್ಕಶಾಸ್ತಿ ಮಾಡಬೇಕು. ಕನ್ನಡ ದ್ರೋಹಿಗಳನ್ನು ಹಾಗೆಯೇ ಬಿಟ್ಟರೆ ಕರ್ನಾಟಕ ನಿಮ್ಮನ್ನು ಕ್ಷಮಿಸುವುದಿಲ್ಲ. ತಕ್ಷಣವೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕ್ರಮ ವಹಿಸಬೇಕು ಹಾಗೂ ಕನ್ನಡಕ್ಕಾಗಿ ಹೋರಾಡಿದವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ನನ್ನ ಆಗ್ರಹ ಎಂದು ಕೂ ಮಾಡಿದ್ದಾರೆ.
 

Sandalwood Celebrities demand to take action against kannada flag burners gvd
ನಡೆದಿದ್ದೇನು: ಮಹಾರಾಷ್ಟ್ರ ಏಕೀಕರಣ ಸಮಿತಿ ಅಧ್ಯಕ್ಷ ದೀಪಕ‌ ದಳವಿಗೆ ಕಪ್ಪು ಮಸಿ ಬಳಿದಿರುವುದನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚುವ ಮೂಲಕ ಪುಂಡತನ ಮೆರೆದಿದ್ದರು. ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ಸಮಯದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಕಿಡಿಗೇಡಿತನ ಮಾಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow Us:
Download App:
  • android
  • ios