ತಮ್ಮ ವಿರುದ್ಧ ಸೋಶಿಯಲ್‌ ಮಿಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ನಟ ಜಗ್ಗೇಶ್‌ ಸಮರ ಸಾರಿದ್ದಾರೆ. ಈ ಕುರಿತಾಗಿ ಅವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. 

ಬೆಂಗಳೂರು (ಫೆ.20): ಸೋಷಿಯಲ್ ಮೀಡಿಯಾ ಶೂರರ ವಿರುದ್ದ ನಟ ಹಾಗೂ ರಾಜ್ಯಸಭಾ ಸಂಸದ ಜಗ್ಗೇಶ್‌ ಸಮರ ಸಾರಿದ್ದಾರೆ. ತಮ್ಮ ವಿರುದ್ದ ಅಪಪ್ರಚಾರ ಮಾಡೊ ಕಿಡಿಗೇಡಿಗಳ ವಿರುದ್ಧ ಜಗ್ಗೇಶ್ ಎಫ್‌ಐಅರ್‌ ದಾಖಲು ಮಾಡಿದ್ದಾರೆ. ಹುಲಿ ಉಗುರಿನ ವಿಚಾರವಾಗಿ ರಂಗನಾಯಕ ಸಿನಿಮಾ ಕಾರ್ಯಕ್ರಮದಲ್ಲಿ ಜಗ್ಗೇಶ್‌ ಮಾತನಾಡಿದ್ದರು. ಇಲ್ಲಿ ಮಾತನಾಡಿದ ವಿಚಾರವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಸಿನಿಮಾ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಗ್ಗೇಶ್‌, ವರ್ತೂರ್‌ ಸಂತೋಷ್‌ ಅವರಿಗೆ ಬಳಸಿದ ಭಾಷೆಯ ಕುರಿತಾಗಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ವರ್ತೂರು ಸಂತೋಷ್‌ ಕೂಡ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದರು. ಅದರೆ, ತಾವು ಗ್ರಾಮೀಣ ಭಾಷೆಯ ರೂಪದಲ್ಲಿ ಬಳಸಿದ ಪದವನ್ನು ಜಾತಿ ನಿಂದನೆಯ ರೂಪದಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ಜಗ್ಗೇಶ್‌ ದೂರು ನೀಡಿದ್ದಾರೆ.

ಜಗ್ಗೇಶ್‌ ನೀಡಿದ ದೂರಿನಲ್ಲಿ ಏನಿದೆ: ಫೆ.15 ರಂದು ಸಂಜೆ 6.30ಕ್ಕೆ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ರಂಗನಾಯಕ ಎಂಬ ನನ್ನ ಕನ್ನಡ ಚಿತ್ರದ ಮಾಧ್ಯಮ ಸಂವಾದ ಕಾರ್ಯಕ್ರಮವಿತ್ತು. ಈ ವೇಳೆ ಈ ಹಿಂದೆ ನನ್ನ ಹುಲಿ ಉಗುರಿನ ಬಗ್ಗೆ ಆದ ಘಟನೆಯನ್ನು ಮಾಧ್ಯಮದಲ್ಲಿ ತೋರಿಸಿದ್ದ ಬಗ್ಗೆ ಹಾಗೂ ಯಾರೋ ಒಬ್ಬ ಕಿತ್ತೋದವನು (ಇದು ಗ್ರಾಮೀಣ ಭಾಷೆ) ಸಿಕ್ಕಿದ ಪ್ರಯುಕ್ತ ಅಂದರೆ, ಈ ಹುಲಿ ಉಗುರಿನ ಘಟನೆಯಲ್ಲಿ ನೂರಾರು ಮಂದಿ ಸಮಸ್ಯೆ ಅನುಭವಿಸಿದ್ದಾರೆ ಎನ್ನುವ ಅರ್ಥದಲ್ಲಿ ಹಾಸ್ಯವಾಗಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದೆ. ಆದರೆ, ಇದನ್ನೀಗ ಕೆಟ್ಟ ಪ್ರಚಾರದ ಉದ್ದೇಶದಿಂದ ನನ್ನ ಸಂಪೂರ್ಣ ವಿಚಾರ ತಿರುಚಿ ಜಾತಿ ನಿಂದನೆ, ವ್ಯಕ್ತಿ ನಿಂದನೆ ಎಂದು ಪ್ರಚಾರ ಪಡೆದು ನನ್ನ ತೇಜೋವಧಗೆ ಕೆಲ ಕಿಡಿಗೇಡಿಗಳು ಯತ್ನಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಕೆಲವು ಪ್ರಚಾರ ಪ್ರಿಯರು ಇಂಥ ವಿಷಯ ಕಾಯುತ್ತಿರುತ್ತಾರೆ. ಇಂಥವರು ನನ್ನ ಸಿಕ್ಕಿಸಿ, ಜಾತಿ ನಿಂದನೆ ಎಂದಿದ್ದಲ್ಲದೆ, ಮನುಷ್ಯತ್ವದಲ್ಲೇ ಬಳಸದ ಕೆಟ್ಟ ಶಬ್ದ ಬಳಕೆ ಹಾಗೂ ವೈಕ್ತಿಕವಾಗಿ ಹಲ್ಲೆ, ಮನೆ ಮುತ್ತಿಗೆ, ಅವಾಚ್ಯ ಶಬ್ದ ಪ್ರಯೋಗ, ಮುಖಕ್ಕೆ ಮಸಿ ಬಳಿಯುವ ಬೆದರಿಕೆ ಒಡ್ಡಿದ್ದಾರೆ. ನಾನು ಯಾರ ಬಗ್ಗೆಯೂ ಅಥವಾ ಜಾತಿಬಗ್ಗೆ, ಅಥವಾ ವ್ಯಕ್ತಿಯ ಬಗ್ಗೆ ನಾನು ಮಾತನಾಡಿರುವುದಿಲ್ಲ. ಬದಲಾಗಿ ನನ್ನ ವೈಯಕ್ತಿಕ ಅನುಭವ ಮಾಧ್ಯಮದ ಮುಂದೆ ಹೇಳಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ. ಸಮಾಜ ಸ್ವಾಸ್ತ್ಯ, ಜಾತಿ ಗಲಭೆ, ತಪ್ಪು ಸಂದೇಶ, ಹಲ್ಲೆ ಬೆದರಿಕೆ ಮಾಡಿರುವ ಆನೇಕಲ್‌ ಹೆಬ್ಬಗೋಡಿಯ ನಾರಾಯಣಸ್ವಾಮಿ ಹಾಗೂ ಅವನ ಮಾತು ಅನುಸರಿಸಿ ವಿಡಿಯೋ ಮಾಡಿದ (ಹೆಸರು ಗೊತ್ತಿಲ್ಲ ವಿಡಿಯೋ ಸಾಕ್ಷಿ ಇದೆ) ಇವರುಗಳ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದು ಎಫ್‌ಐಆರ್‌ನಲ್ಲಿ ಬರೆದಿದ್ದಾರೆ.

ಹುಲಿ ಉಗುರು ಕೇಸ್‌ನಲ್ಲಿ ತಲೆ ತಗ್ಗಿಸದ ವರ್ತೂರ್‌, ವಿನಯ್‌ ಜೊತೆ ಸೇರಿ ಮೋಸದ ಆಟವಾಡಿ ತಲೆ ತಗ್ಗಿಸಿದ್ರು!

ಆಗಿದ್ದೇನು?: ಇತ್ತೀಚೆಗೆ ರಂಗನಾಯಕ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಜಗ್ಗೇಶ್‌, ವರ್ತೂರ್‌ ಸಂತೋಷ್‌ಗೆ ಕಿತ್ತೋದವನು ಎಂದು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಕಳೆದ ವರ್ಷ ಹುಲಿ ಉಗುರು ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿತ್ತು. ಬಿಗ್‌ ಬಾಸ್‌ ಶೋ ಕಾರ್ಯಕ್ರಮದಲ್ಲಿ ವರ್ತೂರ್‌ ಸಂತೋಷ್‌ ಕುತ್ತಿಗೆಯಲ್ಲಿ ಹುಲಿ ಉಗುರು ಕಾಣಿಸಿಕೊಂಡಿದ್ದೇ ತಡ, ಅರಣ್ಯ ಇಲಾಖೆ ಕಣಕ್ಕಿಳಿದ್ದು, ಹುಲಿ ಉಗುರು ಧರಿಸಿದ್ದ ವರ್ತೂರ್‌ ಅವರನ್ನು ನೇರವಾಗಿ ಬಿಗ್‌ ಬಾಸ್‌ ಮನೆಯಿಂದಲೇ ಬಂಧಿಸಿ ಜೈಲಿಗಟ್ಟಿದ್ದರು. ಆ ಬಳಿಕ ಹುಲಿಉಗುರು ಧರಿಸಿದ್ದ ಸೆಲೆಬ್ರಿಟಿಗಳನ್ನೂ ಹುಡುಕಿ ಇವರ ಬಂಧನ ಯಾವಾಗ ಎನ್ನುವ ಅಭಿಯಾನ ಆರಂಭವಾಗಿತ್ತು. ಈ ವೇಳೆ ಜಗ್ಗೇಶ್‌, ದರ್ಶನ್‌ ಸೇರಿ ಹಲವರ ಬಳಿಯಿದ್ದ ಹುಲಿ ಉಗುರನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಆ ಉಗುರಿನ ಬಗ್ಗೆ ಜಗ್ಗೇಶ್‌ ಮಾತಾಡಿರುವುದು ವಿವಾದಕ್ಕೆ ಕಾರಣವಾಗಿದೆ. 

ವರ್ತೂರು ಸಂತೋಷ್ ಔಟ್, ಸುತ್ತಾಡುತ್ತಿದೆ ಸುದ್ದಿ; ಗ್ರಾಂಡ್‌ ಫಿನಾಲೆ ಹೊಸ್ತಿಲಲ್ಲಿ ಎಡವಿಬಿದ್ರಾ ಸಂತು?!