ಲೋಕಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್‌ಗಳ ಸಮೀಕ್ಷೆಯಂತೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ನಟ ಅಹಿಂಸಾ ಚೇತನ್ ಹೇಳಿದ್ದಾರೆ.

ಕೊಡಗು (ಜೂ.03): ಲೋಕಸಭಾ ಚುನಾವಣೆಯ ಎಲ್ಲ ಹಂತಗಳ ಮತದಾನದ ಎಕ್ಸಿಟ್ ಫೋಲ್ ಫಲಿತಾಂಶಗಳು ಕೂಡ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತವನ್ನು ನೀಡಿವೆ. ಹೀಗಾಗಿ, ಕೇಂದ್ರದಲ್ಲಿ ಈ ಬಾರಿಯೂ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ನಟ ಅಹಿಂಸಾ ಚೇತನ್ ಭವಿಷ್ಯ ನುಡಿದಿದ್ದಾರೆ.

Add Asianetnews Kannada as a Preferred SourcegooglePreferred

ಮಡಿಕೇರಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮತ್ತೊಮ್ಮೆ ಎನ್ ಡಿಎ ಸರಕಾರ ಬರುತ್ತದೆ. ಎಲ್ಲಾ ಎಕ್ಸಿಟ್ ಪೂಲ್ ವರದಿ ಒಂದೇ ರೀತಿ ಇವೆ. ಆದ್ದರಿಂದ ಎಲ್ಲರೂ ಇದನ್ನು ಒಪ್ಪಬೇಕಾಗುತ್ತೆ ಎನಿಸುತ್ತದೆ. ಹಾಗಂತ ಎಕ್ಸಿಟ್ ಪೋಲ್ ವರದಿಗಳು ಸತ್ಯ ಅಂತ ಹೇಳುತ್ತಿಲ್ಲ. ಆದರೆ ಎಲ್ಲಾ ವರದಿಗಳು ಒಂದೇ ರೀತಿ ಇರುವುದರಿಂದ ಈ ಬಾರಿಯೂ ಮತ್ತೆ ಮೋದಿ‌ ಸರಕಾರ ಬರುತ್ತದೆ. ಆದರೆ, ಮೋದಿಯವರ ಅಲೆ ಕಡಿಮೆ ಆಗಿದೆ ಎನ್ನುವುದು ಸತ್ಯ. ಮತದಾನ ನಡೆದಿರುವುದರಲ್ಲಿ ಬಿಜೆಪಿ ಹೆಚ್ಚು ಓಟ್ ಪಡೆಯಬಹುದು ಎಂದು ಹೇಳಿದರು. 

ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತೆ ಎಂಬ ಬಿಜೆಪಿಯೇತರರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಇದು ಬಿಜೆಪಿ ವಿರೋಧಿ ಪಕ್ಷಗಳು ತಮ್ಮ ಅಸ್ಥಿತ್ವಕ್ಕಾಗಿ ಬಿಜೆಪಿ ಗುಮ್ಮವನ್ನು ತೋರಿಸುತ್ತಾರೆ. ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತೆ ಎಂಬುದನ್ನು ನಾನು ಒಪ್ಪಲ್ಲ. ಬಿಜೆಪಿಯನ್ನು ಸೈದ್ಧಾಂತಿಕವಾಗಿ ನಾನು ಒಪ್ಪುವುದಿಲ್ಲ. ಅವರು ಮಾಡಿರುವ ಸಿಎಎ, ಒನ್ ನೇಷನ್ ಒನ್ ಎಲೆಕ್ಷನ್ ಒಪ್ಪಲ್ಲ. ಅವರು ಮಾಡಿರುವ ಜಿಎಸ್ ಟಿ, ನೋಟ್ ಬ್ಯಾನ್ ನಿಂದ ದೇಶಕ್ಕೆ ಒಳ್ಳೆಯದಾಗಿಲ್ಲ. ಬಿಜೆಪಿ ಮೂಲ ಸಂವಿಧಾನವನ್ನು ಬದಲಾಯಿಸುತ್ತೆ ಎನ್ನುವುದನ್ನು ನಾನು ಒಪ್ಪುವುದಿಲ್ಲ ಎಂದರು.

ಬೆಂಗಳೂರು ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ನಟಿ ಹೇಮಾ ಬಂಧನ; ಬುರ್ಖಾ ಧರಿಸಿ ಬಂದರೂ ಬಿಡದ ಸಿಸಿಬಿ ಪೊಲೀಸರು

ಕಾಂಗ್ರೆಸ್ ಕೂಡ ಸಂವಿಧಾನ ವಿರೋಧಿ:
ಬಿಜೆಪಿ ಎಷ್ಟೋ ವಿಚಾರದಲ್ಲಿ ಸಂವಿಧಾನ ವಿರೋಧಿ ಇದೆ. ಅದೇ ರೀತಿ ಕಾಂಗ್ರೆಸ್ ಕೂಡ ಎಷ್ಟೋ ವಿಚಾರದಲ್ಲಿ ಸಂವಿಧಾನ ವಿರೋಧಿ ಇದೆ. ಸಂವಿಧಾನ ಉಳಿಸುತ್ತಿರುವವರು ನಮ್ಮ ಸಮಾನತಾವಾದಿಗಳು. ಸಂವಿಧಾನ ಹೈಜಾಕ್ ಮಾಡುವುದಕ್ಕೆ ಕಾಂಗ್ರೆಸ್ ಗೆ ಯಾವುದೇ ನೈತಿಕ ಹಕ್ಕಿಲ್ಲ. ಸಂವಿಧಾನ ಬದಲಾವಣೆ ಹಿಂದುತ್ವದ ರೀತಿ ಬೇಕಾಗಿಲ್ಲ. ಕಾಂಗ್ರೆಸ್ ರೀತಿ ಸಂವಿಧಾನ ಹಾಗೆ ಇಟ್ಟುಕೊಂಡು ದುರ್ಬಳಕೆ ಸರಿಯಲ್ಲ. ಅಂಬೇಡ್ಕರ್ ವಾದದ ಮೂಲಕ ಸಂವಿಧಾನವನ್ನು ಉತ್ತಮಗೊಳಿಸಬೇಕು. ದೇಶದಲ್ಲಿ ಇನ್ನಷ್ಟು ಸಮಾನತೆ ಹಾಗೂ ಬಡವರ ಪರ ಸಂವಿಧಾನ ಮಾಡಬೇಕಾಗಿದೆ. ಸಂವಿಧಾನ ಪೀಠಿಕೆಯ ತತ್ವಗಳನ್ನು ಯಾವ ಪಕ್ಷಗಳು ಉಳಿಸುತ್ತಿಲ್ಲ ಎಂದು ನಟ ಚೇತನ್ ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ಮೀಸಲಾತಿ ವಿರೋಧಿ ಎನ್ನುತ್ತಾರೆ. ಆದರೆ, ಎಸ್ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೆ ಬಿಜೆಪಿ ನಾಯಕರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಒಳಮೀಸಲಾತಿಗೆ ಆಯೋಗ ರಚಿಸಿದರು. ಈಗಿನ ಸರಕಾರ ಎಲ್ಲಾವನ್ನು ಕಾರ್ಯರೂಪಕ್ಕೆ ತರಬೇಕು. ಜಾತಿ ಜನಗಣತಿ ಹೊರಗೆ ಬರಬೇಕು. ಸಿದ್ದರಾಮಯ್ಯ ಇದರಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಲಿಂಗಾಯತ, ಒಕ್ಕಲಿಗರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಸಿಎಂ ಎಸ್ಟಿ ಒಳ ಮೀಸಲಾತಿಗೆ ಕಮಿಷನ್ ರಚನೆ ಮಾಡಬೇಕು. ಈ ಮೂಲಕ ಎಸ್‌ಟಿ ಪಂಗಡದ 49 ಸಮುದಾಯಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿ ಬೆನ್ನು ಹತ್ತಿದ ಸಿಎಂ ಸೋಮಾರಿ: ನಟ ಚೇತನ್‌

ವಾಲ್ಮೀಕಿ ನಿಗಮದ ಹಗರಣ ಆರೋಪಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು: ವಾಲ್ಮೀಕಿ ಅಭಿವೃದ್ಧಿ ನಿಮಗದಲ್ಲಿ 187 ಕೋಟಿ ಹಗರಣದ ಆರೋಪ ಹೊತ್ತಿರುವ ಸಚಿವ ನಾಗೇಂದ್ರ ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿ ವ್ಯವಹಾರದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ವಾಲ್ಮೀಕಿ ಅಭಿವೃದ್ಧಿ ಇಲಾಖೆ ಸಚಿವರಾಗಲು ಏನು ಯೋಗ್ಯತೆ ಇದೆ? ಅವರು ತಪ್ಪಿತಸ್ಥರಿಲ್ಲದಿದ್ದರೆ ವಿಚಾರಣೆ ಎದುರಿಸಲು, ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಗುವವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮುಖ್ಯಮಂತ್ರಿ ಸೂಚನೆಗೆ ಮೊದಲೇ ಸಚಿವರು ರಾಜೀನಾಮೆ ಕೊಡಬೇಕು. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಬೇಕು. ಭ್ರಷ್ಟಾಚಾರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಏನು ಕಡಿಮೆಯಿಲ್ಲ. ಪ್ರಕರಣವನ್ನು ಸಿಬಿಐ ಗೆ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.