'ಕಾಂತಾರ' ಹಾಡಿನ ವಿವಾದ; ಧರ್ಮಸ್ಥಳದಲ್ಲಿ ರಿಷಬ್ ಶೆಟ್ಟಿ ಹೇಳಿದ್ದೇನು?
ಇತ್ತೀಚಿಗಷ್ಟೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ವರಾಹ ರೂಪಮ್ ಹಾಡಿನ ವಿವಾದದ ಬಗ್ಗೆ ಮಾತನಾಡಿದ್ದಾರೆ.
ಸದ್ಯ ದೇಶದಾದ್ಯಂತ ಕಾಂತಾರ ಸಿನಿಮಾದೇ ಹವಾ. ರಿಷಬ್ ಶೆಟ್ಟಿ ನಿರ್ದೇಶ ಮಾಡಿ, ನಟಿಸಿರುವ ಕಾಂತಾರ ಸಿನಿಮಾಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಪ್ರಿಯತೆ ಬೆನ್ನಲ್ಲೇ ಚಿತ್ರದ ಸುಪ್ರಸಿದ್ಧ ವರಾಹ ರೂಪಮ್ ಹಾಡಿನ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಈ ಹಾಡು ಮಲಾಯಳಂ ಆಲ್ಬಂ ಸಾಂಗ್ ಒಂದರ ಕಾಪಿ ಎನ್ನುವ ಆರೋಪ ಕೇಳಿಬಂದಿದೆ. ಅಲ್ಲದೆ ಆಲ್ಬಂ ಹಾಡಿನ ಮೂಲ ತಯಾರಾಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ನಟ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗಷ್ಟೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ.
'ಸಿನಿಮಾದ ಜನಪ್ರಿಯ‘ವರಾಹ ರೂಪಂ...’ ನಮ್ಮ ಸಂಗೀತ ನಿರ್ದೇಶಕರು ಸ್ವಂತ ಮಾಡಿದ ಹಾಡು ಅದು. ಸಿನಿಮಾ ಹಿಟ್ ಆದಾಗ ಇಂಥ ಆರೋಪಗಳು ಬರುವುದು ಸಹಜ. ಈ ವಿವಾದಕ್ಕೆ ನಮ್ಮ ನಿರ್ಮಾಪಕರು ಹಾಗೂ ಸಂಗೀತ ನಿರ್ದೇಶಕರು ಸೂಕ್ತ ಉತ್ತರ ನೀಡುತ್ತಾರೆ' ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, 'ಸಿನಿಮಾ ಬಿಡುಗಡೆಗೆ ಮುಂಚೆ ಇಲ್ಲಿಗೆ ಬಂದು ಆಶೀರ್ವಾದ ತೆಗೆದುಕೊಂಡು ಹೋಗಿದ್ದೆ. ಟ್ರೇಲರ್ ಬಿಡುಗಡೆ ಆದಾಗ ಬಂದಿದ್ದೆ. ಸಿನಿಮಾ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ವಿಯಾಯಿತು. ಡಾ.ಹೆಗ್ಗಡೆ ಕುಟುಂಬ ಸಮೇತ ಸಿನಿಮಾ ನೋಡಿದ ಸಂದರ್ಭದಲ್ಲಿ ಭೇಟಿಯಾಗಲು ಆಗಲಿಲ್ಲ. ಈಗ ಕಾಲ ಕೂಡಿ ಬಂದು ಭೇಟಿಯಾಗಿದ್ದೇನೆ' ಎಂದು ರಿಷಬ್ ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಗ್ಗೆ ವಿವರಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿಯವರನ್ನು ಭೇಟಿಯಾದ ರಿಷಬ್ ಶೆಟ್ಟಿ ದಂಪತಿ
ಇನ್ನು ಕಾಂತಾರ ಸಿನಿಮಾವನ್ನು ವಿರೇಂದ್ರ ಹೆಗ್ಗಡೆ ಅವರು ನೋಡಿದ್ದು ದೇವರೇ ನೋಡಿದ್ದಷ್ಟು ಸಂತಸವಾಯಿತು ಎಂದು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಹೇಳಿದರು. ‘ಡಾ. ವಿರೇಂದ್ರ ಹೆಗ್ಗಡೆ ಅವರು ಸಿನಿಮಾ ನೋಡಿದ್ದು ದೇವರೇ ಸಿನಿಮಾ ನೋಡಿದಷ್ಟು ಖುಷಿಯಾಯಿತು’ ಎಂದು ಪ್ರಗತಿ ಶೆಟ್ಟಿ ಹೇಳಿದರು. ರಿಷಬ್ ದಂಪತಿ, ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹಷೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಕಾಂತಾರಾ ಸಿನಿಮಾ ವೀಕ್ಷಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ರಿಶಭ್ ಶೆಟ್ಟಿಗೆ ಫುಲ್ ಮಾರ್ಕ್ಸ್!
ಅಂದಹಾಗೆ ವೀರೇಂದ್ರ ಹೆಗ್ಗಡೆಯವರು ಕುಟುಂಬ ಸಮೇತರಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ಕಾಂತಾರ ಸಿನಿಮಾ ನೋಡಿದ್ದರು. ಸಿನಿಮಾ ನೋಡಿ ಬಳಿಕ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಇದೀಗ ಹೆಗ್ಗಡೆಯವರನ್ನು ಬೇಟಿಯಾಗಿರುವ ರಿಷಬ್ ಶೆಟ್ಟಿ ದಂಪತಿಯನ್ನು ಗೌರವಿಸಿ ಅಭಿನಂದಿಸಿದರು.